ದ.ಕ. ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ: ಲಕ್ಷಾಂತರ ರೂ. ಹಾನಿ
ಮಂಗಳೂರು, ಆ.13: ದ.ಕ. ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ. ಮಂಗಳೂರು, ಸುರತ್ಕಲ್, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಹಾಗೂ ಪುತ್ತೂರು ತಾಲೂಕಿನಾದ್ಯಂತ ಭಾರೀ ಮಳೆ ಸುರಿದಿದೆ. ಸೋಮವಾರ ಬೆಳಗ್ಗೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ಮದ ಹೊತ್ತಿನ ಮಳೆ ಬಿರುಸನ್ನು ಪಡೆಯಿತು. ರಾತ್ರಿವರೆಗೂ ಭಾರೀ ಮಳೆ ಸುರಿದಿದೆ.
ಎಡೆಬಿಡದೇ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಪುತ್ತೂರು ತಾಲೂಕಿನ ಹಂಚಿನಡ್ಕ ಗ್ರಾಮದಲ್ಲಿ ನಾಲ್ಕು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಇದೇ ಗ್ರಾಮದ ಸಲ್ಮಾ ಎಂಬವರಿಗೆ ಸೇರಿದ ಮನೆಗೆ ತೀವ್ರ ಹಾನಿಯಾಗಿದ್ದು, ಸುಮಾರು 35 ಸಾವಿರ ರೂ. ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.
ಪುತ್ತೂರು ಸಮೀಪದ ತೆಂಕಿಲ ಗ್ರಾಮದ ಶಂಕರ್ ಎಂಬವರಿಗೆ ಸೇರಿದ ಮನೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದ್ದು, ಸುಮಾರು ಎರಡೂವರೆ ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರದ ಬಲ್ಮಠ ಸಮೀಪದ ಸನ್ಯಾಸಿಗುಡ್ಡೆಯ ದಲಿತ ಮಹಿಳೆ ಲಲಿತಾ ಎಂಬವರಿಗೆ ಸೇರಿದ ಮನೆಯ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಜೆ ಘೋಷಣೆ ಹೊರತಾಗಿಯೂ ತೆರೆದಿದ್ದ ಶಾಲಾ-ಕಾಲೇಜು !
ದ.ಕ. ಜಿಲ್ಲೆಯ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ಸೋಮವಾರ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದರೂ ನಗರದಲ್ಲಿ ಕೆಲವು ಕಾಲೇಜುಗಳು ತೆರೆದಿದ್ದವು.
ನಿಟ್ಟೆ ಎಂಎಸ್ಎಎಂ ಕಾಲೇಜು, ನಂತೂರು ಹಾಗೂ ಪ್ರೆಸಿಡೆನ್ಸಿ ಶಾಲೆಯಲ್ಲಿ ರಜೆ ನೀಡಿಲ್ಲ ಎಂದು ಪಾಲಕರ ದೂರು ಬಂದಿತ್ತು. ಈ ಬಗ್ಗೆ ಸಂಬಂಧಪಟ್ಟವರಿಗೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಎಚ್ಚರಿಕೆ ನೀಡಿದೆ. ಬಳಿಕ ಸದರಿ ಶಿಕ್ಷಣ ಸಂಸ್ಥೆಗಳಲ್ಲಿ ರಜೆ ನೀಡಲಾಯಿತು.