ಠೇವಣಿ ಸಂಗ್ರಹದಲ್ಲೂ ಶೇ. 11ರಷ್ಟು ಏರಿಕೆ: ಡಾ. ರಾಜೇಂದ್ರ ಕುಮಾರ್
ಎಸ್ಸಿಡಿಸಿಸಿ ಬ್ಯಾಂಕ್ಗೆ 28.63 ಕೋಟಿ ರೂ. ದಾಖಲೆಯ ಲಾಭ
ಮಂಗಳೂರು, ಆ.11: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ) 2018ಕ ಆರ್ಟ್ ಅಂತ್ಯಕ್ಕೆ 28.63 ಕೋಟಿ ರೂ.ಗಳ ದಾಖಲೆಯ ಲಾಭವನ್ನು ಗಳಿಸಿ 104 ವರ್ಷಗಳ ಸೇವೆಯಲ್ಲಿ ದಾಖಲೆಯನ್ನು ನಿರ್ಮಿಸಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಬ್ಯಾಂಕ್ನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ನ ವಾರ್ಷಿಕ ಪ್ರಗತಿ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಜನಸಾಮಾನ್ಯರ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಎಸ್ಸಿಡಿಸಿಸಿ 2017ರಲ್ಲಿ 24.07 ಕೋಟಿ ರೂ. ಲಾಭವನ್ನು ಗಳಿಸಿದ್ದು, ಈ ಬಾರಿ ಶೇ. 19ರಷ್ಟು ಏರಿಕೆಯನ್ನು ಕಂಡಿದೆ ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನಲ್ಲಿ 6748.84 ಕೋಟಿ ರೂ.ಗಳ ಒಟ್ಟು ವ್ಯವಹಾರ ದಾಖಲಿಸಿದ್ದು, 2018-19ನೆ ಸಾಲಿಗೆ 7700 ಕೋಟಿ ರೂ.ಗಳ ವ್ಯವಹಾರದ ಗುರಿಯನ್ನು ಹೊಂದಿದೆ. ಇದೇ ಅವಧಿಯಲ್ಲಿ ಬ್ಯಾಂಕ್ ತನ್ನ 105 ಶಾಖೆಗಳ ಮೂಲಕ 3561.24 ಕೋಟಿ ರೂ. ಠೇವಣಿಯನ್ನು ಸಂಗ್ರಹಿಸಿ ಶೇ. 11ರಷ್ಟು ಏರಿಕೆಯನ್ನು ಸಾಧಿಸಿದೆ. ಈ ಮೂಲಕ ಠೇವಣಿ ಸಂಗ್ರಹದಲ್ಲಿಯೂ ಬ್ಯಾಂಕ್ ಮುಂಚೂಣಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಸ್ಪರ್ಧಾತ್ಮಕ ಆರ್ಥಿಕ ಹಿನ್ನಡೆಯ ಹೊರತಾಗಿಯೂ ಬ್ಯಾಂಕ್ 2778.30 ಕೋಟಿ ರೂ. ಮುಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ 1100.13 ಕೋಟಿ ರೂ., ಮಧ್ಯಮಾವಧಿ ಸಾಲ 99.35 ಕೋಟಿ ರೂ. ಸೇರಿ ಕೃಷಿ ಕ್ಷೇತ್ರಕ್ಕೆ 1199.48 ಕೋಟಿ ರೂ. ಸಾಲ ನೀಡಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ 3187.60 ಕೋಟಿ ರೂ.ಗಳಾಗಿದೆ ಎಂದು ಅವರು ತಿಳಿಸಿದರು.
ಸತತ 23 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಶೇ. 100 ಸಾಧನೆ
ಸತತ 23 ವರ್ಷಗಳಿಂದ ಬ್ಯಾಂಕ್ ಕೃಷಿ ಸಾಲ ಮರು ಪಾವತಿಯಲ್ಲಿ ಶೇ. 100ರೊಂದಿಗೆ ರಾಷ್ಟ್ರೀಯ ದಾಖಲೆಯನ್ನು ಮಾಡಿದೆ. 2018ರ ಮಾರ್ಚ್ ಅಂತ್ಯಕ್ಕೆ ಅವಿಭಜಿತ ದ.ಕ. ಜಿಲ್ಲೆಯ 18 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ಮರುಪಾವತಿಯಲ್ಲಿ ಶೇ. 100 ಸಾಧನೆ ಮಾಡಿವೆ ಎಂದು ಡಾ. ರಾಜೇಂದ್ರ ಕುಮಾರ್ ತಿಳಿಸಿದರು.
ಬ್ಯಾಂಕ್ನ 960 ಸಂಘಗಳು ಸದಸ್ಯರಾಗಿದ್ದು, ಇವುಗಳ ಪಾಲು ಬಂಡವಾಳ 139.33 ಕೋಟಿ ರೂ.ಗಳಾಗಿವೆ. ದುಡಿಯುವ ಬಂಡವಾಳ 4844.60 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕಿಂತ ಶೇ. 11.65ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದರು.
ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ 84000 ರೈತರಿಗೆ ರುಪೇ ಕಿಸಾನ್ ಕಾರ್ಡ್ಗಳನ್ನು ವಿತರಿಸಿದೆ ಎಂದು ಅವರು ತಿಳಿಸಿದರು.
