ದ.ಕ. ಜಿಲ್ಲಾ ಪಂಚಾಯತ್ನಲ್ಲಿ ತುಳುನಾಡಿನ ವೈಭವ
ಮಂಗಳೂರು, ಆ.9: ಉರ್ವಾಸ್ಟೋರ್ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಆವರಣವಿಂದು ತುುನಾಡಿನ ವೈಭವಕ್ಕೆ ಸಾಕ್ಷಿಯಾಯಿತು.
ಉರ್ವಸ್ಟೋರ್ನ ದ.ಕ.ಜಿಲ್ಲಾ ಪಂಚಾಯಿತಿ ವತಿಯಿಂದ ಗುರುವಾರ ನಡೆದ ಆಟಿದ ಸಂಪು-ನೆಂಪು ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಚೆನ್ನೆಮಣೆ, ಒತ್ತು ಶ್ಯಾವಿಗೆ ಮಣೆಯ ವೈಭವವನ್ನು ಅನಾವರಣಗೊಳಿದರು. ಆಟಿಕಳೆಂಜ ಪಾತ್ರಧಾರಿಯ ಮೆರುಗಿನೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ್ನ ಸದಸ್ಯರು ಬಹುತೇಕವಾಗಿ ಪುರುಷ ಸದಸ್ಯರು, ಸಿಬ್ಬಂದಿಗಳು ಬಿಳಿ ಬಣ್ಣದ ಶರ್ಟು, ಪಂಚೆ, ಶಾಲಿನೊಂದಿಗೆ ಕಂಗೊಳಿಸಿದರೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಹಿತ ಕೆಲ ಸದಸ್ಯೆಯರು ಬಿಳಿ ಸೀರೆ ಹಾಗೂ ಜತಾರಿ ಸೀರೆಯೊಂದಿಗೆ ಸಂಭ್ರಮಿಸಿದರು.
ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದ ಹೊರ ಆವರಣದಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಭಾಂಗಣದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ವೈಭವೀಕರಿಸುವ ವಸ್ತುಗಳನ್ನು ಪ್ರದರ್ಶಿಸಲಾಯಿತು.
ಸೇರ್, ಮರಯಿ, ಕಡಸಾಲೆ, ಉಪ್ಪಿನಕಾಯಿ ಹಾಕುವ ಭರಣಿ, ಮರದ ನೊಗ, ಟೇಪ್ ರೆಕಾರ್ಡರ್, ತೊಟ್ಟಿಲು, ಹಿತ್ತಾಳೆಯ ಕೊಡಪಾನ ಹೀಗೆ ತುಳುನಾಡಿನಲ್ಲಿ ವಿಶೇಷವಾಗಿ ಬಳಸಲಾಗುವ ಮನೆಬಳಕೆಯ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು.
ಬಾಯಲ್ಲಿ ನೀರೂರಿಸಿದ 91 ಬಗೆಯ ತಿಂಡಿ ತಿನಿಸುಗಳು !
ತುಳುನಾಡಿನ ಪರಂಪರೆಯ ಭಾಗವಾಗಿ ವಿಶೇಷವಾಗಿ ಆಟಿ (ಆಷಾಡ) ತಿಂಗಳಲ್ಲಿ ಮನೆಗಳಲ್ಲಿ ಮಾಡುವ ವಿಶೇಷ ತಿಂಡಿ ತಿಂಡಿನಿಸುಗಳು ಸೇರಿದಂತೆ ಒಟ್ಟು 91 ಬಗೆಯ ಖಾದ್ಯಗಳು ಬಾಯಲ್ಲಿ ನಿರೂರಿಸುವಂತಿತ್ತು. ವಿಶೇಷವೆಂದರೆ ಈ ಖಾದ್ಯಗಳನ್ನು ತಮ್ಮ ಖರ್ಚಿನಲ್ಲಿ ಸಿಬ್ಬಂದಿಗಳೇ ತಲಾ ಒಂದೊಂದು ಖಾದ್ಯದಂತೆ ಮನೆಯಲ್ಲಿ ಮಾಡಿ ತಂದಿದ್ದರು.
