ಆ.12: ಪಿಲಿಕುಳ ಆಟಿಕೂಟ ಕಾರ್ಯಕ್ರಮ
ಮಂಗಳೂರು, ಆ.10: ಪಿಲಿಕುಳದ ಗುತ್ತು ಮನೆಯಲ್ಲಿ ವಿಜಯಾ ಬ್ಯಾಂಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಕೂರ ಪ್ರತಿಷ್ಠಾನ ಹಾಗೂ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಹಯೋಗದೊಂದಿಗೆ ಆ.12ರಂದು ಪೂ.10 ಗಂಟೆಯಿಂದ ‘ಪಿಲಿಕುಳ ಆಟಿಕೂಟ’ವನ್ನು ಜಾನಪದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದ ಜನಪದ ಹಾಡುಗಳ ಗಾಯನ ಮತ್ತು ತೆಂಕುತಿಟ್ಟಿನ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರ ಸಾರಥ್ಯದಲ್ಲಿ ಯಕ್ಷಮಂಜೂಷ ಅವರಿಂದ ಯಕ್ಷಗಾನ ನಾಟ್ಯವೈಭವ ಕಾರ್ಯಕ್ರಮವಲ್ಲದೆ ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದಿಂದ ಆಟಿಯ ವಿವಿಧ ಬಗೆಯ ವಿಶೇಷ ತಿನಿಸುಗಳ ಪ್ರದರ್ಶನದ ಜೊತೆ ಹಂಚಿಕೆಯೂ ನಡೆಯಲಿದೆ.
ಮಧ್ಯಾಹ್ನ 1ಗಂಟೆಗೆ ನಂತರ ಆಟಿಯ ವಿಶೇಷ ಭೋಜನದ ಕೂಪನ್ ಪಡೆದವರಿಗೆ ಪಿಲಿಕುಳದ ವತಿಯಿಂದ ಇಪ್ಪತ್ತು ಬಗೆಯ ಖಾದ್ಯಗಳ ಭೋಜನ ಕೂಟವನ್ನು ಗುತ್ತು ಮನೆಯಲ್ಲಿ ಸಾಂಪ್ರದಾಯಿಕವಾಗಿ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಪಿಲಿಕುಳ ನಿಸರ್ಗಧಾಮದ ಬಾಕ್ಸ್ ಆಫೀಸ್ ಟಿಕೆಟ್ ಕೌಂಟರ್ನಲ್ಲಿ ಕೂಪನುಗಳನ್ನು ಖರೀದಿಸಬಹುದು ಎಂದು ಪ್ರಕಟನೆ ತಿಳಿಸಿದೆ.