ತಾಂತ್ರಿಕ ದೋಷ: ಕೋಡಿಬೆಂಗ್ರೆ ಬಳಿ ಬೋಟು ಮುಳುಗಡೆ
ಸಮುದ್ರ ಮಧ್ಯೆ ಸಿಲುಕಿರುವ ಎರಡು ಬೋಟುಗಳ ರಕ್ಷಣೆಗೆ ತೊಡಕು
ಉಡುಪಿ, ಆ.13: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಒಂದು ಮೀನುಗಾರಿಕೆ ಬೋಟು ಕೋಡಿಬೆಂಗ್ರೆ ಸಮೀಪ ಇಂದು ಮುಳುಗಡೆಯಾಗಿದ್ದು, ಎರಡು ಬೋಟುಗಳು ಸುರತ್ಕಲ್ ಹಾಗೂ ಭಟ್ಕಳ ಸಮೀಪ ತಾಂತ್ರಿಕ ತೊಂದರೆಯಿಂದ ಸಮುದ್ರ ಮಧ್ಯೆ ಸಿಲುಕಿಕೊಂಡಿರುವ ಬಗ್ಗೆ ವರದಿಯಾಗಿದೆ.
ಮಲ್ಪೆ ತೊಟ್ಟಂನ ಶಕುಂತಲ ಕರ್ಕೇರ ಎಂಬವರ ‘ಹನುಮ ಸಾನಿಧ್ಯ’ ಬೋಟು ಆ.12ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ್ಟಿದ್ದು, ಕೋಡಿಬೆಂಗ್ರೆಯ 12 ಮಾರು ದೂರದ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಬೋಟಿನ ಇಂಜಿನ್ ಹಾಳಾಯಿತೆನ್ನಲಾಗಿದೆ.
ಸಮುದ್ರದಲ್ಲಿ ಭಾರೀ ಗಾಳಿಮಳೆಯ ಪರಿಣಾಮ ಕೆಟ್ಟು ನಿಂತ ಬೋಟು ಏಳು ಮಾರು ದೂರದವರೆಗೆ ದಡಕ್ಕೆ ಬಂದು ಕಲ್ಲಿಗೆ ಬಡಿತೆನ್ನಲಾಗಿದೆ. ಇದರ ಪರಿಣಾಮ ಬೋಟಿನೊಳಗೆ ನೀರು ನುಗ್ಗಲು ಆರಂಭವಾಯಿತು. ಕೆಲ ಹೊತ್ತಿನ ಬಳಿಕ ಬೋಟು ಮುಳುಗಡೆಯಾಯಿತ್ತೆನ್ನಲಾಗಿದೆ.
ಈ ಬೋಟಿನಲ್ಲಿದ್ದ ಮೂವರು ಮೀನುಗಾರರನ್ನು ಅಲ್ಲೇ ಸಮೀಪದಲ್ಲಿದ್ದ ‘ಭವ್ಯತ ಮತ್ತು ‘ಲಕ್ಷ್ಮೀ ಪಂಡರಿ’ ಬೋಟಿನವರು ರಕ್ಷಿಸಿದರು. ನಂತರ ಮುಳುಗಡೆಯಾಗುತ್ತಿದ್ದ ಬೋಟನ್ನು ಇತರ ಬೋಟುಗಳ ಸಹಾಯದಿಂದ ಹಗ್ಗ ಕಟ್ಟಿ ದಡಕ್ಕೆ ಎಳೆದು ತರಲಾಗಿದೆ. ಈ ಅವಘಡದಿಂದಾಗಿ ಸುಮಾರು 9ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.
ರಕ್ಷಣೆಗೆ ಮಳೆ ಅಡ್ಡಿ: ಎರಡು ದಿನಗಳ ಹಿಂದೆ ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ‘ವಿಶ್ವಾಸ್’ ಎಂಬ ಬೋಟು ಸುರತ್ಕಲ್ ಸಮೀಪದ 35 ನಾಟೆಕಲ್ ಹಾಗೂ ‘ಲಕ್ಷ್ಮೀ ಜನಾರ್ದನ್’ ಎಂಬ ಬೋಟು ಭಟ್ಕಳ ಸಮೀಪದ 40 ನಾಟೆಕಲ್ ದೂರದ ಸಮುದ್ರದಲ್ಲಿ ಇಂಜಿನ್ ಸಮಸ್ಯೆ ಯಿಂದ ಕೆಟ್ಟು ನಿಂತಿರುವ ಬಗ್ಗೆ ವರದಿಯಾಗಿದೆ.
ವಿಶ್ವಾಸ್ ಬೋಟಿನಲ್ಲಿ ಒಟ್ಟು 9 ಮಂದಿ ಮತ್ತು ಲಕ್ಷ್ಮೀ ಜನಾರ್ದನ್ ಬೋಟಿನಲ್ಲಿ ಎಂಟು ಮಂದಿ ಮೀನುಗಾರರಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೋಟಿನವರು ಹಾಗೂ ಮಲ್ಪೆ ಮೀನುಗಾರರ ಸಂಘದವರು ಈಗಾಗಲೇ ಕರಾವಳಿ ಕಾವಲು ಪಡೆಯವರಿಗೆ ಮಾಹಿತಿ ನೀಡಿದ್ದು, ಭಾರೀ ಮಳೆಯಿಂದ ಕಡಲ ಅಬ್ಬರ ತೀವ್ರಗೊಂಡಿರುವುದರಿಂದ ಈ ಬೋಟುಗಳ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.
ಈ ಬೋಟಿನಲ್ಲಿರುವ ಮೀನುಗಾರರು ಇದೀಗ ಸಂರ್ಪಕದಲ್ಲಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಮ್ಮ ಕಾರ್ಯಾಚರಣೆಯ ವ್ಯಾಪ್ತಿ ಐದು ನಾಟೆಕಲ್ ದೂರವಾಗಿರುವುದರಿಂದ ಈ ಕುರಿತು ಈಗಾಗಲೇ ಮಂಗಳೂರು ಹಾಗೂ ಕಾರವಾರ ಕೋಸ್ಟ್ ಗಾರ್ಡ್ಗಳಿಗೆ ಮಾಹಿತಿ ರವಾನಿಸ ಲಾಗಿದೆ ಎಂದು ಮಲ್ಪೆ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಜೈಶಂಕರ್ ತಿಳಿಸಿದ್ದಾರೆ.
ಅದೇ ರೀತಿ ಈಗಾಗಲೇ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿರುವ ಬೋಟುಗಳಲ್ಲಿರುವ ಮೀನುಗಾರರ ಸಂಪರ್ಕ ಮಾಡಿ, ಕೆಟ್ಟು ನಿಂತಿರುವ ಬೋಟುಗಳಲ್ಲಿರುವ ಮೀನುಗಾರರನ್ನು ರಕ್ಷಿಸುವಂತೆ ತಿಳಿಸಲಾಗಿದೆ. ಸಮುದ್ರ ಸಾಕಷ್ಟು ಪ್ರಕ್ಷುಬ್ದಗೊಂಡಿರುವುದರಿಂದ ಯಾರಿಗೂ ಸಮುದ್ರಕ್ಕೆ ತೆರಳಲು ಸಾಧ್ಯ ವಾಗುತ್ತಿಲ್ಲ. ಅಲ್ಲದೆ ಯಾರು ಕೂಡ ಮೀನುಗಾರಿಕೆಗೆ ತೆರಳದಂತೆ ಸೂಚನೆ ಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.