ಬಜರಂಗದಳದಿಂದ ಸಂಕಲ್ಪ ದಿನಾಚರಣೆ
ಉಡುಪಿ, ಆ.11: ಕರ್ನಾಟಕ ದಕ್ಷಿಣ ಪ್ರಾಂತದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳು ಸೇರಿದಂತೆ ಒಟ್ಟು ಸುಮಾರು 100 ಕಡೆಗಳಲ್ಲಿ ಆ.14ರಂದು ಅಖಂಡ ಭಾರತ ಸಂಕಲ್ಪ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಬಜರಂಗದಳ ದಕ್ಷಿಣ ಪ್ರಾಂತದ ಸಂಚಾಲಕ ಸುನೀಲ್ ಕೆ.ಆರ್.ತಿಳಿಸಿದರು.
ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.2ರಂದು ನಡೆಯುವ ಬಲಿದಾನ ದಿವಸದ ಪ್ರಯುಕ್ತ ರಕ್ತದಾನ ಶಿಬಿರಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಬಾರಿ ಅತಿ ಹೆಚ್ಚು ಪ್ರಮಾಣದಲ್ಲಿ ರಕ್ತವನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದವರು ನುಡಿದರು.
ಉಡುಪಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಗೋಕಳ್ಳತನ ಹಾಗೂ ದೇವಸ್ಥಾನಗಳ ಕಳವು ಪ್ರಕರಣಗಳು ವರದಿಯಾಗುತಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮವನ್ನು ಕೂಡಲೇ ತೆಗೆದುಕೊಂಡು ತಪ್ಪಿತಸ್ಥರನ್ನು ಪತ್ತೆ ಮಾಡಬೇಕು. ಇಲ್ಲದಿದ್ದರೆ ಮಂಗಳೂರಿನಲ್ಲಿರುವಂತೆ ಉಡುಪಿಯಲ್ಲಿ ಗೋರಕ್ಷಕ ದಳವನ್ನು ರಚಿಸಿಕೊಂಡು ನಾವು ಈ ಕೆಲಸ ಮಾಡಲಿದ್ದೇವೆ ಎಂದು ಸುನೀಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಧೀರ್ ಶೆಟ್ಟಿ, ದಿನೇಶ್ ಹೆಬ್ರಿ, ಸುರೇಂದ್ರ ಕೋಟೇಶ್ವರ ಹಾಗೂ ಅನಿಲ್ ಉಡುಪಿ ಉಪಸ್ಥಿತರಿದ್ದರು.