ಯುವಜನತೆಯ ಜಿಜ್ಞಾಸೆಯೇ ದುಶ್ಚಟಳಿಗೆ ಕಾರಣ: ಡಿಸಿ ಪ್ರಿಯಾಂಕ
ಉಡುಪಿ ಜಿಲ್ಲೆಯಾದ್ಯಂತ ಮಾದಕ ವ್ಯಸನದ ವಿರುದ್ಧ ಮಾಸಾಚರಣೆಗೆ ಚಾಲನೆ
ಉಡುಪಿ, ಆ.11:ಯುವಜನತೆ ಕಾಲೇಜು ಪ್ರಪಂಚಕ್ಕೆ ಕಾಲಿಡುವಾಗ ಸಿಗುವ ಸ್ವಾತಂತ್ರವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಜಿಜ್ಞಾಸೆ ಹಾಗೂ ಮಾಹಿತಿ ಕೊರತೆಯಿಂದ ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇವರಿಗೆ ಸರಿಯಾದ ದಾರಿ ತೋರಿಸದಿದ್ದರೆ ಅವರಿಗೆ ಬೇಕಾದ ಕೆಟ್ಟ ದಾರಿಯಲ್ಲಿ ಸಾಗುತ್ತಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪೋಲಿಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಎರಡು ತಿಂಗಳ ಮಾದಕ ವ್ಯಸನದ ವಿರುದ್ದ ಮಾಸಾಚರಣೆಯ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಇಂದು ವಿದ್ಯಾರ್ಥಿ ಬದುಕಿನಲ್ಲಿ ಮಾದಕ ವ್ಯಸನ ಎಂಬುದು ದೊಡ್ಡ ಸಮಸ್ಯೆ ಯಾಗಿ ಪರಿಣಮಿಸಿದೆ. ಕೆಲವೊಂದು ಹೊರಗಿನ ಶಕ್ತಿಗಳು ದೇಶವನ್ನು ನಾಶ ಮಾಡಲು ಯುವಜನತೆಯನ್ನು ಈ ಮೂಲಕ ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿವೆ. ಯುವಜನತೆಯನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳು ವಂತೆ ಮಾಡುವುದರಿಂದ ಕೆಟ್ಟ ಚಟಗಳಿಗೆ ಬಲಿಯಾಗದಂತೆ ತಡೆಯಬಹು ದಾಗಿದೆ ಎಂದರು.
ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಮತ್ತು ಪೋಲಿಸ್ ಇಲಾಖೆಯ ಜವಾಬ್ದಾರಿಯ ಕುರಿತು ಮನೋರೋಗ ತಜ್ಞ ಡಾ. ಪಿ.ವಿ.ಭಂಡಾರಿ ಮಾತನಾಡಿ, ಮಾದಕ ವ್ಯಸನ ಎಂಬುದು ಮೆದುಳಿನ ಒಂದು ಕಾಯಿಲೆಯಾಗಿದೆ. ಆದುದರಿಂದ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ಅಗತ್ಯ ಇರುತ್ತದೆ. ಯುವಜನತೆಯಲ್ಲಿರುವ ಬಹಳಷ್ಟು ತಪ್ಪು ಕಲ್ಪನೆಗಳಿಂದ ವಿವಿಧ ವ್ಯಸನಗಳಿಗೆ ಅಂಟಿಕೊಳ್ಳುತ್ತಾರೆ. ಈ ಬಗ್ಗೆ ವಿದ್ಯಾಸಂಸ್ಥೆಯ ಶಿಕ್ಷಕರು ಹಾಗೂ ಪೋಷಕರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಮಾತ ನಾಡಿ, ಅರಿವಿನ ಕೊರತೆ ಇರುವ ಕಡು ಬಡವರು ಹಾಗೂ ಸುಲಭದಲ್ಲಿ ಹಣ ಪಡೆಯುವ ಶ್ರೀಮಂತ ವರ್ಗದವರು ಇಂದು ಮಾದಕ ವ್ಯಸನಕ್ಕೆ ಹೆಚ್ಚು ಬಲಿ ಯಾಗುತ್ತಿದ್ದಾರೆ. ಮಾದಕ ವ್ಯಸನಿಗಳನ್ನು ಅದರಿಂದ ಹೊರಗೆ ತಂದು ಪುನ ವರ್ಸತಿ ಕಲ್ಪಿಸುವುದು, ಅವುಗಳನ್ನು ಮಾರಾಟ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರಗಿಸುವುದು ಹಾಗೂ ಇದರ ವಿರುದ್ಧ ಜಾಗೃತಿ ಅಭಿಯಾನ ವನ್ನು ನಡೆಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಫೇಸ್ಬುಕ್ ಪೇಜಿಗೆ ಚಾಲನೆ ಮತ್ತು ಕಾರ್ಯಕ್ರಮಗಳ ವಿವರದ ಪೋಸ್ಟರ್ ಅನಾವರಣಗೊಳಿಸಲಾಯಿತು. ವೇದಿಕೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಗಣೇಶ್ಪ್ರಾದ್ ಪಾಂಡೇಲು ಉಪಸ್ಥಿತರಿದ್ದರು.
ಸಂಘದ ಸಹಕಾರ್ಯದರ್ಶಿ ಮೈಕಲ್ ರೊಡ್ರಿಗಸ್ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಸ್ವಾಗತಿಸಿದರು. ಉಡುಪಿ ಪ್ರೆಸ್ಕ್ಲಬ್ ಸಂಚಾಲಕ ನಾಗರಾಜ್ ರಾವ್ ವಂದಿಸಿದರು. ರಹೀಮ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಮದ್ಯ, ಗಾಂಜಾದಿಂದ ಶೇ.30ರಷ್ಟು ಅಪರಾಧ
ಮದ್ಯ ಹಾಗೂ ಗಾಂಜಾ ಸೇವನೆಯನ್ನು ತಡೆದರೆ ಸಮಾಜದಲ್ಲಿ ನಡೆಯುವ ಶೇ.30ರಷ್ಟು ಅಪರಾಧಗಳನ್ನು ಕಡಿಮೆ ಮಾಡಬಹುದಾಗಿದೆ. ಹೆಚ್ಚಿನ ಅಪರಾಧ ಗಳು, ಅಪಘಾತಗಳು ಹಾಗೂ ಆತ್ಮಹತ್ಯೆಗಳು ನಡೆಯುತ್ತಿರುವುದು ಮದ್ಯ ಹಾಗೂ ಗಾಂಜಾ ಸೇವನೆಯಿಂ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದರು.
ಮಾದಕ ವಸ್ತುಗಳಿರುವ ಬೇಡಿಕೆಯನ್ನು ಕಡಿಮೆಗೊಳಿಸಿದರೆ ಅದರ ಸರಬ ರಾಜು ಕೂಡ ಕಡಿಮೆ ಮಾಡಬಹುದಾಗಿದೆ. ಆದುದರಿಂದ ಪೊಲೀಸರು ಇದರ ರೂವಾರಿಗಿಂತ ಅವುಗಳನ್ನು ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬೇಕು. ಈ ಪ್ರಕರಣದಲ್ಲಿ ಬಂಧಿತರಾಗುವವರಿಗೆ ಶೀಘ್ರ ಶಿಕ್ಷೆ ಯಾಗುವಂತೆ ಮಾಡಬೇಕು ಮತ್ತು ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕು ಎಂದರು.