ಬಂಟ್ವಾಳ: ಬಸ್ - ಕಾರು ಢಿಕ್ಕಿ; ಇಬ್ಬರಿಗೆ ಗಾಯ
ಬಂಟ್ವಾಳ, ಆ. 8: ಕಾರೊಂದು ಖಾಸಗಿ ಬಸ್ಸಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಮಾಣಿ ಮೈಸೂರು ರಸ್ತೆಯ ನೇರಳಕಟ್ಟೆ ಸಮೀಪದ ಗಣೇಶನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.
ಸುಳ್ಯ ತಾಲೂಕಿನ ಪಂಜ ನಿವಾಸಿ ಚಂದ್ರಹಾಸ ಹಾಗೂ ಕಾರು ಚಲಾಯಿಸುತ್ತಿದ್ದ ಅವರ ಪುತ್ರ ಅಜಿತ್ ಗಾಯಗೊಂಡವರು ಎಂದು ತಿಳಿದುಬಂದಿದೆ.
ಘಟನೆ ವಿವರ: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಹಾಸ ಅವರು ಇಂದು ಆಸ್ಪತ್ರೆಯಿಂದ ಡಿರ್ಸ್ಜಾಜ್ ಆಗಿ ಪುತ್ರ ಅಜಿತ್ ಜೊತೆ ಆಲ್ಟೋ ಕಾರಿನಲ್ಲಿ ಪಂಜ ಕಡೆಗೆ ತೆರಳುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ.
ಗಣೇಶ ನಗರ ಬಸ್ ನಿಲ್ದಾಣನಲ್ಲಿ ಪ್ರಯಾಣಿಕರನ್ನು ಇಳಿಸುವ ಸಲುವಾಗಿ ಖಾಸಗಿ ಬಸ್ ನಿಲುಗಡೆಯಾಗಿತ್ತು. ಈ ಸಂದರ್ಭ ಹಿಂದಿನಿಂದ ಬಂದ ಆಲ್ಟೋ ಕಾರು ಬಸ್ಗೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಯ ತೀವ್ರತೆಗೆ ಚಂದ್ರಹಾಸ ಅವರಿಗೆ ತೀವ್ರತರದ ಗಾಯಗಳಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರು ಚಲಾಯಿಸುತ್ತಿದ್ದ ಅಜಿತ್ ಅವರಿಗೂ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.