ನಾದಿನಿ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಬಾವನ ವಿರುದ್ಧ ಕೇಸು ದಾಖಲು
ಪುತ್ತೂರು, ಆ. 10: ಅಲೆಮಾರಿ ದನಗಳನ್ನು ಓಡಿಸುವ ವೇಳೆ ದನವೊಂದು ತೋಟಕ್ಕೆ ನುಗ್ಗಿತೆಂಬ ಕಾರಣಕ್ಕಾಗಿ ನಾದಿನಿಯ ಮೇಲೆ ಹಲ್ಲೆ ನಡೆಸಿದ ಬಾವನ ವಿರುದ್ಧ ಪುತ್ತೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಘಟನೆಗೆ ಸಂಬಂಧಿಸಿ ಬಾವ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ನಾದಿನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿತ್ತು. ಕಬಕ ಗ್ರಾಮದ ಪೋಳ್ಯ ಸಮೀಪದ ಕೋಳಿಮನೆ ನಿವಾಸಿ ರಾಮಣ್ಣ ಗೌಡ ಅವರ ಪತ್ನಿ ಯೋಗಿನಿ (48) ಹಲ್ಲೆಗೊಳಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಯ ದಿನ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗಿರಿಯಪ್ಪ ಗೌಡ ಅವರು ಬಳಿಕ ಬಿಡುಗಡೆಗೊಂಡು ತೆರಳಿದ್ದರು.
ನಮ್ಮ ತೋಟಕ್ಕೆ ಅಲೆಮಾರಿ ದನಗಳು ಬಂದು ಮೇಯುತ್ತಿದ್ದವು. ಅವುಗಳನ್ನು ಓಡಿಸುವ ವೇಳೆ ದನವೊಂದು ತನ್ನ ಪತಿಯ ಸಹೋದರನಾದ ಗಿರಿಯಪ್ಪ ಗೌಡ ಅವರ ತೋಟಕ್ಕೆ ನುಗ್ಗಿತ್ತು. ಈ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಗಿರಿಯಪ್ಪ ಗೌಡ ನಮ್ಮ ತೋಟಕ್ಕೆ ಬಂದು ನಮ್ಮ ತೋಟಕ್ಕೆ ದನವನ್ನು ಓಡಿಸಿದ್ದು ಯಾಕೆ ಎಂದು ಪ್ರಶ್ನಿಸಿ, ತೆಂಗಿನ ಮಡಲಿನ ದಂಡಿನಿಂದ ಹೊಡೆದು ಹಲ್ಲೆ ನಡೆಸಿ, ದೂಡಿ ಹಾಕಿದ್ದಲ್ಲದೆ ತನ್ನ ಮೈಮೇಲಿನ ಬಟ್ಟೆಗಳನ್ನು ಹರಿದು ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾಗಿ ಎಂದು ಯೋಗಿನಿ ಆರೋಪಿಸಿದ್ದರು.
ಇದೀಗ ಯೋಗಿನಿ ಅವರ ಆರೋಪದಂತೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಿರಿಯಪ್ಪ ಗೌಡ ಅವರ ವಿರುದ್ಧ ಸೆಕ್ಷನ್ 504, 324, 354, 506 ನಡಿ ಪ್ರಕರಣ ದಾಖಲಾಗಿದೆ. ಗಿರಿಯಪ್ಪ ಗೌಡ ಅವರು ನೀಡಿದ ದೂರಿನಂತೆ ಯೋಗಿನಿ ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.