ಮಂಗಳೂರು: ‘ಗ್ರಂಥಪಾಲಕರ ದಿನಾಚರಣೆ’ ಕಾರ್ಯಕ್ರಮ
ಮಂಗಳೂರು, ಆ.12: ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾಂಗಣದಲ್ಲಿ ರವಿವಾರ ‘ಗ್ರಂಥಪಾಲಕರ ದಿನಾಚರಣೆ’ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುರತ್ಕಲ್ ಎನ್ಐಟಿಕೆ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ಡಾ.ಮಲ್ಲಿಕಾರ್ಜುನ ಅಂಗಡಿ ಗ್ರಂಥಪಾಲಕರು ತಮ್ಮ ಕ್ಷೇತ್ರದಲ್ಲಿ ವೃತ್ತಿಪರತೆ ತೋರಬೇಕು. ಡಿಜಿಟಲ್ ಯುಗದಲ್ಲಂತೂ ಪ್ರತಿಯೊಬ್ಬರು ದಿನನಿತ್ಯ ಅಪ್ಗ್ರೇಡ್ ಆಗಬೇಕು. ಆವಾಗ ಮಾತ್ರ ಈ ಕ್ಷೇತ್ರದಲ್ಲಿ ಹೊಸತನ ಹುಡುಕಲು ಸಾಧ್ಯವಿದೆ ಎಂದರು.
ಡಾ.ಎಸ್.ಆರ್.ರಂಗನಾಥ್ ದೇಶದ ಗ್ರಂಥಾಲಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಗ್ರಂಥಾಲಯ ದಿನಾಚರಣೆ ಆಚರಿಸುವುದರ ಮೂಲಕ ಅವರನ್ನು ಸ್ಮರಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಡಾ.ಮಲ್ಲಿಕಾರ್ಜುನ ಅಂಗಡಿ ನುಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಲೈಬ್ರೆರಿ ಸೈನ್ಸ್ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಕೆ.ಬರಡೋಲ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ.ಬಿ.ಎಸ್. ನಾಗೇಂದ್ರ ಪ್ರಕಾಶ್, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು, ದ.ಕ. ಮತ್ತು ಕೊಡಗು ಜಿಲ್ಲಾ ಗ್ರಂಥಪಾಲಕರ ಸಂಘದ ಅಧ್ಯಕ್ಷ ಲೋಕನಾಥ್ ಪೂಜಾರಿ, ಕಾರ್ಯದರ್ಶಿ ಗಣಪತಿ ಭಟ್ ಕೆ., ಮಂಗಳೂರು ವಿವಿ ಕಾಲೇಜಿನ ಗ್ರಂಥಪಾಲಕಿ ವನಜಾ ಮತ್ತಿತರರು ಉಪಸ್ಥಿತರಿದ್ದರು.