ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಏಕಾಏಕಿ ಏರಿಕೆ
ಬಂಟ್ವಾಳ, ಆ. 9: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಕ್ಷೀಣಿಸಿದ್ದರೂ ಬುಧವಾರ ರಾತ್ರಿಯಿಂದಲೇ ನೇತ್ರಾವತಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.
ತಡ ರಾತ್ರಿ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 7.6 ಮೀಟರ್ ತಲುಪಿದೆ. ನೀರಿನ ಮಟ್ಟ ಏರುತ್ತಿರುವ ಹಿನ್ನಲೆಯಲ್ಲಿ ರಾತ್ರಿಯೇ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಬಿಮೂಡ ಗ್ರಾಮದ ಗ್ರಾಮಕರಣಿಕ ಶಿವಾನಂದ ನಾಟೆಕಾರ್ ಅವರು ನದಿ ತೀರಕ್ಕೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ನದಿ ನೀರಿನ ಮಟ್ಟದಲ್ಲಿ ಏಕಾಏಕಿ ಏರಿಕೆ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಅಗ್ನಿಶಾಮಕ ಹಾಗೂ ಗೃಹರಕ್ಷಕ ಸಿಬ್ಬಂದಿಗಳಿಗೆ ಎಲರ್ಟ್ ಆಗಿರುವಂತೆ ಸೂಚಿಸಲಾಗಿದೆ. ತುಂಬೆ ಡ್ಯಾಮಿನ ಗೇಟ್ ತೆರೆಯಲು ಸೂಚಿಸಿದ್ದು, ಗೇಟ್ ತೆರೆದು ನೀರು ಹೊರಕ್ಕೆ ಬಿಡಲಾಗುತ್ತಿದೆ. ಸದ್ಯ ನೀರಿನ ಮಟ್ಟ ಇಳಿಮುಖವಾಗುತ್ತಿದ್ದು, ಅಪಾಯದ ಮುನ್ಸೂಚನೆ ಕಂಡು ಬರುತಿಲ್ಲ ಎಂದಿದ್ದಾರೆ. 8.5 ಮೀಟರ್ ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ ಎಂದು ಪರಿಗಣಿಸಲಾಗುತ್ತಿದೆ.