ಪ್ರಕೃತಿ ಆರಾಧಿಸುವ ಮತ್ತು ಹಿರಿಯರ ಗೌರವಿಸುವ ಸಂಸ್ಕೃತಿ ನಮ್ಮದು-ಶಕುಂತಳಾ ಶೆಟ್ಟಿ
‘ಆಟಿದ ಪೊರ್ಲು’ ಆಚರಣೆ
ಪುತ್ತೂರು, ಆ. 11: ಪ್ರಕೃತಿಯನ್ನು ಆರಾಧಿಸುವ ಹಾಗೂ ಹಿರಿಯರಿಗೆ ಗೌರವ ನೀಡುವ ಸಂಸ್ಕೃತಿ ನಮ್ಮದಾಗಿದ್ದು, ಆಟಿ ತಿಂಗಳಲ್ಲಿ ಗುಡ್ಡದ ದೈವಗಳಿಗೆ ಬಡಿಸುವ ಅಗೇಲು ಸೇವೆ ಪ್ರಕೃತಿಗೆ ಸಲ್ಲುವ ಮತ್ತು ಹಿರಿಯರಿಗೆ ಬಡಿಸುವ ಅಗೇಲು ಕಾರ್ಯಕ್ರಮ ಹಿರಿಯರನ್ನು ಸ್ಮರಿಸುವ ಸಂಸ್ಕೃತಿಯಾಗಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಪುತ್ತೂರಿನ ಸಮರ್ಪಣಾ ಮಹಿಳಾ ವೇದಿಕೆ, ವಜ್ರಮಾತ ಮಹಿಳಾ ಘಟಕ ಮತ್ತು ಸ್ವಾಭಿಮಾನಿ ಸ್ತ್ರೀ ಶಕ್ತಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಇಲ್ಲಿನ ಸ್ವಾಭಿಮಾನಿ ವೇದಿಕೆಯ ಸಭಾಭವನದಲ್ಲಿ ನಡೆದ ‘ಆಟಿದ ಪೊರ್ಲು’ ಕಾರ್ಯಕ್ರಮವನ್ನು ಚೆನ್ನೆಮಣೆ ಆಟ ಆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಜನತೆ ಪಾಲಿಗೆ, ಅದರಲ್ಲೂ ಮುಖ್ಯವಾಗಿ ಬಡವರ ಪಾಲಿಗೆ ಆಟಿ ತಿಂಗಳು ಅತ್ಯಂತ ಕಷ್ಟದ ದಿನಗಳಾಗಿತ್ತು. ಬೇಸಾಯ, ಎಡಬಿಡದೆ ಸುರಿಯುವ ಮಳೆ, ಆಹಾರದ ಸಮಸ್ಯೆಯ ಬೇನೆ, ಜೇಜಾರಿನ ನಡುವೆಯೂ ಒಂದಿಷ್ಟು ಕುಸಲ್ ತೋರಿಸುವ ಕೆಲಸಗಳು ಈ ಹಿಂದೆ ಆಟಿ ತಿಂಗಳಲ್ಲಿ ನಡೆಯುತ್ತಿತ್ತು. ಆದರೆ ಈಗ ಕಷ್ಟದ ಪರಿಸ್ಥಿತಿ ಇಲ್ಲ. ಇದರಿಂದಾಗಿ ಇಂದಿನ ಯುವ ಸಮುದಾಯಕ್ಕೆ ಆಟಿಯ ಮಹತ್ವ ತಿಳಿದಿಲ್ಲ . ಈ ಹಿನ್ನಲೆಯಲ್ಲಿ ಇಂದು ಎಲ್ಲಾ ಕಡೆಗಳಲ್ಲಿ ಆಟಿಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಆಟಿಯ ಕೂಟ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಈ ಹಿಂದೆ ಆಟಿ ತಿಂಗಳಲ್ಲಿ ಆಹಾರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಬಳಸುತ್ತಿದ್ದ ಪ್ರಕೃತಿಯ ಆಹಾರಗಳಲ್ಲಿ ಔಷಧೀಯ ಗುಣಗಳಿವೆ. ಗುಡ್ಡದ ಭೂತ ಇದೆಯೋ ಇಲ್ಲವೋ ಎಂಬುವುದು ನಮಗೆ ಗೊತ್ತಿಲ್ಲ. ಆದರೆ ಆಟಿ ತಿಂಗಳಲ್ಲಿ ಗುಡ್ಡದ ದೈವಗಳಿಗೆ ಅಗೆಲು ಬಡಿಸುವುದರಲ್ಲಿ ಪೃಕೃತಿಗೆ ಸಲ್ಲುವ ಆರಾಧನೆಯ ಸಂಸ್ಕೃತಿ ಇದೆ ಎಂದು ಅವರು ತಿಳಿಸಿದರು.
ಸ್ವಾಭಿಮಾನಿ ಸೊಸೈಟಿಯ ನಿರ್ದೇಶಕ ಎಂ.ಬಿ. ವಿಶ್ವನಾಥ ರೈ, ಸಂಜೀವ ನಾಯಕ್ ಕಲ್ಲೇಗ, ಅಜಿತ್ ಕುಮಾರ್ ಜೈನ್, ಸಮರ್ಪಣಾ ಮಹಿಳಾ ವೇದಿಕೆಯ ಅಧ್ಯಕ್ಷೆ ಗಂಗಾರತ್ನ.ವಿ ರೈ, ವರಮಹಾಲಕ್ಷ್ಮೀ ಪೂಜಾ ಸೇವಾ ಸಮಿತಿಯ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ, ಶಾರದಾ ಕೇಶವ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಿಳೆಯರಿಗೆ ಆಟಿಯ ತಿಂಡಿ ತಿನಿಸುಗಳ ಸ್ಫರ್ಧೆ, ಮಕ್ಕಳಿಗೆ ನೃತ್ಯ ಮತ್ತು ಗಾಯನ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಜ್ರಮಾತಾ ಮಹಿಳಾ ಘಟಕದ ಅಧ್ಯಕ್ಷೆ ನಯನಾ ರೈ ಸ್ವಾಗತಿಸಿದರು. ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿದರು. ಸುಭಾಶ್ ರೈ ಬೆಳ್ಳಿಪ್ಪಾಡಿ ನಿರೂಪಿಸಿದರು.