ಮೋದಿ ನೇತೃತ್ವದ ಸರಕಾರ ಸಂಪೂರ್ಣ ವಿಫಲ: ಸಾತಿ ಸುಂದರೇಶ್
ಬಂಟ್ವಾಳ, ಆ.11: ನರೇಂದ್ರ ಮೋದಿ ನೇತೃತ್ವದ ಸರಕಾರ ತನ್ನ 4 ವರ್ಷಕ್ಕೂ ಹೆಚ್ಚಿನ ಅವಧಿಯ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರವನ್ನು ಮರು ಅಧಿಕಾರಕ್ಕೆ ಬಾರದಂತೆ ತಡೆಯಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಕರ್ನಾಟಕ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಅಭಿಪ್ರಾಯಪಟ್ಟಿದ್ದಾರೆ.
ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸಿ ಜರಗಿದ ಪ್ರತಿಭಟನಾ ಆಂದೋಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.
ಚುನಾವಣಾ ಸಂದರ್ಭದಲ್ಲಿ ದೇಶದ ಮತದಾರರಿಗೆ ನೀಡಿದ ಭರವಸೆಗಳಲ್ಲಿ ಪ್ರಮುಖವಾಗಿ ಬೆಲೆ ಏರಿಕೆ ತಡೆಗಟ್ಟುವ ಮಾತನ್ನು ಈಡೇರಿಸುವ ಬದಲಾಗಿ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡೀಸೆಲ್ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿದೆ. ಮಾತ್ರವಲ್ಲ ತಾನು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ತಡೆಯಲು ಕ್ರಮ ವಹಿಸುವ ಭರವಸೆ ನೀಡಿದ್ದ ಮೋದಿ ಸರಕಾರ ಇದುವರೆಗೂ ಲೋಕಪಾಲರನ್ನು ನೇಮಿಸಿಲ್ಲ. ಸರಕಾರ ಸಂಘಸಂಸ್ಥೆಗಳ ಅವ್ಯವಹಾರ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲು ಪ್ರಮುಖ ಅಸ್ತ್ರವಾಗಿದ್ದ ಮಾಹಿತಿ ಹಕ್ಕು ಕಾನೂನಿಗೆ ತಿದ್ದುಪಡಿ ತಂದು ಅದನ್ನು ಹಲ್ಲಿಲ್ಲದ ಹಾವಿನಂತೆ ಮಾಡಲು ಮೋದಿ ಸರಕಾರ ಮುಂದಾಗಿದೆ ಎಂದು ಹೇಳಿದರು.
ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈ ಸರಕಾರ ತೀರಾ ಜನವಿರೋಧಿಯಾಗಿದ್ದು, ಈ ಸರಕಾರವು ಮರು ಅಧಿಕಾರಕ್ಕೆ ಬಂದರೆ ದೇಶದ ಜನ ಸಾಮಾನ್ಯರ, ರೈತ ಕಾರ್ಮಿಕರ ಬದುಕು ಅಧೋಗತಿಯಾಗಬಹುದು. ಈ ಎಲ್ಲ ವಿಚಾರವಾಗಿ ಸಿಪಿಐನ ರಾಷ್ಟ್ರೀಯ ಮಂಡಳಿಯು ಆ. 1ರಿಂದ 14ರವರೆಗೆ ಜನಾಂದೋಲನದ ಮುಖೇನ ಜನಜಾಗೃತಿ ಮೂಡಿಸುವ ಚಳುವಳಿ ಹಮ್ಮಿಕೊಂಡಿದೆ ಎಂದರು.
ಎಐವೈಎಫ್ನ ರಾಜ್ಯ ಸಂಚಾಲಕ ಎಚ್.ಎಂ. ಸಂತೋಷ್ ಮಾತನಾಡಿ, ಕೇಂದ್ರ ಸರಕಾರವು ಯುವಜನ ವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರವಾಗಿದ್ದು ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬಾರದಂತೆ ತಡೆಯಬೇಕಾಗಿದೆ ಎಂದರು.
ಸಭೆಯನ್ನುದ್ದೇಶಿಸಿ ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ರಾವ್, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಬಿ.ಶೇಖರ್, ಮಾಜಿ ಪುರಸಭಾ ಉಪಾಧ್ಯಕ್ಷ ಪಿ.ವಿಠಲ ಬಂಗೇರ ಮಾತನಾಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಟನಾ ಆಂದೋಲನದ ನೇತೃತ್ವವನ್ನು ಪಕ್ಷದ ಜಿಲ್ಲಾ ಮಂಡಳಿ ಸದಸ್ಯ ಕೆ.ಈಶ್ವರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಸರಸ್ವತಿ ಕೆ.ಜಿಲ್ಲಾ ಮಂಡಳಿ ಸದಸ್ಯೆ ಭಾರತಿ ಪ್ರಶಾಂತ್, ತಾಲೂಕು ಸಮಿತಿ ಸದಸ್ಯರಾದ ಬಾಬು ಭಂಡಾರಿ, ಬೇಬಿ ಪಿ. ಸಂಜೀವ, ಎನ್.ಎ. ಹಮೀದ್, ಬಿ.ಎಂ. ಹಸೈನಾರ್, ಓ ಕೃಷ್ಣ, ದೇರಣ್ಣ ಪೂಜಾರಿ ವಹಿಸಿದ್ದರು.
ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ, ತಾಲೂಕು ಸಹ ಕಾರ್ಯದರ್ಶಿ ಪ್ರೇಮನಾಥ್ ಕೆ ವಂದಿಸಿದರು.