ಪ್ರೊಬೆಷನರಿ ಹುದ್ದೆ ನೇಮಕಾತಿಯಲ್ಲಿ ವಂಚನೆ; ಉತ್ತರಪ್ರದೇಶ ಮೂಲದ ಯುವಕ ಸೆರೆ
ಮಂಗಳೂರು, ಆ.13: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಎಂಬ ಭಾರತೀಯ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ನಡೆಯುವ ಪ್ರೊಬೆಷನರಿ ಅಧಿಕಾರಿಗಳ ಹುದ್ದೆಯ ನೇಮಕಾತಿಯಲ್ಲಿ ವಂಚನೆ ನಡೆಸಿದ ಆರೋಪದ ಮೇಲೆ ಉತ್ತರಪ್ರದೇಶದ ಬಿಜ್ನೋರ್ ಚಾಂದ್ಪುರ ನಿವಾಸಿ ನವೀನ್ಕುಮಾರ್ (25) ಬಂಧಿಸಲಾಗಿದೆ.
2018ರ ಮಾ. 4ರಂದು ರಾಷ್ಟ್ರೀಕೃತ ಬ್ಯಾಂಕೊಂದಕ್ಕೆ ಸಂಬಂಧಪಟ್ಟ ಪ್ರವೇಶ ಪರೀಕ್ಷೆ ನಡೆದಿದ್ದು, ಇದರಲ್ಲಿ ಆರೋಪಿ ನವೀನ್ಕುಮಾರ್ ಹೆಸರಲ್ಲಿ ಮತ್ತೊಬ್ಬ ಪರೀಕ್ಷೆಗೆ ಬರೆಯುತ್ತಾನೆ. ಇದಾದ ಬಳಿಕ ನಗರದ ಪಂಪ್ವೆಲ್ ಸರ್ಕಲ್ ಬಳಿಯಿರುವ ನಿಟ್ಟೆ ಎಜುಕೇಶನ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ನಡೆದ ಐಬಿಪಿಎಸ್ ಪ್ರವೇಶ ಪರೀಕ್ಷೆಯಲ್ಲೂ ಉತ್ತೀರ್ಣನಾಗುತ್ತಾನೆ. ಒಂದು ವರ್ಷದ ಪಿಜಿ ಡಿಪ್ಲೋಮಾ ಕೋರ್ಸ್ಗೆ 2018ರ ಜು.30ರಂದು ನವೀನ್ಕುಮಾರ್ ಹೆಸರಿನಲ್ಲಿ ಪರೀಕ್ಷೆ ಬರೆದ ವ್ಯಕ್ತಿಯೇ ಹಾಜರಾಗಿ ಬಯೋ-ಮೆಟ್ರಿಕ್ ಪ್ರಕ್ರಿಯೆಯನ್ನು ನಡೆಸುತ್ತಾನೆ. ಆ ಬಳಿಕ ತರಬೇತಿಗೆ ಮಾತ್ರ ಆರೋಪಿ ನವೀನ್ಕುಮಾರ್ ಹಾಜರಾಗುತ್ತಾನೆ.
ಆದರೆ ಬಳಿಕ ನವೀನ್ಕುಮಾರ್ ಎಂಬಾತನ ಚಲನವಲನ ನಿಟ್ಟೆ ಎಜುಕೇಶನ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧಿಕಾರಿಗಳಿಗೆ ಸಂಶಯ ಬರುತ್ತದೆ. ಈ ಬಗ್ಗೆ ಆ. 8ರಂದು ಹುದ್ದೆ ಪಡೆದ ಬ್ಯಾಂಕಿನ ಅಧಿಕಾರಿಗಳೊಂದಿಗೆ ಸೇರಿ ಬಯೋ ಮೆಟ್ರಿಕ್ ಪ್ರಕ್ರಿಯೆಯನ್ನು ನಡೆಸಿದಾಗ ಬಯೋ ಮೆಟ್ರಿಕ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ವ್ಯಕ್ತಿಗೂ ಮತ್ತು ಪ್ರಸ್ತುತ ತರಬೇತಿಯಲ್ಲಿ ಹಾಜರಾಗಿರುವ ವ್ಯಕ್ತಿಗಳಿಗೂ ಹೊಂದಾಣಿಕೆಯಾಗದಿರುವುದು ಕಂಡು ಬಂದಿದೆ.
ಆರೋಪಿ ನವೀನ್ಕುಮಾರ್ ಹಾಗೂ ಇನ್ನಿಬ್ಬರು ಅಪರಿಚಿತರು ಸೇರಿಕೊಂಡು ನವೀನ್ಕುಮಾರ್ನ ಎಲ್ಲ ಕಲಿಕಾ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲಾತಿ ಸುಳ್ಳು ದಾಖಲಾತಿ ಸೃಷ್ಟಿಸಿ, ಆತನ ಬದಲಾಗಿ ಇನ್ನೊಬ್ಬ ವ್ಯಕ್ತಿಯನ್ನು ಪ್ರವೇಶ ಪರೀಕ್ಷೆಗಳಲ್ಲಿ ಹಾಜರಾಗುವಂತೆ ನಿರ್ದೇಶಿಸುತ್ತಾರೆ. ಈ ಮೂಲಕ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಆ.11ರಂದು ನವೀನ್ಕುಮಾರ್ನನ್ನು ಕಂಕನಾಡಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.