ಉಡುಪಿ: ರೈತರಿಗೆ ಶೇ. 80ರ ಸಹಾಯಧನದಲ್ಲಿ ಗೋಬರ್ ಗ್ಯಾಸ್ ಘಟಕ ಲಭ್ಯ: ಭಾಕಿಸಂ
ಉಡುಪಿ, ಆ.11: ಸಾವಯವ ಕೃಷಿ ಪರಿವಾರಗಳ ಒಕ್ಕೂಟ ಕುರುವಳ್ಳಿ ಹಾಗೂ ರಾಜ್ಯದ ಪ್ರತಿಷ್ಠಿತ ಸಾಪ್ಟವೇರ್ ಕಂಪನಿಯೊಂದರ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿರುವ ಸಾವಯವ ಪರಿವಾರ ಟ್ರಸ್ಟ್ಗಳ ಮೂಲಕ ಜಿಲ್ಲೆಯ ಸಾವಯವ ಕೃಷಿಕರಿಗೆ ಶೇ.80ರ ಸಹಾಯಧನದಲ್ಲಿ ಗೋಬರ್ ಗ್ಯಾಸ್ ಘಟಕವನ್ನು ನೀಡಲಾಗುವುದು ಎಂದು ಸಾವಯವ ಕೃಷಿ ಪರಿವಾರಗಳ ಒಕ್ಕೂಟದ ನಿರ್ದೇಶಕ ಹಾಗೂ ಉಡುಪಿ ಜಿಲ್ಲಾ ಭಾಕಿಸಂ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಕಾರ್ಕಳದ ಸಂಜೀವಿನಿ ಸಾವಯವ ಪರಿವಾರ, ಉಡುಪಿಯ ಕಿಸಾನ್ ಸಾವಯವ ಪರಿವಾರ ಹಾಗೂ ಕುಂದಾಪುರದ ಸೌಭಾಗ್ಯ ಸಾವಯವ ಪರಿವಾರ ಎಂಬ ಮೂರು ನೋಂದಾಯಿತ ಟ್ರಸ್ಟ್ಗಳ ಸದಸ್ಯರಿಗೆ ಈ ಯೋಜನೆ ಬಂದಿದ್ದು, ಆಸಕ್ತ ಸಾವಯವ ರೈತರು ಇದರ ಸದಸ್ಯರಾಗುವ ಮೂಲಕ ಗೋಬರ್ ಗ್ಯಾಸ್ ಘಟಕವನ್ನು ಸಹಾಯಧನದಲ್ಲಿ ಪಡೆಯಲು ಅವಕಾಶವಿದೆ ಎಂದವರು ವಿವರಿಸಿದ್ದಾರೆ.
ಈ ಯೋಜನೆಯ ಲಾಭ ಪಡೆಯಲು ರೈತರ ಮನೆಯಲ್ಲಿ ಕನಿಷ್ಠ 2 ಜಾನುವಾರ, ಕನಿಷ್ಠ ಅರ್ಧ ಎಕರೆ ಕೃಷಿ ಭೂಮಿ ಇರಬೇಕಾಗಿದೆ. ಸಾವಯವ ಕೃಷಿಯನ್ನು ತನ್ನ ಕೃಷಿಕ್ಷೇತ್ರದಲ್ಲಿ ಸಂಪೂರ್ಣವಾಗಿ ಅಥವಾ ಸ್ವಲ್ಪ ಭಾಗದಲ್ಲಾ ದರೂ ಅಳವಡಿಸಿಕೊಂಡಿರಬೇಕು ಅಥವಾ ಅಳವಡಿಸಿಕೊಳ್ಳಲು ಆಸಕ್ತರಾಗಿ ರಬೇಕು.ಯಾವುದೇ ಮಾದರಿ ಗೋಬರ್ ಗ್ಯಾಸ್ ಘಟಕವನ್ನು ರೈತರು ಆಯ್ದು ಕೊಳ್ಳಬಹುದು. ಆದರೆ ಹೊಸದಾಗಿ ರಚಿಸುವ ಘಟಕಗಳಿಗೆ ಮಾತ್ರ ಈ ಸಹಾಯಧನ ಸಿಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೆಸರು ನೊಂದಾಯಿಸಿದ ಬಳಿಕ ರೈತರ ಕೃಷಿ ಕ್ಷೇತ್ರ ತಪಾಸಣೆ ನಡೆಸಿ, ಅನುಮೋದನೆ ಸಿಕ್ಕ ಬಳಿಕವಷ್ಟೇ ಘಟಕದ ರಚನೆಗೆ ಅವಕಾಶವಿರುತ್ತದೆ. ಆಸಕ್ತರು ತಮ್ಮ ಜಾನುವಾರು ಹಾಗೂ ಕೃಷಿ ಭೂಮಿಯ ಮಾಹಿತಿಯೊಂದಿಗೆ, ಸಂಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಜಿಲ್ಲೆಯ ಮೂರೂ ತಾಲೂಕು ಕೇಂದ್ರದಲ್ಲಿರುವ ಭಾಕಿಸಂ ಕಚೇರಿಗಳಲ್ಲಿ ನೀಡಿ, ಹೆಸರು ನೊಂದಾಯಿಸಿಕೊಳ್ಳ ಬಹುದು.
ಕುಂದಾಪುರ: ಭಾಕಿಸಂ, ಮೊದಲ ಮಹಡಿ, ಫ್ರೆಡ್ ಕಾಂಪ್ಲೆಕ್ಸ್, ಬಸ್ಸ್ಟಾಂಡ್ ಹತ್ತಿರ, ಕುಂದಾಪುರ (ದೂರವಾಣಿ:08254-298088), ಉಡುಪಿ: ಭಾಕಿಸಂ, ಮೊದಲನೇ ಮಹಡಿ, ವಾಸುಕೀ ಟವರ್ಸ್, ಕೋರ್ಟ ರಸ್ತೆ, ಉಡುಪಿ (0820-2536450), ಕಾರ್ಕಳ:ಭಾಕಿಸಂ, ಟಿ.ಎ.ಪಿ.ಸಿ.ಎಂ.ಎಸ್. ಹತ್ತಿರ, ಮಂಗಳೂರು ರಸ್ತೆ, ಕಾರ್ಕಳ (08258-233035). ರೈತರು ಹೆಸರು ನೊಂದಾಯಿಸಿಕೊಳ್ಳಲು ಆ.14 ಕೊನೆದಿನವಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.