ಪಿಲಿಕುಳದಲ್ಲಿ ಆಟಿಕೂಟದ ಸಂಭ್ರಮ: ತಿಂಡಿತಿನಸು, ಮನರಂಜನೆಯ ಮಹಾಪೂರ
ಮಂಗಳೂರು, ಆ. 12: ಕರಾವಳಿಯಲ್ಲಿ ಆಟಿ (ಆಷಾಡ) ಮಾಸ ಬಂದರೆ ಸಾಕು ಅಲ್ಲಲ್ಲಿ ಆಟಿ ಕೂಟ ಆಯೋಜನೆಯಾಗುತ್ತದೆ. ಇಂದು ಪಿಲಿಕುಳ ನಿಸರ್ಗಧಾಮದಲ್ಲಿ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಿಂದ ಆಯೋಜಿಸಲಾದ ಪಿಲಿಕುಳ ಆಟಿಕೂಟ 2018 ವಿಶಿಷ್ಟ ವಾಗಿ ನಡೆಯಿತು.
ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿರುವ ಗುತ್ತುಮನೆಯಲ್ಲಿ ಆಯೋಜಿಸಲಾದ ಆಟಿಕೂಟದಲ್ಲಿ ಪ್ರಧಾನ ಆಕರ್ಷಣೆಯಾಗಿದ್ದದ್ದು ಆಟಿ ತಿಂಗಳಲ್ಲಿ ಹಿಂದಿನ ಕಾಲದಲ್ಲಿ ತಯಾರಿಸುತ್ತಿದ್ದ ತಿಂಡಿ ತಿನಸುಗಳು. ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ತಿಂಡಿ ತಿನಿಸುಗಳು ಈಗಿನ ಕಾಲದಲ್ಲಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ನಡೆಯುವ ಆಟಿಕೂಟದಲ್ಲಿ ಇದನ್ನು ನೆನೆಯುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮಂಗಳೂರು ತಾಲೂಕು ಮಹಿಳಾ ಒಕ್ಕೂಟದ ಸದಸ್ಯೆಯರು ತಯಾರಿಸಿದ ಗುರಿಯಪ್ಪ, ಪೆಲಕಾಯಿದ ಗಟ್ಟಿ, ಗಾರಿಗೆ, ಪತ್ರೊಡೆ, ಗೆಂಡದ ಅಡ್ಯೆ, ತೆಕ್ಕರೆದ ಅಡ್ಯೆ, ಮಂಜಲ್ ಇರೆದ ಗಟ್ಟಿ, ಹಾಲುಬಾಯಿ, ಮೂಡೆಗಸಿ ಗಳ ತಿಂಡಿಗಳು ಇಲ್ಲಿ ಎಲ್ಲರ ಮೆಚ್ಚುಗೆ ಗೆ ಪಾತ್ರವಾಯಿತು.
ಇನ್ನು ಮಧ್ಯಾಹ್ನದ ಭೋಜನದಲ್ಲಿ ಅಂಬಟೆಕಾಯಿ ಉಪ್ಪಿನಕಾಯಿ, ತಿಮರೆ ಚಟ್ನಿ, ನೀರು ಮಾವಿನಕಾಯಿ ಚಟ್ನಿ, ಮುಳ್ಳು ಸೌತೆ ಪಚ್ಚೋಡಿ, ಉಪ್ಪಡ್ ಪಚ್ಚಿಲ್, ಕಡ್ಲೆ ಪಲ್ಯ, ಸೊಜಂಕ್, ಹಲಸಿನ ಬೀಜ ಉಪ್ಪುಕರಿ,ಕನಿಲೆ ಮತ್ತು ಹೆಸರು ಗಸಿ, ಮೆತ್ತೆ ಗಂಜಿ, ಪತ್ರೊಡೆ, ಹಲಸಿನ ಎಲೆ ಕೊಟ್ಟಿಗೆ, ಹರಿವೆ ದಂಟು, ಸೇವು ದಂಟು, ಹೀರೆ ಮತ್ತು ಪಡುವಲಕಾಯಿ ಸಾಂಬಾರ್, ಸೌತೆ ಕಾಯಿಹುಳಿ, ಕುಚ್ಚಿಗೆ ಮತ್ತು ಬೆಳ್ತಿಗೆ ಅನ್ಬ, ಹುರುಳಿ ಸಾರು, ಜೀಗುಜ್ಜೆ ಅಥವಾ ಸಿಮ್ಲಾಮೆಣಸು ಪೋಡಿ, ಅಂಬಡೆ, ಕಂಚಲ ಮೆಣಸು ಕಾಯಿ, ಸೇವು ತೇಟ್ಲ ಮತ್ತು ಸೌತೆ ಸಾಂಬಾರ್, ಹಲಸಿನ ಹಣ್ಣು ಅಪ್ಪ, ಸಾರ್ನಡ್ಯೆ ಪಾಯಸ, ಮಜ್ಜಿಗೆ ಯೊಂದಿಗೆ ಭೂರಿ ಭೋಜನ ಏರ್ಪಡಿಸಲಾಗಿದ್ದು ಕಾರ್ಯಕ್ರಮಕ್ಕೆ ಬಂದಿದ್ದವರು ಇವುಗಳ ರುಚಿ ಸವಿದರು.