ಜಿಎಸ್ಟಿಯಿಂದ ತೆರಿಗೆ ಸಂಗ್ರಹದಲ್ಲಿ ಪ್ರಗತಿ: ಡಾ.ಎಂ.ಸುಬ್ರಹ್ಮಣ್ಯಮ್
ಉಡುಪಿ, ಆ.13: ದೇಶದಲ್ಲಿ ಜಿಎಸ್ಟಿ ಜಾರಿಗೆ ಬಂದ ನಂತರ ಈ ಹಿಂದೆ ಇದ್ದ ಕೆಲವೊಂದು ಗೊಂದಲಗಳು ನಿವಾರಣೆಯಾಗಿದ್ದು, ಊಹಾಪೋಹಗಳು ಇಲ್ಲವಾಗಿವೆ. ಇದೀಗ ತೆರಿಗೆ ಸಂಗ್ರಹದಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ ಎಂದು ಮಂಗಳೂರು ಕೇಂದ್ರೀಯ ತೆರಿಗೆ(ಜಿಎಸ್ಟಿ) ಮತ್ತು ಕೇಂದ್ರೀಯ ಸುಂಕ ವಿಭಾಗದ ಆಯುಕ್ತ ಡಾ.ಎಂ.ಸುಬ್ರಹ್ಮಣ್ಯಮ್ ತಿಳಿಸಿದ್ದಾರೆ.
ಉಡುಪಿ ಬನ್ನಂಜೆಯಲ್ಲಿ ಒಟ್ಟು 4.57ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಕೇಂದ್ರೀಯ ತೆರಿಗೆ(ಜಿಎಸ್ಟಿ) ಮತ್ತು ಕೇಂದ್ರೀಯ ಸುಂಕ ವಿಭಾಗದ ವಲಯ ಕಚೇರಿಗಳ ಹಾಗೂ ಅತಿಥಿಗೃಹದ ಕಟ್ಟಡಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.
ಜಿಎಸ್ಟಿ ಜಾರಿಗೆ ಬರುವ ಮೊದಲು 1,800 ಕೋಟಿ ರೂ. ತೆರಿಗೆ ಸಂಗ್ರಹ ವಾಗುತ್ತಿತ್ತು. ಇದೀಗ ದೇಶದ 1,680 ಸಂಸ್ಥಾಪನೆಗಳು ತೆರಿಗೆ ವ್ಯಾಪ್ತಿಗೆ ಬಂದಿರುವುದರಿಂದ ಒಟ್ಟು 3,300 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಕೇಂದ್ರೀಯ ತೆರಿಗೆ ಕಾರ್ಯಜಾಲವು ಈಗ ಸಹಕಾರಿ ಒಕ್ಕೂಟದಡಿ ನಡೆಯು ತ್ತಿದ್ದು, ಇದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕೇಂದ್ರೀಯ ಲೋಕೋಪಯೋಗಿ ಇಲಾಖೆ ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಜಿ.ಎಸ್.ನಾಯಕ್, ಮಂಗಳೂರು ಕೇಂದ್ರ ತೆರಿಗೆ ಹಾಗೂ ಸುಂಕ ವಿಭಾಗದ ಹೆಚ್ಚುವರಿ ಆಯುಕ್ತ ಇಮಾಮುದ್ದೀನ್ ಅಹಮ್ಮದ್ ಉಪಸ್ಥಿತರಿದ್ದರು.
ಉಡುಪಿ ಕಚೇರಿಯ ಅಧೀಕ್ಷಕ ನಾಗರಾಜ ನಾಯರಿ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು. ಮಂಗಳೂರು ವಿಭಾಗದ ಸಹಾಯಕ ಆಯುಕ್ತ ರಾಮ ಕೃಷ್ಣಯ್ಯ ವಂದಿಸಿದರು.