ಆ. 12ರಂದು ಗೃಹ ಭಾಗ್ಯ ಸಮರ್ಪಣೆ-ಆಟಿ ಕಲಾ ಕ್ರೀಡೋತ್ಸವ ವೈಭವ
ಬಂಟರ ಸಂಘ ಫರಂಗಿಪೇಟೆ ವಲಯ
ಬಂಟ್ವಾಳ, ಆ. 9: ಬಂಟರ ಸಂಘ ಫರಂಗಿಪೇಟೆ ವಲಯ ವತಿಯಿಂದ ಗೃಹ ಭಾಗ್ಯ ಸಮರ್ಪಣೆ ಮತ್ತು ಆಟಿ ಕಲಾ ಕ್ರೀಡೋತ್ಸವ ವೈಭವ ಆ. 12ರಂದು ಬೆಳಿಗ್ಗೆ 9.30ಕ್ಕೆ ಫರಂಗಿಪೇಟೆಯ ಸೇವಾಂಜಲಿ ಸಭಾಭವನದಲ್ಲಿ ನಡೆಯಲಿದೆ ಎಂದು ಬಂಟರ ಸಂಘ ಫರಂಗಿಪೇಟೆ ವಲಯದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ಹೇಳಿದ್ದಾರೆ.
ಗುರುವಾರ ಫರಂಗಿಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟರ ಸಂಘದ ತಾಲೂಕು ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆ ವಹಿಸಲಿದ್ದು, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಸಭಾ ಕಾರ್ಯಕ್ರಮವನ್ನು ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಆಟಿ ಕಲಾ ಕ್ರೀಡೋತ್ಸವವನ್ನು ಉದ್ಘಾಟಿಸುವರು. ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ರಾಜೇಶ್ ನಾಯ್ಕೆ ಉಳಿಪ್ಪಾಡಿಗುತ್ತು, ಡಾ.ಭರತ್ ಶೆಟ್ಟಿ ಹಾಗೂ ಸಂಘದ ವಿವಿಧ ಘಟಕಗಳ ಮುಖಂಡರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು, ಡಾ.ಭರತ್ ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕತಿಕ ಕಾರ್ಯಕ್ರಮ ಹಾಗೂ ಕ್ರೀಡೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಂಟರ ಸಂಘ ಫರಂಗಿಪೇಟೆ ವಲಯ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಂಟ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದೆ. ಸಂಘವು ಹಲವಾರು ವರ್ಷಗಳಿಂದ ವಿದ್ಯಾರ್ಥಿ ವೇತನ, ಸಹಾಯಧನ ನೀಡುತ್ತಾ ಬಂದಿದೆ. ಕಳೆದ ಪದಗ್ರಹಣದ ಸಂದರ್ಭದಲ್ಲಿ ಘೋಷಿಸಿದಂತೆ ಬಂಟ ಸಮಾಜದ ಆರ್ಥಿಕವಾಗಿ ದುರ್ಬಲರಾಗಿರುವ ಇಲ್ಲಿನ ಪುದು ಗ್ರಾಮದ ಸುಜೀರು ಎಂಬಲ್ಲಿಯ ದಿ. ಸೀನ ಆಳ್ವ ಅವರ ಪತ್ನಿ ವಾರಿಜಾ ಆಳ್ವ ಹಾಗೂ ಕೊಡ್ಮಾಣ್ ಗ್ರಾಮದ ದಿ. ಪೂವಪ್ಪ ರೈ ಇವರ ಪತ್ನಿ ಸೀತಾ ರೈ ಈ 2 ಬಡ ಕುಟುಂಬಗಳನ್ನು ಗುರುತಿಸಿ, ಸುಮಾರು ತಲಾ 7 ಲಕ್ಷ ರೂ. ಅಂದಾಜಿನಲ್ಲಿ ಮನೆ ನಿರ್ಮಾಣ ಮಾಡಿದ್ದು, ನಾಳಿನ ಕಾರ್ಯಕ್ರಮದಲ್ಲಿ ಗೃಹ ಭಾಗ್ಯ ಸಮರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಂಟರ ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳಾದ ಸುಕೇಶ್ ಶೆಟ್ಟಿ, ವಿಠ್ಠಲ ಶೆಟ್ಟಿ, ಸಂತೋಷ್, ಸದಾಶಿವ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಸೇಸಣ್ಣ, ವಸಂತ ಶೆಟ್ಟಿ, ಭುವನ್ ರೈ, ಜ್ಯೋತೀಂದ್ರ ಶೆಟ್ಟಿ, ವಿಠಲ ಆಳ್ವ, ದೇವದಾಸ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ನಾಗಪ್ಪ ಶೆಟ್ಟಿ, ಸೈಲಜ ಶೆಟ್ಟಿ, ವಾಣಿಳಿ ಶೆಟ್ಟಿ, ಭಾರತಿ ಶೆಟ್ಟಿ, ಮಮತಾ ಶೆಟ್ಟಿ, ನಾಗರತ್ನ ಶೇಟ್ಟಿ, ಸುನಿಲ ಶೆಟ್ಟಿ, ವಿಜಯಾ ಶೆಟ್ಟಿ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.