ಆಗುಂಬೆ ಬಳಿ ರಸ್ತೆ ಅಪಘಾತ: ಮುದ್ರಾಡಿಯ ಯುವಕ ಸ್ಥಳದಲ್ಲೇ ಮೃತ್ಯು
ಮುದ್ರಾಡಿ (ಹೆಬ್ರಿ), ಆ.10: ಕೊಪ್ಪದಿಂದ ಹೆಬ್ರಿ ಸಮೀಪದ ಖಜಾನೆಗೆ ಬರುತ್ತಿದ್ದ ಪಿಕಪ್ ವಾಹನ ಆಗುಂಬೆಯ ಅಗಸರಕೋಣೆ ಬಳಿ ನಿಯಂತ್ರಣ ತಪ್ಪಿಪಲ್ಟಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಮುದ್ರಾಡಿ ನಿವಾಸಿ ರಾಜು ಶೆಟ್ಟಿ ಎಂಬವರ ಪುತ್ರ ಕೃಷ್ಣ ಶೆಟ್ಟಿ (38) ತಲೆಗಾದ ಗಂಭೀರ ಗಾಯದಿಂದ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ಮೂವರು ಶಿವಪುರದ ಖಜಾನೆಯಿಂದ ಯಂತ್ರದ ಬಿಡಿಭಾಗದ ದುರಸ್ತಿಗಾಗಿ ಕೊಪ್ಪಕ್ಕೆ ತೆರಳಿದ್ದು, ಮರಳಿ ಬರುವಾಗ ಆಗುಂಬೆ ಬಳಿ ಘಟನೆ ಸಂಭವಿಸಿದೆ. ವಾಹನ ಚಾಲಕ ಮತ್ತು ವಾಹನದಲ್ಲಿದ್ದ ಮತ್ತೋರ್ವ ವ್ಯಕ್ತಿ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಖಾಸಗಿ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಶೆಟ್ಟಿ ಮುದ್ರಾಡಿ ಪರಿಸರದಲ್ಲಿ ಜನಾನುರಾಗಿಯಾಗಿದ್ದರು.
ಮೃತರಿಗೆ ತಂದೆ,ತಾಯಿ, ಪತ್ನಿ, ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದ್ಯಮಿ ಮುನಿಯಾಲು ಉದಯ ಶೆಟ್ಟಿ, ಜಿಪಂ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ಮುದ್ರಾಡಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ, ಉದ್ಯಮಿ ಮಡಾಮಕ್ಕಿ ಶಶಿಧರ ಶೆಟ್ಟಿ ಸೇರಿದಂತೆ ಸಾವಿರಾರು ವುಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.