ಉಡುಪಿ: ಕರಾವಳಿ ಫ್ಲೈಓವರ್ ಕಾಮಗಾರಿ ವಿಳಂಬ ವಿರೋಧಿಸಿ ಧರಣಿ
ಉಡುಪಿ, ಆ.11: ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕರಾವಳಿ ಬೈಪಾಸ್ ಫ್ಲೈಓವರ್ ಕಾಮಗಾರಿ ವಿಳಂಬ ವಿರೋಧಿಸಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಶನಿವಾರ ಕರಾವಳಿ ಬೈಪಾಸ್ ಬಳಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, ತಲಪಾಡಿ- ಕುಂದಾಪುರ ರಾ.ಹೆ. ಕಾಮಗಾರಿ ಅವೈಜ್ಞಾನಿಕವಾಗಿದ್ದು, ಪ್ರತಿದಿನ ಅಪಘಾತ ಗಳು ಸಂಭವಿಸುತ್ತಿರುತ್ತದೆ. ಕೆಲವು ಕಡೆಗಳಲ್ಲಿ ಸಾರ್ವಜನಿಕರಿಗೆ ರಸ್ತೆ ದಾಟಲು ಸೂಕ್ತ ವ್ಯವಸ್ಥೆಯಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಸರ್ವಿಸ್ ರಸ್ತೆಗಳು ಅಪೂರ್ಣವಾಗಿವೆ. ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿ ನೀರಿ ನಿಂದ ಆವೃ್ತವಾಗುತ್ತಿದೆ ಎಂದು ಆರೋಪಿಸಿದರು.
ಕರಾವಳಿ ಬೈಪಾಸ್ ಮತ್ತು ಕುಂದಾಪುರ ಪ್ಲೈಓವರ್ ಕಾಮಗಾರಿಗಳು ಕಳೆದ ಏಳುವರ್ಷಗಳಿಂದ ಕುಂಟುತ್ತ ಸಾಗುತ್ತಿದೆ. ಇನ್ನು ಕೂಡ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಕೇವಲ 90 ಕಿ.ಮೀ. ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದು ಅವೈಜ್ಞಾನಿಕ. ಈ ನಿಟ್ಟಿನಲ್ಲಿ ಪ್ರಾಧಿಕಾರ ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು. ಇದಕ್ಕೆ ಕಾರಣವಾಗಿರುವ ನವಯುಗ ಕಂಪೆನಿ ವಿರುದ್ಧ ಕೇಸು ದಾಖಲಿಸಿ, ದಂಡ ವಿಧಿಸಿ, ಕಪ್ಪು ಪಟ್ಚಿಗೆ ಸೇರಿಸೇಕು ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ವೇದಿಕೆಯ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಸಂಘಟನಾ ಕಾರ್ಯದರ್ಶಿ ಆನಂದ ಅಮೀನ್ ಅಡ್ಯಾರು, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಸಿರಾಜ್ ಅಡ್ಕರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ, ಕಾರ್ಯದರ್ಶಿ ಸುಭಾಶ್ ಸುದನ್ ಮೊದಲಾದವರು ಉಪಸ್ಥಿತರಿದ್ದರು.