ನಂ. 1 ಸಂಸದ ದ.ಕ. ಜಿಲ್ಲೆಗೆ 10 ವರ್ಷದಲ್ಲಿ ಕೊಟ್ಟ ಕೊಡುಗೆ ಏನು: ಎಂ.ಎಸ್. ಮಹಮ್ಮದ್ ಪ್ರಶ್ನೆ
ಸುಳ್ಯ , ಆ. 11: ಕಳೆದ 10 ವರ್ಷಗಳಿಂದ ಜಿಲ್ಲೆಯ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ದ.ಕ. ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ತಂದಿಲ್ಲ. ಯೋಜನೆಗಳು ಯಾವುದು ಕೂಡ ಸಂಪೂರ್ಣ ಆಗಿಲ್ಲ. ನಳಿನ್ ಕುಮಾರ್ ಕಟೀಲ್ ಜಿಲ್ಲೆ ಕಂಡ ಅತ್ಯಂತ ದುರ್ಬಲ ಸಂಸದ. ನಂಬರ್ ಒನ್ ಸಂಸದ ಜಿಲ್ಲೆಗೆ ಕೊಟ್ಟ ಕೊಡುಗೆ ಏನು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಎಂ.ಎಸ್. ಮಹಮ್ಮದ್ ಪ್ರಶ್ನಿಸಿದ್ದಾರೆ.
ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸ ಮಾತನಾಡಿ, ನಾನು ನಂಬರ್ ಒನ್ ಸಂಸದ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ತಿರುಗುತ್ತಿದ್ದಾರೆ. ಆದರೆ ಜನರು ಈ ಮಾತನ್ನು ಹೇಳುತ್ತಿಲ್ಲ. ಪ್ರತಿಯೊಬ್ಬ ಸಂಸದರಿಗೆ ಪ್ರತಿ ವರ್ಷ 5 ಕೋಟಿ ಅಭಿವೃದ್ದಿ ಅನುದಾನ ಬರುತ್ತದೆ. ಇದನ್ನು ತಂದು ಕೆಲಸ ಮಾಡಲು ನಳಿನ್ ಕುಮಾರ್ ಅವರೇ ಆಗಬೇಕಾಗಿಲ್ಲ. ವಿಶೇಷ ಅನುದಾನ ತಂದು ಕೆಲಸ ಮಾಡಿದಾಗ ಮಾತ್ರ ನಂಬರ್ ಒನ್ ಸಂಸದ ಎನಿಸಿಕೊಳ್ಳುತ್ತಾರೆ. ಆದರೆ ನಳಿನ್ ಕುಮಾರ್ ಕಟೀಲ್ ಒಂದು ಪೈಸೆಯೂ ವಿಶೆಷ ಅನುದಾನ ತಂದಿಲ್ಲ. ಮಂಗಳೂರಿನ ಪಂಪುವೆಲ್ ತೊಕ್ಕೊಟ್ಟು ಪ್ಲೆ ಒವರ್ ಕಾಮಗಾರಿ ಯಾವ ಸ್ಥಿತಿಯಲ್ಲಿದೆ ನೋಡುವಾಗ ತಿಳಿಯುತ್ತದೆ. ಕೇವಲ ಭಾಷಣ, ಪೊಳ್ಳು ಭರವಸೆ, ಅಪಪ್ರಚಾರದ ಮೂಲಕ ದಿನ ಕಳೆಯುತ್ತಿದ್ದಾರೆ. ಅನುದಾನ ತಂದಿದ್ದರೆ ಯಾವ ಇಲಾಖೆಯಿಂದ ಎಷ್ಟೆಷ್ಟು ಅನುದಾನ ತಂದಿದ್ದಾರೆ, ಎಲ್ಲೆಲ್ಲಿ ಅಭಿವೃದ್ದಿ ಮಾಡಿದ್ದೇನೆ ಎಂಬುವುದನ್ನು ತಿಳಿಸಲಿ ಎಂದು ಸವಾಲೊಡ್ಡಿದ್ದರು.
ಸಂಸದರಾಗಿ ಅವರು ಆರ್.ಎಸ್.ಎಸ್, ಸಂಘ ಪರಿವಾರಕ್ಕೆ ಶಕ್ತಿ ಕೊಡಲು ಅನುದಾನ ಖರ್ಚು ಮಾಡಿದಾರೆಯೇ ಹೊರತು ಅಭಿವೃದ್ದಿಗೆ ಖರ್ಚು ಮಾಡಿಲ್ಲ. ತನಗೆ ಮತ ನೀಡಿ ಗೆಲ್ಲಿಸಿದ ಜನರ ಊರನ್ನು ಅಭಿವೃದ್ದಿ ಮಾಡಲು ಮರೆತಿದ್ದಾರೆ. ಗ್ರಾಮೀಣ ಭಾಗದ ಅಭಿವೃದ್ದಿ ಸಂಪೂರ್ಣ ನೆಲಕಚ್ಚಿದೆ ಎಂದು ಹೇಳಿದರು.