ಕಾರ್ಯಕ್ರಮದ ಅಂಗವಾಗಿ ಸಿಬ್ಬಂದಿಗಳಿಗೆ ಹಗ್ಗಜಗ್ಗಾಟ ಆಟವನ್ನು ಆಯೋಜಿಸಲಾಯಿತು. ಜಿ.ಪಂ. ಉಪಾಧ್ಯಕ್ಷರಾದ ಕಸ್ತೂರಿ ಪಂಜ ಅವರ ನಿರೂಪಣೆಯಲ್ಲಿ ಹಗ್ಗ ಜಗ್ಗಾಟ ನಡೆಯಿತು.
ಸಭಾ ಕಾರ್ಯಕ್ರಮಕ್ಕೆ ಮೆರುಗು ನೀಡಿದ ಮುಟ್ಟಾಳೆ !
ತುಳುನಾಡಿನ ವಿಶೇಷತೆಗಳಲ್ಲಿ ಗದ್ದೆಯಲ್ಲಿ ನಾಟಿ ನೆಡುವ ಸಂದರ್ಭದಲ್ಲಿ ಬಳಸಲಾಗುವ ಮುಟ್ಟಾಳೆ ಕೂಡಾ ಒಂದು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಪ್ರತಿನಿಧಿಗಳು ಮುಟ್ಟಾಳೆ ಭಾಗವಹಿಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರವುಕ್ಕೆ ವಿಶೇಷ ಮೆರುಗು ನೀಡಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮುಂದಿನ ಪೀಳಿಗೆಗೆ ತುಳುನಾಡಿನ ಸಂಸ್ಕೃತಿಯ ಅರಿವು ಮೂಡಿಸುವ ಕೆಲಸ ಇಂತಹ ಆಟಿಯ ಕೂಟದ ಮೂಲಕ ನಡೆಯುತ್ತಿದೆ. ಜಿ.ಪಂ.ಸಿಬ್ಬಂದಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಜನಪ್ರತಿನಿಧಿಗಳು ಎಲ್ಲ ಸಮಯದಲ್ಲೂ ತಮ್ಮದೇ ಕೆಲಸ ಕಾರ್ಯಗಳಲ್ಲಿ ಮಗ್ನರಾಗುತ್ತಾರೆ. ಇಂದು ಎಲ್ಲರೂ ಒಟ್ಟಾಗಿ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಸಂಸ್ಕೃತಿಯಿಂದ ದೂರ ಸರಿದಾಗ ಇಂತಹ ಕಾರ್ಯಕ್ರಮಗಳು ನೆನಪು ಮಾಡುತ್ತದೆ. ಕಂಡಡ್ ಒಂಜಿ ದಿನ, ಕೆಸರಿನಲ್ಲಿ ಒಂದು ದಿನದ ಕಾರ್ಯಕ್ರಮಗಳು ಇದೇ ರೀತಿಯಲ್ಲಿ ಸಂಸ್ಕೃತಿಯ ಪೂರಕ ಕಾರ್ಯಕ್ರಮಗಳು ಎಂದರು.
ಈ ಸಂದರ್ಭ ಸುರತ್ಕಲ್ ಶಾಸಕ ಡಾ.ವೈ. ಭರತ್ ಶೆಟ್ಟಿ, ಜಿ.ಪಂ.ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಜಿ.ಪಂ.ಸಿಇಒ ಡಾ.ಎಂ.ಆರ್.ರವಿ, ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅನಿತಾ ಹೇಮನಾಥ ಶೆಟ್ಟಿಘಿ, ಸಾಮಾಜಿಕ ನ್ಯಾಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಮೊದಲಾದವರು ಉಪಸ್ಥಿತರಿದ್ದರು.