ನಿರಾಶ್ರಿತರಾಗಿ ಊರು ಬಿಟ್ಟ ನೆನಪಿಲ್ಲ, ಆದರೆ ಅಜ್ಜನ ಕೊನೆಯುಸಿರು ನೆನಪಿದೆ: ಜಯಮಾಲ
ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟ ಸಚಿವೆ
ಮಂಗಳೂರು, ಆ.12: ಮೂರು ವರ್ಷದ ಎಳೆಯ ಮಗುವಾಗಿದ್ದ ನನಗೆ ಅಂದು ನವಮಂಗಳೂರು ಬಂದರು ಯೋಜನೆಯಲ್ಲಿ ನಿರಾಶ್ರಿತರಾಗಿ ಊರು ಬಿಟ್ಟದ್ದು ನೆನಪಿಲ್ಲ. ಆದರೆ ನನ್ನ ಪ್ರೀತಿಯ ಅಜ್ಜ ನಿಧನ ಹೊಂದಿದ್ದು, ನನಗೆ ಸರಿಯಾಗಿ ನೆನಪಿದೆ. ನನ್ನ ಕೈಯಿಂದ ಅಜ್ಜನ ಬಾಯಿಗೆ ಕೊನೆಯದಾಗಿ ತುಳಸಿ ನೀರನ್ನು ಕುಡಿಸಿದ್ದು ನನ್ನ ನೆನಪಿನಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲ ಹೇಳಿದರು.
ನಾರಾಯಣ ಗುರು ಯುವ ವೇದಿಕೆ ವತಿಯಿಂದ ನಗರದ ಪುರಭವನದಲ್ಲಿ ರವಿವಾರ ನಡೆದ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ, ಸಾಧನಾಶೀಲರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ತನ್ನ ಬಾಲ್ಯದ ನೆನಪು ಬಿಚ್ಚಿಟ್ಟರು.
ಅಜ್ಜನಿಗೆ ನಾನಂದ್ರೆ ತುಂಬಾ ಪ್ರೀತಿ. ನನ್ನ ಹುಟ್ಟು ಹೆಸರು ಜಯಂತಿ. ಆದರೆ ನನ್ನ ಅಜ್ಜನಿಗೆ ಜಯಂತಿ ಎಂದು ನನ್ನ ಹೆಸರು ಕೂಗಲು ಬರುತ್ತಿರಲಿಲ್ಲ. ಅವರು ನನ್ನನ್ನು ಪ್ರೀತಿಯಿಂದ ‘ಜಾಂತಿ’ ಎಂದೇ ಕರೆಯುತ್ತಿದ್ದರು ಎಂದ ಸಚಿವೆ ಜಯಮಾಲಾ, ಪಣಂಬೂರಿನಿಂದ ನಾವು ಚಿಕ್ಕಮಗಳೂರಿಗೆ ಹೋದರೂ ನಾವು ಪ್ರತಿ ವರ್ಷ ಮಂಗಳೂರಿಗೆ ಬರುತ್ತಿದ್ದೆವು. ನಮ್ಮ ದೇವರು, ದೈವ, ನಾಗ, ಇದು ಯಾವುದನ್ನು ಕೂಡ ಬಿಟ್ಟಿರಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ನನ್ನ ತಾಯಿ ನಿತ್ಯವೂ ಕಣ್ಣೀರು ಹಾಕುತ್ತಿದ್ದುದನ್ನು ನಾನು ನೋಡುತ್ತಿದ್ದೆ ಎಂದರು.
