ಬಂಗಾಳ ಕೊಲ್ಲಿ: ಎಂಐಟಿ ವಿದ್ಯಾರ್ಥಿಗಳಿಂದ ವೈಜ್ಞಾನಿಕ ಅಧ್ಯಯನ
ಮಣಿಪಾಲ, ಆ.9: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ)ಯ ಐವರು ವಿದ್ಯಾರ್ಥಿಗಳು ಬಂಗಾಳಕೊಲ್ಲಿಯಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿ ‘ಓಆರ್ವಿ ಸಾಗರ್ ಕನ್ಯಾ’ ಹಡಗಿನಲ್ಲಿ ಭೂವೈಜ್ಞಾನಿಕ ಅಧ್ಯಯನ ನಡೆಸಿದರು.
ಎಂಐಟಿಯ ಅಂತಿಮ ವರ್ಷದ ಭೂವಿಜ್ಞಾನ ಎಂಎಸ್ಸಿ ವಿದ್ಯಾರ್ಥಿಗಳಾದ ಶಿಬಾಶಿಸ್ ಗುರು, ಅಭಿಲಾಷ್ ಎ.ಎಲ್., ಗೋಕುಲ್ ವಲ್ಸನ್, ಯುಗಂಧರ್ ನಿಗೋಕರ್ ಹಾಗೂ ಸಾಹಿಲ್ ಗೋಲಾಪ್ ಅವರು ಈ ವೈಜ್ಞಾನಿಕ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಾಗಿದ್ದಾರೆ.
ಇವರು ಪುರಿ ಸಮುದ್ರ ತೀರದಲ್ಲಿ ಕೊಲ್ಲಿಯ ಸಮುದ್ರ ತಳದ ನಕ್ಷೆಯನ್ನು ರಚಿಸಲು ಸಹಾಯ ಮಾಡಿದರು. ಇದಕ್ಕಾಗಿ ಅವರು ಮಲ್ಟಿ ಬೀಮ್ ಎಕೋ ಸೌಂಡರ್ ಯಂತ್ರವನ್ನು ಬಳಸಿದರು. ಇವರೆಲ್ಲರೂ ನೇಷನಲ್ ಸೆಂಟರ್ ಫಾರ್ ಅಂಟಾರ್ಕಟಿಕ ಎಂಡ್ ಓಷನ್ ರಿಸರ್ಚ್ನ ವಿಜ್ಞಾನಿ ಡಾ.ಟ್ವಿಂಕಲ್ ದಾಮೋದರನ್ ನೇತೃತ್ವದಲ್ಲಿ ಈ ಸಂಶೋದನೆ ನಡೆಸಿದರು.
ಓಆರ್ವಿ ಸಾಗರ ಕನ್ಯಾ ಹಡಗಿನಲ್ಲಿ ಇವರು ವಿವಿಧ ವಿಷಯಗಳಲ್ಲಿ -ಒಷಿಯಾನೋಗ್ರಫಿ, ಜಿಯೋಫಿಸಿಕಲ್ ಹಾಗೂ ಜಿಯೋಜಿಕಲ್ ಉಪಕರಣ- ತರಬೇತಿಯನ್ನೂ ಪಡೆದರು. ಅಲ್ಲದೇ ಡಾಟಾ ಸಂಗ್ರಹ, ಅವುಗಳ ವಿಶ್ಲೇಷಣೆ ಹಾಗೂ ಸಾಫ್ಟ್ವೇರ್ಗೆ ಅವುಗಳ ಅಳವಡಿಕೆ ಕುರಿತೂ ವಿಜ್ಞಾನಿ ಗಳಿಂದ ತರಬೇತಿ ಪಡೆದರು.
ವಿದ್ಯಾರ್ಥಿಗಳು ಒಟ್ಟು 31 ದಿನಗಳನ್ನು ಈ ವೈಜ್ಞಾನಿಕ ಸಂಶೋಧನಾ ಹಡಗಿನಲ್ಲಿ ಕಳೆದಿದ್ದು, ಚೆನ್ನೈನಿಂದ ಹೊರಟ ಈ ಹಡಗು ಬಂಗಾಳಕೊಲ್ಲಿ ಪ್ರದೇಶದ ಬಳಿಕ ಶ್ರೀಲಂಕಾಕ್ಕೂ ತೆರಳಿ ಬಳಿಕ ಕೊಚ್ಚಿಗೆ ಆಗಮಿಸಿತು. ಸರಕಾರಿ ಸ್ವಾಮ್ಯದ ಈ ಹಡಗಿನಲ್ಲಿ ಇವರು ತಮ್ಮ ಅಧ್ಯಯನ ನಡೆಸಿದರು.