ಅವಿಭಜಿತ ದ.ಕ.ಜಿಲ್ಲೆಯ ನಾಲ್ಕು ಟೋಲ್ಗೇಟ್ಗೆ ಮುತ್ತಿಗೆ: ಹೋರಾಟ ಸಮಿತಿ ಎಚ್ಚರಿಕೆ
ಮಂಗಳೂರು, ಆ.13:ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಿಂದ ಕುಂದಾಪುರದವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿಯು ವಿಳಂಬವಾಗುತ್ತಿರು ವುದನ್ನು ಖಂಡಿಸಿ ಈ ತಿಂಗಳಾಂತ್ಯದೊಳಗೆ ಏಕಕಾಲದಲ್ಲಿ ಉಭಯ ಜಿಲ್ಲೆಗಳ ನಾಲ್ಕು ಟೋಲ್ಗೇಟ್ಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ 66 ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಎಚ್ಚರಿಕೆ ನೀಡಿದರು.
ಸೋಮವಾರ ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಹೆದ್ದಾರಿಯ ಪರ ಹೋರಾಟ ನಡೆಸಲು ಅವಿಭಜಿತ ಜಿಲ್ಲೆಯ ವಿವಿಧ ಸಂಘಟನೆಗಳನ್ನೊಳಗೊಂಡ ಹೋರಾಟ ಸಮಿತಿಯನ್ನು ರಚಿಸಲಾಗಿದೆ. ಕಾಮಗಾರಿ ಅಪೂರ್ಣವಾಗಿದ್ದರೂ ಟೋಲ್ ಸಂಗ್ರಹ ಮಾಡುತ್ತಿರುವುದನ್ನು ಸ್ಥಗಿತಗೊಳಿಸಲು ಆಗ್ರಹಿಸಿ ಸಮಿತಿ ವತಿಯಿಂದ ಆ.16ರಂದು ದ.ಕ.ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಅದಕ್ಕೆ ಸ್ಪಂದಿಸದಿದ್ದರೆ ಟೋಲ್ಗೇಟ್ಗಳಿಗೆ ಮುತ್ತಿಗೆ ಹಾಕುವುದು ಖಚಿತ ಎಂದರು.
2010ರಲ್ಲಿ ಆರಂಭಗೊಂಡ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅಪಘಾತಕ್ಕೀಡಾಗಿ ಹಲವು ಮಂದಿ ಸಾವಿಗೀಡಾಗಿದ್ದಾರೆ. ಬೈಪಾಸ್ ರಸ್ತೆಗಳು ಪೂರ್ಣಗೊಂಡಿಲ್ಲ. ಪ್ರಮುಖ ಸ್ಥಳಗಳಲ್ಲೇ ಸರ್ವಿಸ್ ರಸ್ತೆ ಮಾಡಿಲ್ಲ. ಫ್ಲೈಓವರ್ ಕಾಮಗಾರಿಗಳು ಅರ್ಧಕ್ಕೇ ನಿಂತಿವೆ. ಆದರೂ ಗುತ್ತಿಗೆ ಪಡೆದ ನವಯುಗ ಕಂಪೆನಿಯು ಟೋಲ್ ಸಂಗ್ರಹ ಮಾಡಿ ಜನರನ್ನು ಸುಲಿಗೆ ಮಾಡುತ್ತಿವೆ ಎಂದು ದೇವಿಪ್ರಸಾದ್ ಶೆಟ್ಟಿ ಆರೋಪಿಸಿದರು.
ಪ್ರಾಧಿಕಾರ, ನವಯುವ ಶಾಮೀಲು: ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಉಳಿದಿದ್ದರೂ ಶೇ.90ರಷ್ಟು ಕಾಮಗಾರಿ ಆಗಿದೆ ಎಂದು ಸುಳ್ಳು ಹೇಳಿ ನವಯುಗ ಕಂಪೆನಿ ಸುಂಕ ಸಂಗ್ರಹಕ್ಕೆ ಎರಡು ವರ್ಷಗಳ ಹಿಂದೆ ಅನುಮತಿ ಪಡೆದುಕೊಂಡಿದೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಾ ಸಹಿ ಹಾಕಿವೆ. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನವಯುಗ ಕಂಪೆನಿ ಶಾಮೀಲಾಗಿ ಜನರನ್ನು ಸುಲಿಗೆ ಮಾಡುತ್ತಿರುವುದಕ್ಕೆ ಸಾಕ್ಷಿ ಎಂದು ದೇವಿಪ್ರಸಾದ್ ಶೆಟ್ಟಿ ಆರೋಪಿಸಿದರು.
