ದೇಶಕ್ಕಾಗಿ ಹೋರಾಡಿದವರ ಟೀಕೆ ಸಲ್ಲದು: ರಮಾನಾಥ ರೈ
76ನೇ ಕ್ವಿಟ್ ಇಂಡಿಯಾ ದಿನಾಚರಣೆ
ಮಂಗಳೂರು, ಆ.9: ಕಾಂಗ್ರೆಸ್ನ್ನು ಟೀಕೆ ಮಾಡುವ ಭರದಲ್ಲಿ ದೇಶದ ಸ್ವಾತಂತ್ರಕ್ಕಾಗಿ ಹಲವಾರು ವರ್ಷಗಳ ಕಾಲ ಹೋರಾಡಿ, ಜೈಲಿಗೆ ಹೋಗಿದ್ದ ಜವಾಹರಲಾಲ್ ನೆಹರೂ ಅವರಂತಹ ನಾಯಕರನ್ನು ಟೀಕಿಸುತ್ತಿರುವುದು ಸಲ್ಲದು ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ನಗರದ ಪುರಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ 76ನೇ ವರ್ಷದ ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ವರ್ತಮಾನದ ಪೀಳಿಗೆಗೆ ಸ್ವಾತಂತ್ರ ಸಂಗ್ರಾಮ ಇತಿಹಾಸದ ಪರಿಚಯದ ಕೊರತೆಯಿದೆ. ಅದನ್ನು ನೈಜವಾಗಿ ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು. ಇತ್ತೀಚೆಗೆ ಇತಿಹಾಸವನ್ನು ತಿರುಚುವ ಕೆಲಸವನ್ನು ಮಾಡಲಾಗುತ್ತಿದೆ. ನೈಜ ಇತಿಹಾಸವನ್ನು ಮೆಲುಕು ಹಾಕುವ ಅಗತ್ಯತೆ ಇಂದಿನ ದಿನಗಳಲ್ಲಿ ಎದುರಾಗಿದೆ ಎಂದು ಹೇಳಿದರು.
ಮಹಾತ್ಮಾ ಗಾಂಧೀಜಿ ವಿದ್ಯಾರ್ಥಿ ಜೀವನದಲ್ಲೇ ದಬ್ಬಾಳಿಕೆಯನ್ನು ವಿರೋಧಿಸಲು ಪ್ರಾರಂಭಿಸಿದ್ದರು. ಆಫ್ರಿಕಾದಲ್ಲಿ ಬಿಳಿಯರಿಂದ ಕರಿಯರ ಮೇಲ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಿದರು. ಸ್ವಾತಂತ್ರಕ್ಕಾಗಿ ಮೋತಿಲಾಲ್ ನೆಹರೂ ಹೋರಾಟ ಮಾಡುತ್ತಿದ್ದ ವೇಳೆಯೇ ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು ಎಂದರು.
ಅಂದಿನ ದಿನಗಳಲ್ಲಿ ನಡೆದಿದ್ದು ಜಾತ್ಯತೀತ ಸ್ವಾತಂತ್ರ ಚಳವಳಿಯಾಗಿದೆ. ಎಲ್ಲ ವರ್ಗಗಳ, ಜಾತಿಗಳ ಜನರನ್ನು ಒಟ್ಟುಗೂಡಿಸಿಕೊಂಡು ಸ್ವಾತಂತ್ರ ಚಳವಳಿ ಕೈಗೊಂಡಿದ್ದರು. ಅಂಬೇಡ್ಕರ್ ರಚಿಸಿರುವ ಸಂವಿಧಾನ, ಪ್ರಜಾಪ್ರಭುತ್ವವನ್ನು ಪ್ರಸ್ತುತ ದಿನಗಳಲ್ಲಿ ಉಳಿಸಿ ಕಟ್ಟುವ ಕೆಲಸವಾಗಬೇಕು. ಮುಂದಿನ ಭಾರತ ಸುಂದರ, ಬಲಿಷ್ಠ, ಸಾಮರಸ್ಯ ಹೊಂದಿದ ರಾಷ್ಟ್ರವಾಗಬೇಕು. ಭಾವೈಕ್ಯತೆಯಿಂದ ದೇಶವನ್ನು ಉಳಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಪ್ರಚಾರದ ಅಬ್ಬರದಲ್ಲಿ ರಸ್ತೆ ಬದಿಯಲ್ಲಿ ನಿಂತು ಘೋಷಣೆ ಕೂಗುವುದು ದೇಶಪ್ರೇಮವಾಗುತ್ತಿದೆ. ಯಾವುದೋ ಕಾರಣಕ್ಕೆ ಸತ್ತವರನ್ನು ಹುತಾತ್ಮ ರನ್ನಾಗಿಸಲಾಗುತ್ತಿದೆ. ದೇಶ ಅಧೋಗತಿಯತ್ತ ಸಾಗುತ್ತಿದೆ. ಅಂದು ನೆಹರೂ ಸರ್ವಾಧಿಕಾರಿ ಪ್ರಧಾನಿಯಾಗಿರಲಿಲ್ಲ. ಸ್ವಾತಂತ್ರ ಹೋರಾಟಗಾರರ ತ್ಯಾಗ ವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.
