ಅಮಾನತುಗೊಂಡರೂ ಕಡತ ಹಸ್ತಾಂತರಿಸದ ಶಿಕ್ಷಕಿ: ಪರಿಶೀಲನೆ
ಪಡುಬಿದ್ರೆ, ಆ. 9: ಪಡುಬಿದ್ರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕಿ ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಅಮಾನತುಗೊಂಡರೂ ಶಾಲೆಯ ಕಡತ ಹಾಗೂ ಕೀಲಿಕೈ ಹಸ್ತಾಂತರಿಸದ ಹಿನ್ನಲೆಯಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಯಿತು.
ಪಡುಬಿದ್ರೆ ಪ್ರೌಢಶಾಲಾ ವಿಭಾಗದಲ್ಲಿ ಸಹಶಿಕ್ಷಕಿಯಾಗಿದ್ದ ಸಂಧ್ಯಾ ಸರಸ್ವತಿ ಅವರನ್ನು ಮೂಳೂರು ಸರ್ಕಾರಿ ಪ್ರೌಢಶಾಲೆಗೆ ನಿಯೋಜನೆಗೊಳಿಸಿ ಇಲಾಖೆಯಿಂದ ಒಂದು ತಿಂಗಳ ಹಿಂದೆ ಆದೇಶ ನೀಡಿದ್ದರು. ಆದರೆ ಅವರು ಅದನ್ನು ಪಾಲಿಸಿಲ್ಲ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜೂ.30 ರಂದು ಖದ್ದಾಗಿ ಶಾಲೆಗೆ ತೆರಳಿ ಜು. 2ರಂದು ನಿಯೋಜನೆಗೊಂಡ ಶಾಲೆಯಲ್ಲಿ ವರದಿ ಮಾಡುವಂತೆ ನಿರ್ದೇಶನ ನೀಡಿದ್ದರು. ಅದನ್ನು ಪಾಲಿಸಿಲ್ಲದ ಕಾರಣ ಇಲಾಖೆಯ ಶಿಸ್ತುಕ್ರಮದಂತೆ ಜು.17ರಂದು ಅವರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
ಸಂಧ್ಯಾ ಸರಸ್ವತಿಯವರು ಹಿರಿಯ ಸಹ ಶಿಕ್ಷಕಿಯಾಗಿ ಕರ್ತವ್ಯ ನಿಯೋಜನೆಗೊಂಡಿರುವ ಸರಿತಾ ಡಿಸೋಜಾ ವರಿಗೆ ಕಡತ ಹಸ್ತಾಂತರಿಸಲಿಲ್ಲ. ಅಮಾನತುಗೊಂಡರೂ ಕಡತ ಹಸ್ತಾಂತರಿಸದೆ ಶಾಲೆಗೆ ಬಂದು ಕಚೇರಿಯಲ್ಲಿರುತ್ತಿದ್ದ ಸಂಧ್ಯಾ ಅವರ ಮೇಲೆ ದೂರುಗಳು ಬಂದ ಹಿನ್ನಲೆಯಲ್ಲಿ ಡಿಡಿಪಿಐ ನಿರ್ದೇಶನದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆಯಂತೆ ಅಧಿಕಾರಿಗಳು ಗುರುವಾರ ಶಾಲೆಗೆ ಭೇಟಿ ನೀಡಿ ನೂರಾರು ಕಡತಗಳ ಹಸ್ತಾಂತರದ ಪ್ರಕ್ರಿಯೆ ನಡೆಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನೂರಾರು ಕಡತಗಳ ಪರಿಶೀಲನೆ ಹಸ್ತಾಂತರ ಪ್ರಕ್ರಿಯೆ ಪೋಷಕರ ಸಮ್ಮುಖದಲ್ಲಿ ನಡೆದಿತ್ತು. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳದ ಕಾರಣ ಶುಕ್ರವಾರ ಮತ್ತೆ ಬಾಕಿ ಉಳಿದ ಕಡತಗಳ ಹಾಗೂ ಕೀಲಿಕೈ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.