ಗಂಡಿಬಾಗಿಲು ಸಮೀಪ ಭೂ ಕುಸಿತ: ನೀರಿನಲ್ಲಿ ಕೊಚ್ಚಿ ಹೋದ ನೂರಾರು ರಬ್ಬರ್ ಮರಗಳು
ಬೆಳ್ತಂಗಡಿ, ಆ. 9: ನೆರಿಯ ಗ್ರಾಮದ ಗಂಡಿಬಾಗಿಲು ಸಮೀಪ ಭಾರೀ ಭೂ ಕುಸಿತ ಉಂಟಾಗಿದ್ದು, ಬೆಟ್ಟ ಜರಿದು, ನೀರು ಉಕ್ಕಿ ಹರಿದ ಪರಿಣಾಮ ಹೊಸ ತೊರೆಯೇ ಸೃಷ್ಟಿಯಾಗಿ ನೂರಾರು ರಬ್ಬರ್ ಮರಗಳು ಕೊಚ್ಚಿ ಹೋಗಿದ್ದು, ಎರಡು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ಸ್ಥಳೀಯ ನಿವಾಸಿ ರೆನ್ನಿ ಎಂಬವರ ಮನೆ ಕೊಚ್ಚಿ ಹೋಗಿದ್ದು, ಮನೆಯವರು ನೀರಿನ ಅಬ್ಬರದ ಸದ್ದಿಗೆ ಹೊರಗೋಡಿ ಅಪಾಯದಿಂದ ಪಾರಾಗಿದ್ದಾರೆ. ಇಂದು ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಮನೆಯಲ್ಲಿದ್ದ ರೆನ್ನಿ ಒತ್ನಿ ಹಾಗೂ ಇಬ್ಬರು ಮಕ್ಕಳು ಹೊರಗೋಡಿದ್ದಾರೆ. ಮನೆಯಲ್ಲಿಯೇ ಮಲಗಿದ್ದ ಎಪ್ಪತ್ತು ವರ್ಷ ಪ್ರಾಯದ ಏಲಿಯಾಮ್ಮ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಅವರು ಮಲಗಿದ್ದ ಕೊಠಡಿಯ ಗೋಡೆಯನ್ನು ಕಿತ್ತುಕೊಂಡು ನೀರು ಹೋಗಿದ್ದು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಇವರ ತೋಟದ ಹತ್ತಾರು ರಬ್ಬರ್ ಗಿಡಗಳನ್ನೂ ನೀರು ಕೊಚ್ಚಿಕೊಂಡು ಹೋಗಿದೆ. ಅಲ್ಲಿಯೇ ಕೆಳಗೆ ಇದ್ದ ಜೋಸೆಫ್ ಎಂಬವರ ತೋಟದ ಮೂಲಕ ನೀರು ನುಗ್ಗಿದ್ದು ಅವರ ಕೆರೆ ಸಂಪೂರ್ಣ ಮುಚ್ಚಿ ಹೋಗಿದ್ದು, ಸುಮಾರು ನೂರಕ್ಕೂ ಹೆಚ್ಚು ಅಡಿಕೆ ಮರಗಳು ಕೊಚ್ಚಿ ಹೋಗಿವೆ.
ಭಾರೀ ಶಬ್ದದೊಂದಿಗೆ ಇಡೀ ಗುಡ್ಡವೇ ಕುಸಿದು ಬಂದಿದ್ದು ಹೊಸ ತೋಡೊಂದು ನಿರ್ಮಾಣಗೊಂಡಿದೆ. ಅಲ್ಲಿ ಈಗಲೂ ನೀರು ಹರಿಯುತ್ತಿದ್ದು, ಭಾರೀ ಗಾತ್ರದ ಕಲ್ಲುಗಳು, ಮಣ್ಣು ಕೊಚ್ಚಿಕೊಂಡು ಹೋಗುತ್ತಿವೆ. ಕೆಲ ವರ್ಷಗಳ ಹಿಂದೆ ನೆರಿಯ ಗ್ರಾಮದಲ್ಲಿ ಇದೇ ರೀತಿಯ ಭೂ ಕುಸಿತ ಸಂಭವಿಸಿ ಎರಡು ಮನೆಗಳು ಕೊಚ್ಚಿಕೊಂಡು ಹೋಗಿದ್ದವು.