ಜಿಲ್ಲೆಯಾದ್ಯಂತ ಮಾದಕ ವ್ಯಸನದ ವಿರುದ್ದ ಮಾಸಚಾರಣೆ
ಉಡುಪಿ, ಆ.9: ಉಡುಪಿ ಜಿಲ್ಲಾ ಪೋಲಿಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ಗಳ ಸಹಯೋಗದಲ್ಲಿ ಮಾದಕ ವ್ಯಸನದ ವಿರುದ್ದ ಮಾಸಚಾರಣೆಯ ಮೂಲಕ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಎರಡು ತಿಂಗಳ ಕಾಲ ಆಯೋಜಿಸಲಾಗಿದೆ.
ಮಾಸಾಚರಣೆಯ ಉದ್ಘಾಟನೆ ಮತ್ತು ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಮತ್ತು ಪೋಲಿಸ್ ಇಲಾಖೆಯ ಜವಾಬ್ದಾರಿಯ ಕುರಿತ ಸಂವಾದವನ್ನು ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಆ.11ರಂದು ಬೆಳಗ್ಗೆ 9ಗಂಟೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನೆರವೇರಿಸಲಿ ರುವರು. ಅಧ್ಯಕ್ಷತೆಯನ್ನು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ವಹಿಸಲಿರುವರು.
ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳ ವಾಕಾಥಾನ್, ಮ್ಯಾರಾ ಥನ್, ಸೈಕ್ಲಾಥಾನ್, ಮಲ್ಪೆಕಡಲ ತೀರದಲ್ಲಿ ಕಾರ್ಟೂನ್ ಹಬ್ಬ, ಮರಳು ಶಿಲ್ಪ ರಚನೆ, ಮಾದಕ ವ್ಯಸನದಿಂದ ಮುಕ್ತರಾದವರೊಂದಿಗೆ ಸಂವಾದ, ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮ ಮತ್ತು ಕುಟುಂಬದವರು ಅನುಭವಿಸುವ ನೋವಿನ ಕುರಿತು ಮಾಹಿತಿ ನೀಡುವ ಚಿತ್ರ ಪ್ರದರ್ಶನ, ಮಾಲ್, ಸಿನೆಮಾ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ಗಳಲ್ಲಿ ಮಾದಕ ವ್ಯಸನ ವಿರೋಧಿ ಜಾಗೃತಿ ಸಹಿ ಸಂಗ್ರಹ ಅಭಿಯಾನ, ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಿರುಚಿತ್ರ ರಚನೆ ಸ್ಪರ್ಧೆ, ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ವ್ಯಸನದ ಪರಿಣಾಮವನ್ನು ಬಿಂಬಿಸುವ ವಿಶೇಷ ವೇಷ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಕುರಿತು ವಿವಿಧ ಲೇಖನಗಳನ್ನೊಳಗೊಂಡ ಪತ್ರಿಕೆ ರಚನೆ ಸ್ಪರ್ಧೆ ಹಾಗೂ ಇತರ ಹಲವಾರು ಜನಜಾಗೃತಿ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.