ಉಡುಪಿ: ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ; 30ಕ್ಕೂ ಅಧಿಕ ಮನೆ-ಶಾಲೆಗಳಿಗೆ ಹಾನಿ
ಉಡುಪಿ, ಆ.13: ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ವಾಗಿ ಸುರಿಯುತ್ತಿರುವ ಮಳೆ ಇಂದೂ ಮುಂದುವರಿದಿದ್ದು, ಸಂಜೆಯ ಬಳಿಕ ಬಿರುಸು ಪಡೆದಿದೆ. ಮಳೆಯ ಪ್ರತಾಪ ಇನ್ನೂ ಎರಡು ದಿನ ಮುಂದುವರಿ ಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆಯೂ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಗಳಿಗೆ ರಜೆಯನ್ನು ಘೋಷಿಸಲಾಗಿದೆ. ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜುಗಳಿಗೆ ಈ ರಜೆ ಅನ್ವಯಿಸುತ್ತದೆ.
ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಇಂದು ಎಲ್ಲಾ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿತ್ತು. ಕೆಲವು ಪದವಿ ಕಾಲೇಜುಗಳಿಗೂ ಇಂದು ರಜೆಯನ್ನು ನೀಡಲಾಗಿತ್ತು. ಇದೀಗ ಈ ರಜೆಯನ್ನು ನಾಳೆಯೂ ಮುಂದುವರಿಸಲಾಗಿದೆ. ಆ.15ರ ಸ್ವಾತಂತ್ರೋತ್ಸವ ದಿನದಂದೂ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ದಿನವಿಡೀ ಮಳೆಯ ನಿರಂತರವಾಗಿ ಸುರಿಯುತ್ತಲೇ ಇತ್ತು. ಉಡುಪಿ ಆಸುಪಾಸಿನಲ್ಲಿ ಅಪರಾಹ್ನದ ವೇಳೆ ಸ್ವಲ್ಪ ವಿಶ್ರಾಂತಿ ಪಡೆದ ಮಳೆ, ಸಂಜೆಯ ಬಳಿಕ ಬಿರುಸು ಪಡೆಯಿತು. ಮಳೆಯೊಂದಿಗೆ ಆಗಾಗ ಭಾರೀ ಗಾಳಿಯೂ ಬೀಸುತಿದ್ದು, ಅಗತ್ಯ ಕೆಲಸಗಳಿಗೆ ರಸ್ತೆಗಿಳಿದ ಜನರು ಮಳೆಯಲ್ಲಿ ಒದ್ದೆಯಾಗು ವಂತಾಯಿತು. ಇದರಿಂದ ಹೆಚ್ಚಿನ ಬೀದಿಗಳಲ್ಲಿ ಜನಸಂಚಾರ ವಿರಳವಾಗಿತ್ತು.
ಅಪಾರ ಹಾನಿ: ಮಳೆ ಆಗಾಗ ಬೀಸುವ ಬಿರುಗಾಳಿಯಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ಅಪಾರ ಹಾನಿಯಾದ ವರದಿಗಳು ಬಂದಿವೆ. ಕಾರ್ಕಳ ತಾಲೂಕು ಬೆಳ್ಮಣ್ನ ಸೈಂಟ್ ಜೋಸೆಫ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಿಮೆಂಟ್ ಶೀಟ್ ಹಾಗೂ ಹೆಂಚುಗಳು ಭಾರೀ ಗಾಳಿಗೆ ಹಾರಿಹೋಗಿದ್ದು 35,000ರೂ. ನಷ್ಟ ಸಂಭವಿಸಿದೆ.
ಅದೇ ರೀತಿ ಮಾಳ ಗ್ರಾಮದ ಸಂಜೀವ ಶೆಟ್ಟಿ ಅವರ ತೋಟದ 20ಕ್ಕೂ ಅಧಿಕ ಅಡಿಕೆ ಮರಗಳು ಗಾಳಿಗೆ ಧರಾಶಾಹಿಯಾಗಿ 20,000ರೂ.ನಷ್ಟ ಸಂಭವಿಸಿದರೆ, ಅದೇ ಗ್ರಾಮದ ಕಲ್ಲು ಮೂರ್ತಿ ಕೆತ್ತನೆ ಕೇಂದ್ರದ ತಗಡು ಶೀಟು ಗಳು ಗಾಳಿಗೆ ಹಾರಿಹೋಗಿ, ಗೋಡೆ ಕುಸಿದು 30,000ರೂ. ನಷ್ಟವಾಗಿದೆ. ಕಸಬಾ ಗ್ರಾಮದ ಇಬ್ರಾಹಿಂ ಪರನೀರು ಇವರ ವಾಸ್ತವ್ಯದ ಪಕ್ಕಾ ಮನೆ ಗೋಡೆ ಮತ್ತು ಮಾಡು ಕುಸಿದು ಭಾಗಶ: ಹಾನಿಯಾಗಿದ್ದು 25,000ರೂ. ನಷ್ಟ ಸಂಭವಿಸಿದೆ.
