ಆ.19: ದೇವಾಡಿಗರ ಸಂಘದಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ
ಉಡುಪಿ, ಆ.11: ಉಡುಪಿಯ ದೇವಾಡಿಗರ ಸೇವಾ ಸಂಘ, ಮುಂಬಯಿ ದೇವಾಡಿಗ ಸಂಘವೂ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದೊಂ ದಿಗೆ ಆಯೋಜಿಸಿರುವ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಆ.19ರ ರವಿವಾರ ಬೆಳಗ್ಗೆ 9:00ಗಂಟೆಗೆ ಚಿಟ್ಪಾಡಿಯಲ್ಲಿರುವ ದೇವಾಡಿಗರ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸೀತಾರಾಮ ದೇವಾಡಿಗ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರೊಂದಿಗೆ ನೂತನವಾಗಿ ನಿರ್ಮಿಸಲಾಗಿರುವ ಶ್ರೀಏಕನಾಥೇಶ್ವರಿ ಸಭಾಭವನದ ಉದ್ಘಾಟನೆಯೂ ನಡೆಯಲಿದೆ ಎಂದರು.
ರಾಜ್ಯಮಟ್ಟದಲ್ಲಿ ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ದೇವಾಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಲ್ಲದೇ ಉಡುಪಿ ಜಿಲ್ಲಾ ಮಟ್ಟದಲ್ಲಿ ಶೇ.55ಕ್ಕಿಂತ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯದಾದ್ಯಂತದಿಂದ ಈಗಾಗಲೇ 600ಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಸಮಾರಂಭದಲ್ಲಿ ಸುಮಾರು ಎಂಟು ಲಕ್ಷ ರೂ.ಮೊತ್ತದ ವಿದ್ಯಾರ್ಥಿ ವೇತನದ ವಿತರಣೆ ನಡೆಯಲಿದೆ. ಅಲ್ಲದೇ ಸಮಾಜದ ಆರು ಮಂದಿ ಬಡ ವಿಕಲಚೇತನ ವಿದ್ಯಾರ್ಥಿಗಳಿಗೆ ತಿಂಗಳಿಗೆ ತಲಾ 500ರೂ.ಗಳ ಮಾಸಾಶನವನ್ನೂ ವಿತರಿಸಲಾಗುತ್ತದೆ. ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವನ್ನು ನೀಡಲಾಗುವುದು ಎಂದರು.
ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು. ಆರ್ಯಭವ ಪ್ರಶಸ್ತಿ ಪುರಸ್ಕೃತ ದಿನೇಶ್ ಚಂದ್ರಶೇಖರ ನಾಗೂರು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ ಮೊಯ್ಲಿ ಇವರ್ನು ಸನ್ಮಾನಿಸಲಾಗುವುದು ಎಂದರು.
ಶಾಸಕ ಕೆ.ರಘುಪತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಶ್ರೀ ಏಕನಾಥೇಶ್ವರ ಸಭಾಭವನವನ್ನು ಉದ್ಘಾಟಿಸಲಿದ್ದಾರೆ. ಸೀತಾರಾಮ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಗಣೇಶ ದೇವಾಡಿಗ, ಕೃಷ್ಣ ಸೇರಿಗಾರ್, ರತ್ನಾಕರ ಜಿ.ಎಸ್. ಹಾಗೂ ನಿತ್ಯಾನಂದ ಸೇರಿಗಾರ್ ಉಪಸ್ಥಿತ ರಿದ್ದರು.