ಹಾಜಿ ಅಬ್ದುಲ್ಲರನ್ನು ನೆನಪಿಸುವುದು ನಾಗರಿಕ ಸಮಾಜದ ಜವಾಬ್ದಾರಿ: ರಾಮದಾಸ್ ಪ್ರಭು
ಉಡುಪಿ, ಆ.12: ಯಾವುದೇ ಜಾತಿ, ಧರ್ಮದೊಂದಿಗೆ ಗುರುತಿಸಿಕೊಳ್ಳದೆ ಇಡೀ ಸಮಾಜಕ್ಕಾಗಿ ತಮ್ಮ ಸಂಪತ್ತು ಕಳೆದುಕೊಂಡು ಸಮಕಾಲೀನ ಜನ ನಾಯಕರಾಗಿದ್ದ ಹಾಜಿ ಅಬ್ದುಲ್ಲ, ಕುದ್ಮಲ್ ರಂಗರಾವ್ ಹಾಗೂ ಕಾರ್ನಾಡ್ ಸದಾಶಿವ ರಾವ್ ಅವರನ್ನು ಜನತೆ ಬಹುಬೇಗನೆ ಮರೆತು ಬಿಟ್ಟಿದ್ದಾರೆ ಎಂದು ಅಜ್ಜರಕಾಡು ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಕ ರಾಮದಾಸ್ ಪ್ರಭು ಹೇಳಿದ್ದಾರೆ.
ಹಾಜಿ ಅಬ್ದುಲ್ಲಾ ಟ್ರಸ್ಟ್, ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಕಾರ್ಪೊರೇಷನ್ ಬ್ಯಾಂಕ್, ಜಿಲ್ಲಾ ಮುಸ್ಲಿಮ್ ಒಕ್ಕೂಟ, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೆಶನ್, ಉಡುಪಿ ಟೌನ್ ಕೋ-ಆಪ ರೇಟಿವ್ ಬ್ಯಾಂಕ್ ಇವುಗಳ ಆಶ್ರಯದಲ್ಲಿ ರವಿವಾರ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಹಾಲ್ನಲ್ಲಿ ಆಯೋಜಿಸಲಾದ ಹಾಜಿ ಅಬ್ದುಲ್ಲಾ ಸಂಸ್ಮರಣಾ ದಿನಾ ಚರಣೆಯಲ್ಲಿ ಅವರು ಮಾತನಾಡುತಿದ್ದರು.
1900-50ರ ಅರ್ಧ ಶತಮಾನದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಶಿಕ್ಷಣ, ಬ್ಯಾಂಕಿಂಗ್ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅಡಿಪಾಯ ಹಾಕಿದ ಈ ಮೂವರು, ಯಾವುದೇ ಜಾತಿ, ಧರ್ಮದ ನಾಯಕರಾಗಿರದೆ ಜನ ನಾಯಕರಾಗಿದ್ದರು. ಜಾತಿ, ಧರ್ಮದೊಂದಿಗೆ ತಳುಕು ಹಾಕಿಕೊಂಡವರನ್ನು ಜನ ಮರೆಯುವುದು ಕಡಿಮೆ. ಆದರೆ ಇವರು ಯಾವುದೇ ಜಾತಿ ಧರ್ಮಗಳ ಜೊತೆ ಗುರುತಿಸಿ ಕೊಂಡಿರದ ಕಾರಣಕ್ಕಾಗಿಯೇ ಜನ ಮರೆತು ಬಿಟ್ಟಿದ್ದಾರೆ ಎಂದರು.
ದೇಶ ವಿದೇಶದ ಇತಿಹಾಸ ತಿಳಿದಿರುವ ನಮ್ಮ ಮಕ್ಕಳಿಗೆ ಸ್ಥಳೀಯರೇ ಆಗಿರುವ ನಮ್ಮ ಈ ಮೂವರ ಸಾಧಕರ ಹೆಸರು ತಿಳಿಯದಿರುವುದು ದುರಂತ. ಸಹಕಾರಿ ಚಳವಳಿಯಲ್ಲಿ ಹಾಜಿ ಅಬ್ದುಲ್ಲಾರ ಪಾತ್ರ ಮಹತ್ವದ್ದಾಗಿದೆ. ಬನ್ನಂಜೆಯಲ್ಲಿ ಪರಿಶಿಷ್ಟ ಜಾತಿಯ ಮಕ್ಕಳ ಶಿಕ್ಷಣಕ್ಕೆ ಭೂಮಿ ನೀಡಿದ ಹಾಜಿ ಅಬ್ದುಲ್ಲಾ, ಕುದ್ಮಲ್ ರಂಗ ರಾವ್ ಅವರ ದಲಿತ ಚಳವಳಿಗೆ ಹೆಗಲು ಕೊಟ್ಟಿದ್ದರು. ಶಿಕ್ಷಣ ಚಳವಳಿ ಗೂ ತನ್ನ ಸಂಪತ್ತು ಭೂಮಿ ದಾನ ಮಾಡಿದ್ದರು ಎಂದು ಅವರು ತಿಳಿಸಿದರು.
ಸಮಾಜದ ನಿಜವಾದ ನಾಯಕರಾದ ಇವರನ್ನು ನಾವು ನೆನಪಿನಲ್ಲಿಟ್ಟು ಕೊಳ್ಳುವ ಕಾರ್ಯ ಮಾಡಬೇಕಾಗಿದೆ. ಈ ಮೂವರು ನಾಯಕರಿಂದ ರಾಜ ಕಾರಣಿಗಳಿಗೆ ಯಾವುದೇ ಲಾಭ ಇಲ್ಲದ ಕಾರಣ ಸರಕಾರ ಈ ಕೆಲಸ ಮಾಡಲ್ಲ. ಆದುದರಿಂದ ನಾಗರಿಕ ಸಮಾಜವೇ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಹಾಜಿ ಅಬ್ದುಲ್ಲಾ ಪುಸ್ತಕದ ಲೇಖಕ, ವಿಮರ್ಶಕ ಪ್ರೊ.ಮುರುಳೀಧರ ಉಪಾಧ್ಯಾಯ, ಉಡುಪಿ ಕಾರ್ಪೊರೇಷನ್ ಬ್ಯಾಂಕ್ನ ಉಪ ವಲಯ ಮುಖ್ಯಸ್ಥ ಕೆ.ಎಸ್.ಶ್ಯಾನಭೋಗ್, ಉಡುಪಿ ಟೌನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೃಷ್ಣರಾಜ್ ಸರಳಾಯ, ರಕ್ತನಿಧಿ ಕೇಂದ್ರದ ಅಧಿಕಾರಿ ಶಶಿ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಮಹಾತ್ಮಗಾಂಧಿ ಮೈನ್ ಶಾಲೆಯ ಪ್ರತಿಭಾವಂತ ನಾಲ್ಕು ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಟ್ರಸ್ಟಿಗಳಾದ ಸಿರಾಜ್ ಅಹ್ಮದ್, ಇಕ್ಬಾಲ್ ಮನ್ನಾ ಉಪಸ್ಥಿತರಿದ್ದರು.
ಮನೋರೋಗ ತಜ್ಞ ಡಾ.ಪಿ.ವಿ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಹುಸೇನ್ ಕೋಡಿಬೆಂಗ್ರೆ ಸ್ವಾಗತಿಸಿದರು. ಯೋಗೀಶ್ ಶೇಟ್ ವಂದಿಸಿ ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.