ಸಿಪಿಐ ಮಂಗಳೂರು ತಾಲೂಕು ಸಮಿತಿ ಸಭೆ
ಮಂಗಳೂರು, ಆ.11: ಅಧಿಕಾರದಲ್ಲಿ ಯಾವ ಪಕ್ಷವಿದ್ದರೂ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದಿದ್ದಲ್ಲಿ, ಜನಪರ, ಸಮಾಜಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದಿದ್ದಲ್ಲಿ ಹೋರಾಟ ನಡೆಯುತ್ತಲೇ ಇರುತ್ತದೆ. ಜನಪರ ಹೋರಾಟಗಳೆ ನಮ್ಮ ಮೂಲ ಮಂತ್ರವಾಗಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ಸಿಪಿಐ ಪಕ್ಷದ ಕರೆಯಂತೆ ಕೇಂದ್ರ ಸರಕಾರದ ಜನರೋಧಿ ನೀತಿಗಳನ್ನು ಖಂಡಿಸಿ ದೇಶಾದ್ಯಂತ ನಡೆಸುತ್ತಿರುವ ಪ್ರತಿಭಟನಾ ಆಂದೋಲನದ ಅಂಗವಾಗಿ ಸಿಪಿಐ ಮಂಗಳೂರು ತಾಲೂಕು ಸಮಿತಿ ಶುಕ್ರವಾರ ನಗರದಲ್ಲಿ ಮಂಗಳೂರಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
1925ರಲ್ಲಿ ಹುಟ್ಟಿ ಭಾರತದ ಸ್ವಾತಂತ್ರ್ಯಕ್ಕೋಸ್ಕರ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ಸಿಪಿಐ ಸ್ವಾತಂತ್ರ್ಯಾನಂತರವೂ ತನ್ನ ಜನಪರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಗಳನ್ನು ನಡೆಸುತ್ತಲೇ ಬಂದಿದೆ. ಹೋರಾಟವೆ ನಮ್ಮ ಪರಂಪರೆ ಮತ್ತು ಅಸ್ತ್ರವಾಗಿದೆ. 2014ರ ಪಾರ್ಲಿಮೆಂಟರಿ ಚುನಾವಣೆಯ ಸಮಯದಲ್ಲಿ ಬಿಜೆಪಿ ಆಶ್ವಾಸನೆಗಳ ಮಹಾಪೂರವನ್ನೆ ಹರಿಸಿತ್ತು. ಆ ಆಶ್ವಾಸನೆಗಳಿಗೆ ಮರುಳಾದ ಜನ ಅವರನ್ನು ಬಹುಮತದಿಂದ ಆರಿಸಿ ಅಧಿಕಾರ ಕೊಟ್ಟರು. ಆದರೆ ಅಂದು ನೀಡಿದ ಯಾವುದೇ ಆಶ್ವಾಸನೆಗಳನ್ನು ಇದುವರೆಗೆ ಈಡೇರಿಸಿಲ್ಲ. ಬದಲು ಅನೇಕ ಜನರೋಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ಕಾರ್ಪೊರೇಟ್ ಸಂಸ್ಥೆಗಳ, ಅಂತಾರಾಷ್ಟ್ರೀಯ ಬಂಡವಾಳಿಗರ ಲಾಭ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತಿದ್ದಾರೆ. ಇನ್ನಾದರೂ ಜನಸಾಮಾನ್ಯರು ಈ ಮೋಸಗಳನ್ನು ಅರ್ಥಮಾಡಿಕೊಂಡು 2019ರ ಚುನಾವಣೆಗಳಲ್ಲಿ ಸರಿಯಾದ ಪಾಠ ಕಲಿಸಬೇಕು ಸಾತಿ ಸುಂದರೇಶ್ ನುಡಿದರು.
ಅಖಿಲ ಭಾರತ ಯುವಜನ ಫೆಡರೇಶನ್ನ ರಾಜ್ಯ ಸಂಚಾಲಕ ಸಂತೋಷ್, ಸಿಪಿಐ ಪಕ್ಷ ಮುಂದಾಳುಗಳಾದ ಪ್ರಭಾಕರ ರಾವ್, ಎಚ್.ರಾವ್ ಮಾತನಾಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಎಸ್. ಬೇರಿಂಜ ಕಾರ್ಯಕ್ರಮ ನಿರ್ವಹಿಸಿದರು. ತಿಮ್ಮಪ್ಪ ವಂದಿಸಿದರು.