ರಾಜ್ಯಮಟ್ಟದ ಸಬ್ಜೂನಿಯರ್ ಭರತನಾಟ್ಯ ಸ್ಪರ್ಧೆ ಉದ್ಘಾಟನೆ
ಉಡುಪಿ, ಆ.12: ಪರ್ಯಾಯ ಪಲಿಮಾರು ಮಠದ ಆಶ್ರಯ ದಲ್ಲಿಉಡುಪಿಯ ಹೆಜ್ಜೆಗೆಜ್ಜೆ ಪ್ರತಿಷ್ಠಾನದ ರಜತ ಮಹೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ರಾಜ್ಯಮಟ್ಟದ ಸಬ್ಜೂನಿಯರ್ ಭರತನಾಟ್ಯ ಸ್ಪರ್ಧೆ ಯನ್ನು ಅದಮಾರು ಕಿರಿಯ ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ, ಕಲೆಗೆ ಪ್ರೊತ್ಸಾಹ ಕೊಡುವ ಮೂಲಕ ಕಲಾಭಿವೃದ್ಧಿಯು ಸಾಧ್ಯವಾಗುತ್ತದೆ. ಬಾಲ್ಯದಲ್ಲೆಯೇ ಸಾಹಿತ್ಯಕ್ಕೆ ತಕ್ಕಂತೆ ಭಾವನೆಯನ್ನು ಅಭಿವ್ಯಕ್ತ ಪಡಿಸಿ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿ ಜ್ಞಾನ ವೃದ್ಧಿ ಮಾಡುವುದು ಉತ್ತಮ ಎಂದು ಹೇಳಿದರು.
ಮುಖ್ಯ ಅಥಿತಿಯಾಗಿ ಪಲಿಮಾರು ಮಠದ ದಿವಾನ ವಿದ್ವಾನ್ ವೇದವ್ಯಾಸ ತಂತ್ರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿಯ ಹಿರಿಯ ನೃತ್ಯ ಗುರುಗಳಾದ ಪ್ರತಿಭಾ ಸಾಮಗ, ತೀರ್ಪುಗಾರರಾದ ಸುಮಾ ಕೃಷ್ಣಮೂರ್ತಿ, ಅಪೂರ್ವ ಸಮೀರ್, ಭಾಗ್ಯ ನಾವುಡ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕಿ ಯಶ ರಾಮಕೃಷ್ಣ ಸ್ವಾಗತಿಸಿದರು. ವಿದ್ವಾನ್ ಗೋಪಾಲ ಆಚಾರ್ಯ ವಂದಿಸಿದರು. ಆದರ್ಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ದರು.