ರಾಬಿತಾ ಎಜುಕೇಶನ್ ಅವಾರ್ಡ್ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
29 ಮಂದಿ ಪ್ರತಿಭಾನ್ವಿತರಿಗೆ ಪುರಸ್ಕಾರ
ಭಟ್ಕಳ, ಆ. 9: ಇಲ್ಲಿನ ಪ್ರತಿಷ್ಟಿತ ಅನಿವಾಸಿ ಭಾರತೀಯರ ಸಂಘಟನೆಯಾಗಿರುವ ರಾಬಿತಾ ಸೂಸೈಟಿಯಿಂದ ಅ.10ರಂದು ಸಂಜೆ 4.30ಕ್ಕೆ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿರುವ ರಾಬಿತಾ ಎಜುಕೇಶನ್ ಅವಾರ್ಡ್ ಸಮಾರಂಭಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮುಖ್ಯ ಅತಿಥಿತಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಪ್ರದಾನಿಸಲಿದ್ದಾರೆ ಎಂದು ರಾಬಿತಾ ಸಂಸ್ಥೆಯ ಅಧ್ಯಕ್ಷ ಝಾಹಿದ್ ರುಕ್ನುದ್ದೀನ್ ಹೇಳಿದ್ದಾರೆ.
ಅವರು ಗುರುವಾರ ರಾಬಿತಾ ಸೂಸೈಟಿ ಕಾರ್ಯಲಯದಲ್ಲಿ ಕರೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ರಾಬಿತಾ ಅವಾರ್ಡ್ ಸಮಾರಂಭದ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಗೌರವ ಅತಿಥಿಗಳಾಗಿ ಅಖಿಲಾ ಭಾರತಿಯ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಜಫರ್ಯಾಬ್ ಜೈಲಾನಿ, ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಭಾಗವಹಿಸಲಿದ್ದಾರೆ ಎಂದ ಅವರು, ರಾಬಿತಾ ಸಂಸ್ಥೆಯು ಕಳೆದ 29 ವರ್ಷಗಳಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರನ್ನು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ರಾಬಿತಾ ಸೂಸೈಟಿಯ ಈ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳಲ್ಲಿ ಅದ್ಯಾಯನದ ಆಸಕ್ತಿ ಬೆಳಯುತ್ತಿದೆ. ಎಲ್ಲರೂ ಸ್ಪರ್ಧಾ ಮನೋಭಾವನೆಯೊಂದಿಗೆ ಪರೀಕ್ಷೆಯನ್ನು ಎದುರಿಸಿ ಉತ್ತಮ ಅಂಕಗಳನ್ನು ಗಳಿಸುತ್ತಿದ್ದಾರೆ ಎಂದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯೂನೂಸ್ ಕಾಝಿಯಾ ಮಾತನಾಡಿ, ಭಟ್ಕಳದ ಸರ್ವತೋಮುಖ ಅಭಿವೃದ್ಧಿಗೆ ರಾಬಿತಾ ಸಂಸ್ಥೆ ಶ್ರಮಿಸುತ್ತಿದ್ದು ಇಲ್ಲಿ ಶಾಂತಿ,ಸೌಹಾರ್ದತೆ ಮೂಡಿಸುವಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆ ಈ ಎಲ್ಲ ಕ್ಷೇತ್ರದಲ್ಲೂ ಅದು ಸಾಮಾಜಿಕ ಕಳಕಳಿಯೊಂದಿಗೆ ಯವುದೇ ವರ್ಗಬೇಧವಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದರು. ಪ್ರೌಢಶಾಲೆ, ಕಾಲೇಜು, ಪದವಿ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಒಟ್ಟು 30ಕ್ಕೂ ಅಧಿಕ ಪ್ರತಿಭಾನ್ವಿತರನ್ನು ನಗದು ಹಾಗೂ ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಜೈಲಾನಿ ಶಾಬಂದ್ರಿ ಮತ್ತಿತರರು ಉಪಸ್ಥಿತರಿದ್ದರು.