ಮುಂದಿನ ಯೋಜನೆಯಾಗಿ, ಬ್ಯಾಂಕ್ ವ್ಯವಹಾರವನ್ನು ಸರಳೀಕರಿಸುವ ನಿಟ್ಟಿನಲ್ಲಿ ಟ್ಯಾಬ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಲು ಬ್ಯಾಂಕ್ ಮುಂದಾಗಿದೆ. ಮನೆ ಅಥವಾ ಕಚೇರಿಗಳಲ್ಲಿ ಕುಳಿತು ಮೊಬೈಲ್ ಸಂಪರ್ಕವಿರುವ ಬ್ಯಾಂಕ್ನ ಟ್ಯಾಬ್ಲೆಟ್ ಬಳಸಿ ತಮ್ಮ ಬ್ಯಾಂಕ್ ಖಾತೆಯನ್ನು ತೆರೆಯುವ ಹಾಗೂ ನಿರ್ವಹಿಸುವ ನೂತನ ವ್ಯವಸ್ಥೆ ಇದಾಗಿದೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ಗ್ರಾಹಕರ ಮೊಬೈಲ್ ಮೂಲಕ ಬ್ಯಾಂಕ್ ಶಾಖೆಗಳ ನಡುವೆ ಹಣ ವರ್ಗಾವಣೆಗೂ ಸಹಕಾರಿಯಾಗಲಿದೆ ಎಂದು ಡಾ. ರಾಜೇಂದ್ರ ಕುಮಾರ್ ವಿವರಿಸಿದರು.
ಗೋಷ್ಟಿಯಲ್ಲಿ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್, ಟಿ.ಜಿ. ರಾಜರಾಮ್ ಭಟ್, ಭಾಸ್ಕರ ಎಸ್. ಕೋಟ್ಯಾನ್, ರಘುರಾಮ್ ಶೆಟ್ಟಿ, ಎಸ್. ರಾಜು ಪೂಜಾರಿ, ವಾದಿರಾಜ್ ಶೆಟ್ಟಿ ಎಂ., ದೇವರಾಜ್ ಕೆ.ಎಸ್., ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಶಶಿಕುಮಾರ್ರೈ, ಜಯರಾಮ್ ರೈ, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಎನ್. ರಮೇಶ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ಮಹಾ ಪ್ರಬಂಧಕ ಗೋಪಿನಾಥ್ ಭಟ್ ಉಪಸ್ಥಿತರಿದ್ದರು.
ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ಗಳ ಮೂಲಕ ಜಿಲ್ಲೆಯಲ್ಲಿ 94126 ರೈತರು 1115 ಕೋಟಿ ರೂ. ಸಾಲ ಪಡೆದಿದ್ದಾರೆ. ರಾಜ್ಯ ಸರಕಾರ ಘೋಷಿಸಿರುವ 1 ಲಕ್ಷ ರೂ.ವರೆಗಿನ ಬೆಳೆಸಾಲ ಮನ್ನಾದಡಿ ಅವಿಭಜಿತ ದ.ಕ. ಜಿಲ್ಲೆಗೆ ಸರಕಾರದಿಂದ 724 ಕೋಟಿ ರೂ.ಗಳು ಬರುವುದನ್ನು ಅಂದಾಜಿಸಲಾಗಿದೆ. ಕಳೆದ ಸಾಲಿನಲ್ಲಿ ರೈತ ಸಾಲ ಮನ್ನಾ ಯೋಜನೆಯಡಿ 183 ಕೋಟಿ ರೂ.ಗಳು ಬಂದಿದ್ದು, 193 ಕೋಟಿ ರೂ. ಬಾಕಿ ಇದೆ.
- ಡಾ. ರಾಜೇಂದ್ರ ಕುಮಾರ್, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್.
ಕಾಮನ್ ಸಾಫ್ಟ್ವೇರ್ಗೆ ಚಿಂತನೆ
ಏಕರೂಪದ ಲೆಕ್ಕಪದ್ಧತಿಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕಾಮನ್ ಸಾಫ್ಟ್ವೇರ್ ಅಳವಡಿಸಲು ಚಿಂತನೆ ಮಾಡಲಾಗಿದೆ. ಮೂರು ವರ್ಷಗಳ ಹಿಂದೆ ನಬಾರ್ಡ್ ಈ ಕಾರ್ಯಕ್ಕೆ ಮುಂದಾಗಿತ್ತು. ಬಳಿಕ ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರ ಕೂಡಾ ಈ ಬಗ್ಗೆ ಹೇಳಿಕೆ ನೀಡಿತ್ತು. ಆದರೆ ಇದುವರೆಗೂ ಆಗದ ಕಾರಣ ಇದೀಗ ಜಿಲ್ಲೆಯ 175 ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಈ ಕಾಮನ್ ಸಾಫ್ಟ್ವೇರ್ಗೆ ಮುಂದಾಗಿದ್ದು, ಬ್ಯಾಂಕ್ನ ಮುಂದಿನ ಮಹಾಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗುವುದು ಎಂದು ಡಾ. ರಾಜೇಂದ್ರ ಕುಮಾರ್ ತಿಳಿಸಿದರು.ಇದೇ ವೇಳೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆಯನ್ನು ಕಾರ್ಯಗತಗೊಳಿಸಲು ಚಿಂತಿಸಲಾಗಿದೆ. ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯೂ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಅವರು ಹೇಳಿದರು.