ಹೊಸ ಆರ್ಟಿಓ ಹುದ್ದೆಗಳ ನೇಮಕಾತಿಗೆ ಚಿಂತನೆ: ಸಚಿವ ಡಿ.ಸಿ.ತಮ್ಮಣ್ಣ
ಉಡುಪಿ, ಆ.10: ಅಧಿಕಾರಿಗಳ ಕೊರತೆಯಿಂದ ರಾಜ್ಯದ ಹಲವು ಆರ್ಟಿಓ ಕಚೇರಿಗಳಲ್ಲಿ ಜನರ ಕೆಲಸ ವಿಳಂಬವಾಗಿ ತೊಂದರೆಯಾಗುತ್ತಿದೆ. 460 ಆರ್ಟಿಓ ಹಾಗೂ ಟ್ರಾಫಿಕ್ ನಿರೀಕ್ಷಕರ ಹುದ್ದೆಗಳ ನೇಮಕಾತಿ ವಿವಾದ ಸುಪ್ರೀಂ ಕೋರ್ಟ್ ಮತ್ತು 139 ಹುದ್ದೆಗಳು ಕೆಪಿಎಸ್ಸಿನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಆದುದರಿಂದ ಅವುಗಳನ್ನು ಕೈಬಿಟ್ಟು ಇಲಾಖೆಯಿಂದ ಹೊಸ ನೇಮಕಾತಿ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.
ಉಡುಪಿ ನಗರದ ನರ್ಮ್ ಬಸ್ ನಿಲ್ದಾಣದ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ರಾಜ್ಯದ ಹೆಚ್ಚಿನ ಆರ್ಟಿಓ ಕಚೇರಿಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ರಾಜ್ಯದ ಕೆಲವು ಆರ್ಟಿಓ ಕಚೇರಿಗಳಲ್ಲಿ ಕ್ಲರ್ಕ್ಗಳು ಆರ್ಟಿಓ ಕೆಲಸ ಮಾಡುತ್ತಿದ್ದಾರೆ. ಆರ್ಟಿಓ ಅರ್ಹತೆ ಇಲ್ಲದವರು ಕೆಲಸ ಮಾಡುತ್ತಿರು ವುದರಿಂದ ಸಮಸ್ಯೆಗಳು ಎದುರಾಗಿವೆ. ಈಗ ನಾವು ಆ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ದೂರು ಬಂದಲ್ಲಿ ಸಮಸ್ಯೆ ಸರಿಪಡಿಸುವ ಕೆಲಸ ಮಾಡಲಾಗು ತ್ತಿದೆ. ಆರ್ಟಿಓ ಕಚೇರಿಯ ಎಲ್ಲ ಕಾರ್ಯಗಳಿಗೂ ಆನ್ಲೈನ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದರು.
ದೂರ ಪ್ರಯಾಣಕ್ಕೆ ಅನುಕೂಲವಾಗುವಂತೆ ಮಂಗಳೂರು ಕೆಎಸ್ಆರ್ಟಿಸಿ ವಿಭಾಗದಲ್ಲಿ ಸಂಚರಿಸುತ್ತಿರುವ ಹಳೆ ಬಸ್ಗಳನ್ನು ಬದಲಾಯಿಸಿ 20 ಹೊಸ ವೋಲ್ವೊ ಬಸ್ಗಳನ್ನು ಮಂಜೂರು ಮಾಡಲಾಗಿದೆ. ಅಲ್ಲದೆ ಸ್ಲೀಪರ್ ಕೋಚ್ ಬಸ್ಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಇಲಾಖೆಯಲ್ಲಿ ಸದ್ಯಕ್ಕೆ ಸಿಬ್ಬಂದಿಗಳ ಕೊರತೆ ಇರುವುದರಿಂದ ಯಾವುದೇ ಹೊಸ ಆರ್ಟಿಓ ಹಾಗೂ ಎಆರ್ಟಿಓ ಕಚೇರಿಗಳನ್ನು ಒಂದು ವರ್ಷ ಕಾಲ ಮಂಜೂರು ಮಾಡಲ್ಲ. ಸಿಬ್ಬಂದಿಗಳ ಕೊರತೆ ನೀಗಿದ ಬಳಿಕ ಹೊಸ ಕಚೇರಿಗಳನ್ನು ಮಂಜೂರು ಮಾಡಲಾಗುವುದು ಎಂದರು.
ಉಡುಪಿ ಬನ್ನಂಜೆಯಲ್ಲಿ ನಿರ್ಮಾಣಗೊಳ್ಳುವ ಕೆಎಸ್ಸಾರ್ಟಿಸಿ ಹೈಟೆಕ್ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣಕ್ಕೆ 30 ಕೋಟಿ ರೂ. ಮಂಜೂರಾಗಿದ್ದು, 27.5 ಕೋಟಿ ರೂ. ಟೆಂಡರ್ ಆಗಿದೆ. ಮುಂದೆ ಬೇಡಿಕೆ ಬಂದರೆ ಈ ನಿಲ್ದಾಣದಲ್ಲಿ ಒಂದೆರಡು ಮಹಡಿಗಳನ್ನು ಹೆಚ್ಚಿಸಲಾಗುವುದು. ಈ ಸಂಬಂಧ ಅಧಿಕಾರಿಗಳು, ಗುತ್ತಿಗೆದಾರರ ಜೊತೆ ಮಾತನಾಡುತ್ತೇನೆ ಎಂದು ಸಚಿವರು ನುಡಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಯೋಗೀಶ್ ಶೆಟ್ಟಿ, ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್, ವಿಭಾಗೀಯ ಸಂಚಾರ ನಿಯಂತ್ರ ಣಾಧಿಕಾರಿ ಜೈಶಾಂತ್ ಕುಮಾರ್, ಉಡುಪಿ ಡಿಪೊ ಮೆನೇಜರ್ ಉದಯ ಕುಮಾರ್ ಉಸ್ಥಿತರಿದ್ದರು.
ಬೈಂದೂರು ನಿಲ್ದಾಣದಲ್ಲೇ ಸರಕಾರಿ ಕಚೇರಿಗಳು
ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಇಲ್ಲದ ಕಡೆಗಳಲ್ಲಿ ಹೊಸ ಬಸ್ ನಿಲ್ದಾಣ ಗಳನ್ನು ನಿರ್ಮಿಸಲಾಗುವುದು. ಬೈಂದೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಐದು ಕೋಟಿ ರೂ. ಮಂಜೂರಾಗಿದ್ದು, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ಶೀಘ್ರವೇ ಮಾಡಲಾಗುವುದು. ಬೈಂದೂರು ಹೊಸ ತಾಲೂಕು ಆಗಿರುವುದರಿಂದ ಅಲ್ಲಿ ಸರಕಾರಿ ಕಚೇರಿಗಳಿಗೆ ಸ್ಥಳ ಕೊರತೆ ಉಂಟಾಗಿದೆ. ಅದಕ್ಕೆ ಈ ಹೊಸ ಬಸ್ ನಿಲ್ದಾಣದಲ್ಲೇ ಎಲ್ಲ ಕಚೇರಿಗಳಿಗೂ ಸ್ಥಳಾವಕಾಶ ಮಾಡಿಕೊಟ್ಟರೆ ನಮಗೂ ಆದಾಯ ಬರುತ್ತದೆ ಮತ್ತು ಜನಸಾಮಾನ್ಯರಿಗೂ ಸಹಾಯ ಆಗುತ್ತದೆ. ಈ ಕುರಿತು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಜೊತೆ ಮಾತನಾಡಿದ್ದು, ಅದಕ್ಕೆ ಅವರು ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.