ಕೇಂದ್ರ ಸರಕಾರದಿಂದ ಕೇವಲ ಯೋಜನೆಗಳ ಕುರಿತು ಘೋಷಣೆಗಳನ್ನು ಹೊರಡಿಸುತ್ತಿದ್ದರೆಯೇ ವಿನಃ ಯಾವುದೇ ಕಾರ್ಯಗಳನ್ನು ಅನುಷ್ಠಾಣ ಗೊಳಿಸುತ್ತಿಲ್ಲ. ಲೋಕಪಾಲ ಜಾರಿಗೆ ತರುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದವರ ರಾಜ್ಯದಲ್ಲಿಯೇ ಲೋಕಾಯುಕ್ತ ಇಲ್ಲ. ಬಿಜೆಪಿಯು ಬಂಡವಾಳಶಾಹಿಗಳ ಜನತಾ ಪಕ್ಷವಾಗಿದೆ ಎಂದು ಅವರು ಟೀಕಿಸಿದರು.
ಮಹಾತ್ಮಾ ಗಾಂಧೀಜಿ ಸೇವೆಯನ್ನು ಗೌಣ ಮಾಡಲಾಗುತ್ತಿದೆ. ಇಂದಿರಾ ಗಾಂಧಿ ಕೂಡ ಜನರ ಬೆಂಬಲದಿಂದ ಪ್ರಧಾನಿಯಾದ್ದರೇ ವಿನಃ ಆನುವಂಶೀಯವಲ್ಲ ಎಂದರು. ಕಾರ್ಯಕ್ರಮಕ್ಕೂ ಮೊದಲು ನಗರದ ಬಾವುಟಗುಡ್ಡೆಯಿಂದ ಪುರಭವನದವರೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ರ್ಯಾಲಿ ನಡೆಸಿ, ಘೋಷಣೆಗಳನ್ನು ಕೂಗಿದರು.
ಕಾರ್ಯಕ್ರಮದಲ್ಲಿ ಪ್ರೊ.ಬಿ.ಶಿವರಾಮ್ ಶೆಟ್ಟಿ ಸ್ವಾತಂತ್ರ ಸಂಗ್ರಾಮದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯಿದಿನ್ ಬಾವ, ವಕ್ಫ್ ಜಿಲ್ಲಾಧ್ಯಕ್ಷ ಯು.ಕೆ.ಮೋನು, ಮೇಯರ್ ಭಾಸ್ಕರ್, ಉಪಮೇಯರ್ ಮುಹಮ್ಮದ್, ಕಾಂಗ್ರೆಸ್ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಬಿ.ಎಚ್.ಖಾದರ್, ಧನಂಜಯ, ಮಿಥುನ್ ರೈ, ಕರೀಮ್, ವೆಂಕಪ್ಪಗೌಡ ಮತ್ತಿತರರು ಉಪಸ್ಥತರಿದ್ದರು. ಹರೀಶಕುಮಾರ್ ಸ್ವಾಗತಿಸಿದರು. ಮನಪಾ ಸಚೇತಕ ಶಶಿಧರ್ ಹೆಗಡೆ ನಿರೂಪಿಸಿದರು.