ಮೂಲ ನಕಾಶೆ ತಿರುಚಿ ಕಾಮಗಾರಿ: ಹೆದ್ದಾರಿಯ ಮೂಲ ನಕಾಶೆಯನ್ನೇ ತಿರುಚಿ ಹೆದ್ದಾರಿ ಪ್ರಾಧಿಕಾರ ತಮಗಿಷ್ಟ ಬಂದಂತೆ ಕಾಮಗಾರಿ ನಡೆಸಿದೆ. ಈ ಅವೈಜ್ಞಾನಿಕ ಕಾಮಗಾರಿಯಿಂದ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ, ಕುಂದಾಪುರ, ಬೈಕಂಪಾಡಿ, ಪಂಪ್ವೆಲ್, ನಂತೂರಲ್ಲಿ ನಿತ್ಯವೂ ಟ್ರಾಫಿಕ್ ಬ್ಲಾಕ್ ಆಗುತ್ತಿದೆ. ಟೋಲ್ಗೇಟ್ ಹತ್ತಿರದಲ್ಲೇ ಗುಂಡಿಗಳು ಬಿದ್ದು ಸಂಚಾರಕ್ಕೆ ತೊಡಕಾಗಿವೆ. ಅಲ್ಲಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದರೂ ಅವುಗಳು ತುಕ್ಕು ಹಿಡಿದಿದೆ. ದಾರಿದೀಪಗಳಿಗೆ ಕಳಪೆ ಗುಣಮಟ್ಟದ ಎಲ್ಇಡಿ ಬಲ್ಬುಗಳನ್ನು ಅಳವಡಿಸಿರುವುದರಿಂದ ಚಿಮಣಿ ದೀಪದಷ್ಟೂ ಬೆಳಕು ನೀಡುತ್ತಿಲ್ಲ. ಆದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ದೇವಿಪ್ರಸಾದ್ ಶೆಟ್ಟಿ ಆರೋಪಿಸಿದರು.
ಸಂಸದರ ಮಾತಿಗೆ ಬೆಲೆಯಿಲ್ಲ: ತಿಂಗಳ ಹಿಂದೆ ಸುರತ್ಕಲ್ ಟೋಲ್ಗೇಟ್ನ್ನು ಹೆಜಮಾಡಿ ಟೋಲ್ಗೇಟ್ನೊಂದಿಗೆ ವಿಲೀನ ಮಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಜಿಲ್ಲಾಧಿಕಾರಿ ಹೇಳಿದ್ದರೂ, ಸುರತ್ಕಲ್ನಲ್ಲಿ ಸುಂಕ ಸಂಗ್ರಹ ಬಂದ್ ಮಾಡದೆ ಈಗ ಇನ್ನೊಬ್ಬ ಗುತ್ತಿಗೆದಾರರಿಗೆ ಸುಂಕ ಸಂಗ್ರಹಕ್ಕೆ ಆದೇಶ ನೀಡಲಾಗಿದೆ. ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹೇಳಿದ ಮಾತಿಗೆ ಬೆಲೆ ಇಲ್ಲದಿದ್ದರೆ ಜನರು ಯಾರಲ್ಲಿ ಸಮಸ್ಯೆ ಹೇಳಿಕೊಳ್ಳ್ಳಬೇಕು? ಎಂದು ದೇವಿಪ್ರಸಾದ್ ಶೆಟ್ಟಿ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಅಶ್ರಫ್, ಸಂಚಾಲಕ ಪ್ರತಾಪ್ ಶೆಟ್ಟಿ, ಪ್ರಮುಖರಾದ ಶೇಖರ ಹೆಜಮಾಡಿ, ಸಿದ್ದೀಕ್ ತಲಪಾಡಿ ಮತ್ತಿತರರರು ಉಪಸ್ಥಿತರಿದ್ದರು.