ಕಾಡುಪ್ರಾಣಿಯ ಬೇಟೆ: ನಾಲ್ವರ ಬಂಧನ
ಕುಂದಾಪುರ, ಆ.11: ಜಪ್ತಿ ಗ್ರಾಮದ ಕಾರಂತರ ಹಾಡಿ ಎಂಬಲ್ಲಿ ಅಕ್ರಮ ವಾಗಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಮಾಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಕುಂದಾಪುರ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಜಪ್ತಿ ಗ್ರಾಮದ ಕೆಮ್ಮಣ್ಣು ಗುಂಡಿಯ ಚಂದ್ರ ಕುಲಾಲ್(47), ಮೊಳಹಳ್ಳಿ ಗ್ರಾಮದ ಹೊರ್ನಾಡಿ ನಿವಾಸಿಗಳಾದ ಸುರೇಶ ಕುಲಾಲ್, ಸಂತೋಷ ಕುಲಾಲ್(26), ಸತೀಶ ಕುಲಾಲ್(25) ಎಂಬವರು ಬಂಧಿತ ಆರೋಪಿ ಗಳು. ಚಂದ್ರ ಕುಲಾಲ್ ಮನೆಯಿಂದ ಬರ್ಕ ಪ್ರಾಣಿಯ ಮಾಂಸ, ಬಂದೂಕು, ಚೂರಿ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಶೆಡ್ಯೂಲ್-1ರಲ್ಲಿ ಬರುವ ಬರ್ಕ(ವೌಸ್ ಡೀರ್) ಎಂಬ ಕಾಡು ಪ್ರಾಣಿಯನ್ನು ಅಕ್ರಮವಾಗಿ ಕೋವಿಯಿಂದ ಹೊಡೆದು, ಬೇಟೆಯಾಡಿ ಮಾಂಸ ತಯಾರಿಸಿ ದಾಸ್ತಾನು ಇರಿಸಿಕೊಂಡಿದ್ದು, ಈ ಕುರಿತ ಖಚಿತ ಮಾಹಿತಿಯಂತೆ ಆ.5ರಂದು ಕುಂದಾಪುರ ವಲಯ ಅರಣ್ಯ ಅಧಿಕಾರಿ ಶರತ್ ಬಿ.ಶೆಟ್ಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.