ವಾರಾಹಿ ನದಿ ಪಾತ್ರದ ಜನತೆಗೆ ಪ್ರವಾಹ ಮುನ್ನೆಚ್ಚರಿಕೆಯ ಸೂಚನೆ
ಉಡುಪಿ, ಆ.14: ಎತ್ತಣಕಟ್ಟೆ ಜಲಾನಯನ ಪ್ರದೇಶದಲ್ಲಿ ಸತತವಾಗಿ ಭಾರೀ ಮಳೆ ಸುರಿಯುತಿದ್ದು, ಮಾಣಿ ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವುದರಿಂದ, ಅಣೆಕಟ್ಟು ಸುರಕ್ಷತಾ ದೃಷ್ಟಿಯಿಂದ, ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಂದರ್ಭದಲ್ಲಿ ಹೊರಬಿಡಲಾಗುವುದು. ಆದುದರಿಂದ ವಾರಾಹಿ ನದಿ ಪಾತ್ರದ ಜನರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲೆ ಮಾಸ್ತಿಕಟ್ಟೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವಾರಾಹಿ ಜಲ ವಿದ್ಯುತ್ ಯೋಜನೆಯ ಅಣೆಕಟ್ಟು ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರಿಂದಾಗಿ ಮಾಣಿ ಜಲಾಶಯದಿಂದ ಹೆಚ್ಚುವರಿಯಾದ ನೀರನ್ನು ಯಾವುದೇ ಸಂದರ್ಭ ಹೊರಬಿಡಲಾಗುವುದು. ಅಲ್ಲದೇ ವಾರಾಹಿ ಡೈವರ್ಶನ್ ವಿಯರ್ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಜಾಸ್ತಿಯಾಗಿರುವುದರಿಂದ, ವಾರಾಹಿ ನದಿ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಕುಟುಂಬಗಳಿಗೆ ತೊಂದರೆಯಾಗುವ ಸಂಭವವಿರುತ್ತದೆ.
ಆದುದರಿಂದ ಈ ಪ್ರದೇಶದಲ್ಲಿರುವ ಕುಟುಂಬಗಳು ಹಾಗೂ ಅವರ ಜಾನುವಾರಗಳು ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಸುರಕ್ಷಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಿದ್ಧಾಪುರ ವಾರಾಹಿ ಜಲಾಶಯ ಯೋಜನಾ ವಿಭಾಗ ನಂ.-2ರ ಕಾರ್ಯಪಾಲಕ ಇಂಜಿನಿಯರ್ ಅವರ ಪ್ರಕಟಣೆ ತಿಳಿಸಿದೆ.