ಪಾರ್ಸೆಲ್ ನೀಡದೆ ವಂಚನೆ: ಆರೋಪಿ ಬಂಧನ
ಪುತ್ತೂರು, ಆ. 13: ಬೆಂಗಳೂರಿನಿಂದ ಪುತ್ತೂರಿಗೆ ಕಳುಹಿಸಿದ್ದ ನಾಲ್ಕು ಪಾರ್ಸೆಲ್ಗಳ ಪೈಕಿ ರೂ. 2.66 ಲಕ್ಷ ಮೌಲ್ಯದ ಸೊತ್ತುಗಳಿದ್ದ ಪಾರ್ಸೆಲೊಂದನ್ನು ಗ್ರಾಹಕರಿಗೆ ನೀಡದೆ ವಂಚಿಸಿದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಸೋಮವಾರ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಠಾಣಾ ವ್ಯಾಪ್ತಿಯ ಅಡವಿಸೊಮಾಪುರ ಗ್ರಾಮದ ನಿವಾಸಿ ರವಿ ಬಂಧಿತ ಆರೋಪಿ. ಬೆಂಗಳೂರಿನ ಜಯದೀಪ ಎಂಟರ್ ಪ್ರೈಸಸ್ ಸಂಸ್ಥೆಯ ತಾತ್ಕಾಲಿಕ ಪ್ರತಿನಿಧಿಯಾಗಿ ಜಗದೀಶ್ ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದು, ಸಂಸ್ಥೆಯಿಂದ ಕಳುಹಿಸಿಕೊಟ್ಟ ಸರಕುಗಳನ್ನು ಪಡೆದುಕೊಂಡು ಅದನ್ನು ಸಂಬಂಧಪಟ್ಟವರಿಗೆ ಡೆಲಿವರಿ ಮಾಡುತ್ತಿದ್ದ. ಕಳೆದ ಜೂನ್ 29 ರಂದು ಜಯದೀಪ್ ಎಂಟರ್ಪ್ರೈಸಸ್ ಸಂಸ್ಥೆ ಪುತ್ತೂರಿನ ಪ್ರತಿನಿಧಿ ಜಗದೀಶ್ ಅವರಿಗೆ ಡೆಲಿವರಿ ಕೊಡಲು ಲಗೇಜು ವಾಹನ ಚಾಲಕ ರವಿ ಎಂಬವರ ಮೂಲಕ ಕಳುಹಿಸಿಕೊಟ್ಟಿದ್ದ ಕಂಸೈನ್ಮೆಂಟ್ನಲ್ಲಿದ್ದ ನಾಲ್ಕು ಪಾರ್ಸೆಲ್ಗಳ ಪೈಕಿ ಒಂದು ಪಾರ್ಸೆಲನ್ನು ಡೆಲಿವರಿ ಮಾಡದೇ ಆರೋಪಿ ರವಿ ವಂಚಿಸಿದ್ದ ಎಂಬ ಆರೋಪವಿತ್ತು.
ಡೆಲಿವರಿ ನೀಡದೆ ವಂಚಿಸಿದ ಪಾರ್ಸೆಲ್ನಲ್ಲಿ ಬೆಲೆಬಾಳುವ ಸ್ಯಾಮ್ಸಂಗ್ ಕಂಪೆನಿಯ 16 ಮೊಬೈಲ್ ಸೆಟ್ಗಳಿದ್ದವು. ಅದರ ಒಟ್ಟು ಮೌಲ್ಯ ರೂ. 2.66.155 ಎಂದು ಅಂದಾಜಿಸಲಾಗಿತ್ತು. ಈ ವಂಚನೆ ಪ್ರಕರಣದ ಕುರಿತು ಬೆಂಗಳೂರಿನ ಜಯದೀಪ್ ಎಂಟರ್ಪ್ರೈಸಸ್ ಸಂಸ್ಥೆಯ ಮೇಲ್ವಿಚಾರಕ ಜಯಶಂಕರ್ ಎಂಬವರು ಆರೋಪಿ ಚಾಲಕ ರವಿ ಎಂಬಾತನ ವಿರುದ್ಧ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಜಿಲ್ಲಾ ಎಸ್ಪಿ ರವಿಕಾಂತೇ ಗೌಡ,ಹೆಚ್ಚುವರಿ ಎಸ್ಪಿ ಸಜೀತ್ ಮತ್ತು ಡಿವೈಎಸ್ಪಿ ಶ್ರೀನಿವಾಸ್ ಅವರ ನಿರ್ದೇಶನ ಹಾಗೂ ಪುತ್ತೂರು ನಗರ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಎಸ್ಐ ಅಜಯ್ ಕುಮಾರ್ ಡಿ.ಎನ್ ಅವರ ನೇತೃತ್ವದ ಪುತ್ತೂರು ನಗರ ಪೊಲೀಸರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನ ತಡಸ ಠಾಣಾ ವ್ಯಾಪ್ತಿಯ ಅಡವಿಸೊಮಾಪುರ ಗ್ರಾಮದಲ್ಲಿ ಆರೋಪಿ ರವಿಯನ್ನು ಪತ್ತೆ ಮಾಡಿ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಪುತ್ತೂರು ನಗರ ಠಾಣೆಯ ಎಎಸ್ಐ ಶ್ರೀಧರ್ ಮಣಿಯಾಣಿ, ಹೆಡ್ಕಾನ್ಸ್ಟೇಬಲ್ಗಳಾದ ಜಗದೀಶ್, ಹಿತೋಷ್, ಕಾನ್ಸ್ಟೇಬಲ್ಗಳಾದ ಚೋಳಪ್ಪ ಮತ್ತು ಕಿರಣ್ಕುಮಾರ್ ಪಾಲ್ಗೊಂಡಿದ್ದರು.