ಮಿಥುನ್ ರೈ ಬೆಂಬಲಿಗರಿಂದ ನನ್ನ ಮೇಲೆ ಹಲ್ಲೆ: ಇಂಟಕ್ ನಾಯಕ ಪುನೀತ್ ಶೆಟ್ಟಿ ಆರೋಪ
ಮಂಗಳೂರಿನಲ್ಲಿ ನಡೆದ ಘಟನೆ
ಮಂಗಳೂರು, ಆ.9: ದ.ಕ. ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಬೆಂಬಲಿಗರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂಟಕ್ ನಾಯಕ ಪುನೀತ್ ಶೆಟ್ಟಿ ಆರೋಪಿಸಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ಇಂದು ಕ್ವಿಟ್ ಇಂಡಿಯಾ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ನಡೆಯುತ್ತಿದ್ದಂತೆ ವೇದಿಕೆ ಮುಂಭಾಗ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಬೆಂಬಲಿಗರು ತನಗೆ ಹಲ್ಲೆ ನಡೆಸಿ, ಚೈನ್ ಕಿತ್ತುಕೊಂಡಿದ್ದಾರೆ ಎಂದು ಪುನೀತ್ ಶೆಟ್ಟಿ ಆರೋಪಿಸಿದ್ದಾರೆ.
“ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಬೆಂಬಲಿಗರಿಂದ ನನ್ನ ಮೇಲೆ ಹಲ್ಲೆ ನಡೆದಿದೆ. ನಾನು ಇಂಟಕ್ ಅಧ್ಯಕ್ಷನಾಗಿದ್ದು, ಸಮಾಜಸೇವೆ ಮಾಡುತ್ತಿದ್ದೇನೆ. ಮಿಥುನ್ ರೈ 10 ದಿನಗಳ ಹಿಂದೆ ನನ್ನ ಮೇಲೆ ನಕಲಿ ದೂರು ನೀಡಿದ್ದಾನೆ. ಅವಿನಾಶ್, ಗಿರೀಶ್ ಆಳ್ವ ಮೊದಲಾದವರು ಗೂಂಡಾಗಳಂತೆ ವರ್ತಿಸಿ ನನಗೆ ಹಲ್ಲೆ ನಡೆಸಿದ್ದಾರೆ. ನನ್ನ ಚೈನ್ ತೆಗೆದಿದ್ದಾರೆ. ಮಿಥುನ್ ರೈ ಮೇಲೆ 3 ಕೇಸ್ ಗಳಿವೆ. ಆದರೆ ಆತನಿಗೆ ಗನ್ ಕೊಟ್ಟಿದ್ದಾರೆ. ಗನ್ ಮ್ಯಾನ್ ಕೊಟ್ಟಿದ್ದಾರೆ. ಬರ್ಕೆ ವ್ಯಾಪ್ತಿಯಲ್ಲಿ ಆತನ ಮೇಲೆ ಕಂಪ್ಲೇಂಟ್ ಇದೆ” ಎಂದು ಪುನೀತ್ ಶೆಟ್ಟಿ ಆರೋಪಿಸಿದ್ದಾರೆ.