ಮೋದಿಯವರು ಪ್ರಧಾನಿ ಯಾದ ಬಳಿಕ ಆದರ್ಶ ಗ್ರಾಮ ಕಲ್ಪನೆಯನ್ನು ಜಾರಿಗೆ ತಂದರು. ಕಟೀಲ್ ಅವರು ಸುಳ್ಯದ ಬಳ್ಪ ಗ್ರಾಮವನ್ನು ಆಯ್ಕೆ ಮಾಡಿದರೂ ಹೊರತು ಅಲ್ಲಿಯೂ ಅಭಿವೃದ್ದಿ ಕೆಲಸ ಮಾಡಿಲ್ಲ. ಬಳ್ಪ ಗ್ರಾಮದ ಅಭಿವೃದ್ದಿಗೆ ವಿಶೇಷ ಅನುದಾನ ಏನೂ ತಂದಿಲ್ಲ. 5 ಕೋಟಿ ಅನುದಾನದಲ್ಲೇ ಕೆಲಸ ಮಾಡಬೇಕು ಎಂದು ಹೇಳಿದ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ವಿಕಾಸ ಗ್ರಾಮ ಯೋಜನೆಯನ್ನು ಜಾರಿಗೊಳಿಸಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿ ಅನುದಾನ ನೀಡಿದ್ದಾರೆ ಎಂದು ಅವರು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರು ಅಪಪ್ರಚಾರ ನಡೆಸ ಜಿಲ್ಲೆಯ 6 ಕ್ಷೇತ್ರವನ್ನು ಗೆದ್ದಿದ್ದರು. ಆದರೆ ಮುಂದಿನ ಚುನಾವಣೆಯಲ್ಲಿ ಹೀಗೆ ಆಗುವುದಿಲ್ಲ. ಕಾಂಗ್ರೆಸ್ ರಮಾನಾಥ ರೈ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ ಎಂದು ಇದೇ ಸಂದರ್ಭ ತಿಳಿಸಿದರು.
ಸಿ.ಆರ್.ಎಫ್ ಅನುದಾನದ ಕುರಿತು ಪ್ರಶ್ನಿಸಿದಾನ, ಈ ಅನುದಾನ ಸಂಸದರ ಮೂಲಕ ಬರುವುದಲ್ಲ. ಅದು ಕೇಂದ್ರದಿಂದ ರಾಜ್ಯಕ್ಕೆ ನೇರವಾಗಿ ಬರುತ್ತದೆ ಎಂದು ಹೇಳಿದರು.
ಮಾಜಿ ಜಿ.ಪಂ ಸದಸ್ಯ ಧನಂಜಯ ಅಡ್ಪಂಗಾಯ ಮಾತನಾಡಿ ಅಜ್ಜಾವರ-ಮಂಡೆಕೋಲು ರಸ್ತೆಗೆ ಸಿ.ಆರ್.ಎಫ್ ಅನುದಾನ ತಡವಾಯಿತೆಂದರೆ ಅದಕ್ಕೆ ಸರಕಾರವನ್ನು ದೂಷಿಸುವುದಲ್ಲ. ಪರ್ಯಾಯವಾಗಿ ಏನು ಮಾಡಿದ್ದಾರೆ ಅನ್ನುವುದು ಬೇಕು. ಅದು ಜಿಲ್ಲಾ ಪಂಚಾಯತ್ ರಸ್ತೆ. ಆದರೆ ರುರಸ್ತಿಗೆ ಆ ಸದಸ್ಯರು ಏನು ಕ್ರಮ ಕೈಗೊಂಡಿದ್ದಾರೆ. ಶಾಸಕರು ಗುಂಡಿ ಮುಚ್ಚಲು ಏನು ಮಾಡಿದ್ದಾರೆ. ತಾ.ಪಂನವರು ಏನು ಮಾಡಿದ್ದಾರೆ. ಅವರು ಕಾಂಗ್ರೆಸ್ ಮೇಲೆ ಆರೋಪ ಮಾಡಿದರೆ ಹೊರತು ಅಭಿವೃದ್ದಿ ಮಾಡುವ ಚಿಂತಣೆಯನ್ನೇ ಮಾಡಿಲ್ಲ. ನಾವು ಜಿ.ಪಂ ಸದಸ್ಯರಾಗಿದ್ದ ಸಂದರ್ಭ ಆ ರಸ್ತೆಗಳೆಲ್ಲ ಎಚ್ಟು ಚೆನ್ನಾಗಿದ್ದವು. ಬಳಿಕ ಅದಕ್ಕೆ ಯಾರು ಅನುದಾನ ತರಲಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಸುಳ್ಯ ಬ್ಲಾಕ್ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಉಲ್ಲಾಸ್ ಕೋಟ್ಯಾನ್, ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ಕಾಮತ್, ಬೆಟ್ಟ ರಾಜಾರಾಂ ಭಟ್, ಗೀತಾ ಕೋಲ್ಚಾರ್, ಮಹಮ್ಮದ್ ಕುಂಞಿ ಗೂನಡ್ಕ, ಎಸ್. ಸಂಶುದ್ದೀನ್, ದಿನೇಶ್ ಅಂಬೆಕಲ್ಲು, ಸಿದ್ದಿಕ್ ಕೊಕ್ಕೊ, ಶಿವಕುಮಾರ್ ಕೌಡಿಚ್ಚಾರ್, ಜಿ.ಕೆ. ಹಮೀದ್, ಕೆ,ಎಂ. ಮುಸ್ತಫ, ನಂದರಾಜ್ ಸಂಕೇಶ, ಗೋಕುಲ್ದಾಸ್ ಮೊದಲಾದವರು ಉಪಸ್ಥಿತರಿದ್ದರು.