ಉಡುಪಿ: 3 ಸುತ್ತುಗಳಲ್ಲಿ ‘ವಿುಷನ್ ಇಂದ್ರಧನುಷ್’ ಕಾರ್ಯಕ್ರಮ
ಉಡುಪಿ, ಆ.9: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮುಂದುವರಿದ ಗ್ರಾಮ ಸ್ವರಾಜ್ ಅಭಿಯಾನದಡಿ ‘ಮಿಷನ್ ಇಂದ್ರಧನುಷ್’ ಜಿಲ್ಲಾ ಮಟ್ಟದ ಕಾರ್ಯಕ್ರಮದ ಉದ್ಘಾಟನೆ ಆ.13ರಂದು ಬೆಳಗ್ಗೆ 9 ಗಂಟೆಗೆ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾಂಕೇತಿಕವಾಗಿ ನಡೆಯಲಿದೆ.
ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಉದ್ಘಾಟಸಲಿದ್ದು, ಅಧ್ಯಕ್ಷತೆಯನ್ನು ಉಡುಪಿ ಶಾಸಕ ರಘುಪತಿ ಭಟ್ ವಹಿಸಲಿದ್ದಾರೆ. ಗ್ರಾಮ ಸ್ವರಾಜ್ಯ ಅಭಿಯಾನದಡಿಯಲ್ಲಿ ‘ಮಿಷನ್ ಇಂದ್ರಧನುಷ್’ ಕಾರ್ಯಕ್ರಮ ರಾಜ್ಯಾದ್ಯಂತ ಮೂರು ಸುತ್ತುಗಳಲ್ಲಿ ನಡೆಯಲಿದೆ.
ಆ.13,14,17 ಮತ್ತು 18ರಂದು ಮೊದಲ ಸುತ್ತು, ಸೆ.10,11,14 ಮತ್ತು 15ರಂದು ಎರಡನೇ ಸುತ್ತು ಹಾಗೂ ಅಕ್ಟೋಬರ್ 9,10,12 ಮತ್ತು 15ರಂದು ಮೂರನೇ ಸುತ್ತಿನ ಕಾರ್ಯಕ್ರಮಗಳು ನಡೆಯಲಿವೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ಕೂಡ ಗ್ರಾಮ ಸ್ವರಾಜ್ಯ ಅಭಿಯಾನ ಕಾರ್ಯ್ರಮವನ್ನು ಹಮ್ಮಿ ಕೊಳ್ಳಲಾಗಿದೆ.
ಮಿಷನ್ ಇಂದ್ರಧನುಷ್: ಕಾರ್ಯಕ್ರಮದಲ್ಲಿ ಲಸಿಕಾ ವಂಚಿತ ಹಾಗೂ ಅಪೂರ್ಣ ಲಸಿಕೆ ಪಡೆದ ತಾಯಿ ಮತ್ತು ಮಕ್ಕಳಿಗೆ ಲಸಿಕೆ ನೀಡಲಾಗುವುದು. 2 ವರ್ಷದ ಒಳಗಿನ ಮಕ್ಕಳು, ಗರ್ಭಿಣಿ ತಾಯಂದಿರು, 5-6 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳು ಈ ಕಾರ್ಯಕ್ರಮದ ಫಲಾನುಭವಿ ಗಳಾಗಿರುತ್ತಾರೆ.
ಈಗಾಗಲೇ ಮನೆ ಸಮೀಕ್ಷೆ ನಡೆಸಿ ಫಲಾನುಭವಿಗಳ ಪಟ್ಟಿ ಮಾಡಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಕ್ರಿಯಾಯೋಜನೆ ಪ್ರಕಾರ ಫಲಾನುಭವಿ ಗಳು ಇರುವಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಗರ್ಭಿಣಿ ಸ್ತ್ರೀಯರಿಗೆ ಧನುರ್ವಾಯು ನಿರೋಧಕ ಟಿ.ಟಿ ಲಸಿಕೆ, 0-2 ವರ್ಷದ ಮಕ್ಕಳಲ್ಲಿ ಬಾಲ ಕ್ಷಯ ನಿರೋಧಕ ಬಿಸಿಜಿ ಲಸಿಕೆ, ಪೋಲಿಯೋ ನಿರೋಧಕ ಪೋಲಿಯೋ ಹನಿ ಹಾಗೂ ಢಿಫ್ತೀರಿಯ, ಧನುರ್ವಾಯು, ನಾಯಿಕೆಮ್ಮು, ಹೆಪಟೈಟಿಸ್- ಬಿ, ಹಿಮೋಫಿಲಸ್ ಇನ್ಪ್ಲೂಯೆಂಜ-ಬಿ ಈ ಐದು ಕಾಯಿಲೆ ನಿರೋಧಕ ಪೆಂಟಾವಲೆಂಟ್ಲಸಿಕೆ ಮತ್ತು ದಡಾರ-ರುಬೆಲ್ಲಾ ನಿರೋಧಕ ದಡಾರ-ರುಬೆಲ್ಲಾ ಲಸಿಕೆ ನೀಡಲಾಗುತ್ತದೆ.
ಶಾಲೆಯಿಂದ ಹೊರಗುಳಿದ 5ರಿಂದ 6 ವರ್ಷದೊಳಗಿನ ಮಕ್ಕಳು ಇದ್ದಲ್ಲಿ ಡಿಪಿಟಿ ವರ್ಧಕ ವರಸೆಯನ್ನು ನೀಡಲಾಗುತ್ತದೆ. ಗ್ರಾಮ ಸ್ವರಾಜ್ಯ ಅಭಿಯಾನ ಕಾರ್ಯಕ್ರಮದ ಮೊದಲ ಸುತ್ತಿನಲ್ಲಿ 800 ಗರ್ಭಿಣಿಯರು, 0-2 ವರ್ಷ ದೊಳಗಿನ 3213 ಮಕ್ಕಳು ಹಾಗೂ 5-6 ವರ್ಷದೊಳಗಿನ 53 ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ.
ಗರ್ಭಿಣಿಯರ ಪರೀಕ್ಷೆಯಲ್ಲಿ ರಕ್ತಹೀನತೆವನ್ನು ಪತ್ತೆ ಹಚ್ಚುವುದು, ಅವರಿಗೆ ಅಗತ್ಯವಾಗಿರುವ ಕಬ್ಬಿಣಾಂಶ ಗುಳಿಗೆ ಮತ್ತು ತೀವ್ರತರ ರಕ್ತಹೀನತೆಯಿಂದ ಬಳಲುತಿದ್ದಲ್ಲಿ ಐರನ್ ಸುಕ್ರೋಸ್ ಚುಚ್ಚುಮದ್ದನ್ನು ನೀಡಲಾಗುವುದು. ಅಲ್ಲದೇ ಬಿಟ್ಟು ಹೋಗಿರುವ ಗರ್ಭಿಣಿಯರನ್ನು ಪತ್ತೆ ಹಚ್ಚಿ ಕಡ್ಡಾಯವಾಗಿ ಹೆಚ್ಐವಿ/ಏಡ್ಸ್ ಪರೀಕ್ಷೆಯನ್ನು ನಡೆಸುವ ಕಾರ್ಯ ಸಹ ನಡೆಯಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.