ನಾನು ಸಿನಿಮಾ ರಂಗಕ್ಕೆ ಬಂದ ಬಳಿಕ ಮನೆಯವರ ಕಷ್ಟಗಳೆಲ್ಲ ದೂರವಾಯಿತು. ಆದರೆ ನನ್ನ ತಾಯಿ ಕೊನೆಯುಸಿರೆಳೆಯುವವರೆಗೂ ಪಣಂಬೂರನ್ನು ನೆನಪಿಸುತ್ತಿದ್ದರು. ಇವತ್ತಿಗೂ ಜನ್ಮ ಕೊಟ್ಟ ಈ ನಾಡನ್ನು ಮರೆಯಲು ಸಾಧ್ಯವಿಲ್ಲ ಎಂದ ಸಚಿವೆ ಜಯಮಾಲಾ, ಬ್ರಹ್ಮಶ್ರೀ ನಾರಾಯಣ ಗುರು ಅನ್ಯಾಯದ ವಿರುದ್ಧ ಹೋರಾಟ ಮಾಡದೇ ಇರುತ್ತಿದ್ದರೆ ನಮ್ಮಂತಹ ಹೆಣ್ಣು ಮಕ್ಕಳು ಇವತ್ತು ಇಂತಹ ಒಂದು ಸೆರಗನ್ನು ಹೊದ್ದುಕೊಳ್ಳಲು, ಮೈಮೇಲೆ ಕುಪ್ಪಸವನ್ನು ತೊಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಂಕನಾಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್, ಫ್ಯಾಶನ್ ಕೋರಿಯಾಗ್ರರ್ನ ಸನ್ನಿಧ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕೃಷ್ಣ ಜೆ. ಪಾಲೆಮಾರ್ ವಿದ್ಯಾರ್ಥಿ ವೇತನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಡಿ. ವೇದವ್ಯಾಸ ಕಾಮತ್, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಬಿ. ಪದ್ಮನಾಭ ಕೋಟ್ಯಾನ್, ಉದ್ಯಮಿಗಳಾದ ಅಕ್ಷಿತ್ ಸುವರ್ಣ, ಹರೀಶ್ ನೀರ್ಮಾರ್ಗ, ಚಿತ್ರನಟ ರಾಹುಲ್ ಅಮೀನ್, ಅಖಿಲ ಭಾರತ ಬಿಲ್ಲವ ಯೂನಿಯನ್ನ ಮಹಿಳಾ ವಿಭಾಗದ ಅಧ್ಯಕ್ಷೆ ಸುಮಲತಾ ನವೀನ್ಚಂದ್ರ ಸುವರ್ಣ, ಬ್ರಹ್ಮಶ್ರೀ ಬಂಗಾರದ ಪದಕ ಪ್ರಾಯೋಜಕ ರತೀಂದ್ರನಾಥ್ ಎಚ್., ನಾರಾಯಣ ಗುರು ಯುವವೇದಿಕೆಯ ಅಧ್ಯಕ್ಷ ಪದ್ಮನಾಭ, ಸಂಚಾಲಕ ಬೃಜೇಶ್ ಅಂಚನ್, ನೀಲಯ್ಯ ಎಂ. ಅಗರಿ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾಭ್ಯಾಸ ವಂಚಿತ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ಸಮಾಜದ ಗುರಿಯಾಗಬೇಕು. ಒಂದು ದಿನ ದೇವಸ್ಥಾನಕ್ಕೆ ಹೋಗದಿದ್ದರೂ ಪರವಾಗಿಲ್ಲ, ಆದರೆ ಬಡ ಮಕ್ಕಳ ವಿದ್ಯೆಗೆ ನೆರವಾಗುವುದನ್ನು ತಪ್ಪಿಸಬೇಡಿ ಎಂದು ಜಯಮಾಲಾ ನುಡಿದರು.
ಕರಾವಳಿಯಲ್ಲಿ ಈಗಲೂ ಧಾರ್ಮಿಕ ವರ್ಗದಿಂದ ಬಿಲ್ಲವ ಸಮಾಜದ ಶೋಷಣೆ ನಡೆಯುತ್ತಿದೆ. ಬಿಲ್ಲವ ಯುವಜನಾಂಗ ಶೋಷಣೆಯಿಂದ ಮುಕ್ತಗೊಳ್ಳಬೇಕು. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅಪರಾಧಿಗಳ ಸಾಲಿನಲ್ಲಿ ಬಿಲ್ಲವ ಸಮಾಜದ ಯುವಕರ ಹೆಸರು ಕೇಳಿಬರುತ್ತಿದೆ. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ ಬಿಲ್ಲವ ಸಮಾಜದಲ್ಲಿ ಮೇಲ್ವರ್ಗದವರು ಯುವಕರನ್ನು ಹಾದಿತಪ್ಪಿಸುವ ಕೃತ್ಯಕ್ಕೆ ಬಳಸುತ್ತಿದ್ದಾರೆ. ಸಮುದಾಯ ಸಂಘಟನೆ ಕೆಲಸ ಚುನಾವಣೆ ಬಂದಾಗ ಮಾತ್ರ ನೆನಪಾಗಬಾರದು. ರಾಜಕೀಯ ರಹಿತವಾಗಿ ಬಿಲ್ಲವ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸವಾಗಬೇಕು ಎಂದು ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ಚಂದ್ರ ಸುವರ್ಣ ಹೇಳಿದರು.