ಕುಂದಾಪುರ: ಮಡಾಮಕ್ಕಿ ಗ್ರಾಮದಲ್ಲಿ ಬೀಸಿದ ಗಾಳಿಗೆ ಅನೇಕ ಮನೆಗಳಿಗೆ ಹಾನಿಯಾಗಿದೆ. ಗ್ರಾಮದ ಬಾಲಕೃಷ್ಣ ಶೆಟ್ಟಿ ಅವರ ಮನೆ ಮತ್ತು ಕೃಷಿಗೆ 20,000ರೂ., ಕೊರತಿ ಪೂಜಾರ್ತಿ ಅವರ ಮನೆಗೆ 20,000ರೂ., ಜಲಜಾಕ್ಷಿ ಅವರ ಮನೆಯ ಹೆಂಚು-ಮಾಡಿಗೆ 20,000ರೂ., ರತ್ತಿ ಶೆಡ್ತಿ ಅವರ ಮನೆಗೆ 20,000ರೂ. ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ.
ಬಸ್ರೂರು ಗ್ರಾಮದ ರಘು ಶೆಟ್ಟಿ ಅವರ ದನದ ಕೊಟ್ಟಿಗೆಗೆ 20,000ರೂ., ಗುಲಾಬಿ ಪೂಜಾರ್ತಿಯವರ ದನದ ಹಟ್ಟಿ ಗೋಡೆ ಕುಸಿದು 10,000ರೂ., ಕಾವ್ರಾಡಿ ಗ್ರಾಮದ ಶಿವರಾಮ ಅವರ ಮನೆಯ ದನದ ಕೊಟ್ಟಿಗೆ ಗೋಡೆ ಕುಸಿದು 10,000ರೂ. ಆನಗಳ್ಳಿ ಗ್ರಾಮದ ಹೆರ್ಮನ್ ಡಿಸೋಜರ ಮನೆ ಮೇಲೆ ತೆಂಗಿನ ಮರ ಬಿದ್ದು 30,000ರೂ., ಬೇಳೂರು ಗ್ರಾಮದ ಗುಲಾಬಿ ಶೆಡ್ತಿ ಮನೆ ಮೇಲೆ ಅಡಿಕೆ ಮರ ಬಿದ್ದು 25,000ರೂ., ಹಕ್ಲಾಡಿ ಗ್ರಾಮದ ಕೃಷ್ಣ ಪೂಜಾರಿ ಅವರ 25 ಅಡಿಕೆ ಗಿಡಗಳು ನೆಲಕ್ಕುರುಳಿ 10,000ರೂ., ಅದೇ ಗ್ರಾಮದ ಅಣ್ಣಪ್ಪ ಹಕ್ಲಾಡಿ ಅವರ ಮನೆ ತಗಡು ಹಾರಿಹೋಗಿ 10,000ರೂ. ಹಾಗೂ ಕುಂದಬಾರಂದಾಡಿಯ ಲಕ್ಷ್ಮೀ ದೇವಾಡಿಗ ಅವರ ದನದ ಕೊಟ್ಟಿಗೆ ಮೇಲೆ ಗೇರು ಮರ ಬಿದ್ದು 10,000ರೂ. ನಷ್ಟವಾಗಿದೆ.
ಬ್ರಹ್ಮಾವರ: ಆವರ್ಸೆ ಗ್ರಾಮದ ರಾಮನಾಯ್ಕ ಅವರ ಮನೆಯ ಹೆಂಚು ಗಾಳಿ-ಮಳೆಗೆ ಹಾರಿಹೋಗಿ 8,000ರೂ., ಅಚ್ಲಾಡಿಯ ಸುಶೀಲ ಶೆಟ್ಟಿ ಅವರ ಮನೆಯ ಹೆಂಚು ಹಾರಿ ಹೋಗಿ 10,000ರೂ. ಹಾಗೂ ಪಡುತೋನ್ಸೆಯ ಸುಧಾಕರ ಸುವರ್ಣ ಅವರ ಅಂಗಡಿ ಮೇಲೆ ಮರದ ಗೆಲ್ಲು ಬಿದ್ದು 10,000 ರೂ.ನಷ್ಟ ಸಂಭವಿಸಿದೆ.
ಉಡುಪಿ/ಕಾಪು: ಉಡುಪಿ ತಾಲೂಕು ಕಡೆಕಾರು ಗ್ರಾಮದ ಮಾಧವ ಸೇರಿಗಾರ್ ಎಂಬವರ ವಾಸ್ತವ್ಯದ ಪಕ್ಕಾ ಮನೆಯ ಗೋಡೆ ಗಾಳಿ-ಮಳೆಯಿಂದ ಕುಸಿದು ಭಾಗಶ: ಹಾನಿಯಾಗಿದ್ದು 90,000ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕೋಟೆ ಗ್ರಾಮದ ದೇವರಾಜು ಎಂಬವರ ಮನೆಗೆ ಗಾಳಿ-ಮಳೆಯಿಂದ 25,000ರೂ. ಹಾನಿಯಾಗಿದ್ದರೆ ಹೆಜಮಾಡಿಯ ಸುಧಾಕರ ದೇವಾಡಿಗರ ಮನೆ ಮೇಲೆ ಮರ ಬಿದ್ದು 80,000ರೂ.ನಷ್ಟವಾಗಿದೆ. ಅದೇ ಗ್ರಾಮದ ಗಿರಿಜ ಪೂಜಾರ್ತಿಯವರ ಮನೆಯ ಮೇಲೆ ತೆಂಗಿನಮರ ಬಿದ್ದು ಎರಡು ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.