ಕಚ್ಚಿಮೆಮನ್ ಮಸೀದಿಯ ಜಮೀನಿನಲ್ಲಿ ನಿರ್ಮಿಸಿದ ಅಕ್ರಮ ಕಟ್ಟಡ ತೆರವಿಗೆ ಸಹಾಯಕ ಆಯುಕ್ತ ನೋಟಿಸ್
ಆ.25ರೊಳಗೆ ತೆರವುಗೊಳಿಸದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ
ಮಂಗಳೂರು, ಆ.14: ನಗರದ ಬಂದರಿನ ಕಚ್ಚಿ ಮೆಮನ್ ಮಸೀದಿಯ ಅಧೀನದಲ್ಲಿರುವ ವಕ್ಫ್ ಜಮೀನಿನಲ್ಲಿ ನಿರ್ಮಿಸಲಾದ ಅಕ್ರಮ ಕಟ್ಟಡವನ್ನು ಆ.25ರೊಳಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು ಆ.13ರಂದು ಐದು ಮಂದಿಗೆ ಅಂತಿಮ ನೋಟಿಸ್ ಜಾರಿಗೊಳಿಸಿದ್ದಾರೆ. ಆ ಮೂಲಕ ಕಚ್ಚಿ ಮೆಮನ್ ಮಸೀಯ ಜಮೀನಿನಲ್ಲಿ ನಿರ್ಮಿಸಲಾದ ಕಟ್ಟಡದ ವಿವಾದಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.
ನಗರದ ಬಂದರಿನ ಗೋಳಿಕಟ್ಟೆ ಬಝಾರ್ ಬಳಿಯ ಸ.ನಂ. 670/1ರಲ್ಲಿರುವ ಬಂದರ್ ಕಚ್ಚಿ ಜುಮಾ ಮಸ್ಜಿದ್ಗೆ ಸೇರಿದ 0.63 ಸೆಂಟ್ಸ್ ಜಮೀನಿನಲ್ಲಿ ಬಿಜೆಪಿ ಮುಖಂಡ ರವಿಶಂಕರ್ ಮಿಜಾರ್ ಮತ್ತಿತರರು ಸೇರಿಕೊಂಡು 2014ರ ಬಳಿಕ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅಕ್ರಮ ಕಟ್ಟಡವನ್ನು ನಿರ್ಮಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಕಟ್ಟಡ ನಿರ್ಮಾಣದ ವಿರುದ್ಧ ಮತ್ತು ವಕ್ಫ್ ಆಸ್ತಿ ಸಂರಕ್ಷಣೆಗಾಗಿ ರಾಜ್ಯ ವಕ್ಫ್ ವೆಲ್ಫೇರ್ ಕಮಿಟಿ ಹೆಸರಿನ ಸಮಿತಿಯೊಂದು ಅಸ್ತಿತ್ವಕ್ಕೆ ಬಂದು ಹೋರಾಟವನ್ನೂ ಆರಂಭಿಸಿತ್ತು. ವಕ್ಫ್ ಬೋರ್ಡ್ಗೂ ದೂರು ಸಲ್ಲಿಸಿತ್ತು.
ಪ್ರಕರಣ ವಕ್ಫ್ ಮಂಡಳಿಯ ನ್ಯಾಯಾಲಯದಲ್ಲಿದ್ದರೂ ಕೂಡ ಐದಂತಸ್ತಿನ ಕಟ್ಟಡಕ್ಕೆ ಕಟ್ಟಡ ನಂಬ್ರ ಪಡೆಯುವ ಪ್ರಕ್ರಿಯೆ ಆರಂಭವಾಗಿತ್ತು. ಇದನ್ನು ಅರಿತ ಸಾಮಾಜಿಕ ಹೋರಾಟಗಾರ, ರಾಜ್ಯ ವಕ್ಫ್ ವೆಲ್ಫೇರ್ ಕಮಿಟಿಯ ಮುಖಂಡ ಹಾಗೂ ಆರ್ಟಿಐ ಕಾರ್ಯಕರ್ತ ಹನೀಫ್ ಪಾಜೆಪಳ್ಳ ಈ ಕಟ್ಟಡಕ್ಕೆ ನೀರು, ವಿದ್ಯುತ್ ಸಂಪರ್ಕ ನೀಡದಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಪತ್ರ ಬರೆದಿದ್ದರು. ಅಲ್ಲದೆ ಅಗ್ನಿಶಾಮಕ ಇಲಾಖೆಯ ಗಮನಕ್ಕೂ ತಂದಿದ್ದರು. ಈ ಮಧ್ಯೆ ಮಸೀದಿಯ ಮುತವಲ್ಲಿ ಸಹಿತ ಅಕ್ರಮ ಕಟ್ಟಡ ನಿರ್ಮಿಸಿದ ಇತರರಿಗೂ ವಕ್ಫ್ ಬೋರ್ಡ್ ಶೋಕಾಸ್ ನೋಟಿಸನ್ನು ಕೂಡಾ ಜಾರಿಗೊಳಿಸಿತ್ತು.
ಈ ಜಮೀನು 1968ರಲ್ಲಿ ವಕ್ಫ್ ಬೋರ್ಡ್ನಲ್ಲಿ ನೋಂದಣಿಗೊಂಡಿದೆ. ಹಾಗಾಗಿ ಇದು ವಕ್ಫ್ ಆಸ್ತಿಯಾಗಿದ್ದು, ಇದರ ದುರುಪಯೋಗಕ್ಕೆ ಯಾವೊಬ್ಬ ಖಾಸಗಿ ವ್ಯಕ್ತಿಗೂ ಅಧಿಕಾರವಿಲ್ಲ. ಆದರೆ, ಮಸೀದಿಯ ಮುತವಲ್ಲಿ ನಯೀಮ್ ಪಟೇಲ್ ತನಗೆ ಇದು ವಂಶಪಾರಂಪರ್ಯದಿಂದ ಬಂದಿದೆ ಎನ್ನುವ ಮೂಲಕ ಅಧಿಕಾರ ದುರುಪಯೋಗ ಪಡಿಸಿದ್ದಾರೆ. ಅಲ್ಲದೆ ಲಕ್ಷಾಂತರ ರೂಪಾಯಿ ಪಡೆದು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಕಟ್ಟಡ ಕಟ್ಟಿಸಲು ಎನ್ಒಸಿ ನೀಡಿದ್ದರು. ಇದು ಕಾನೂನು ಬಾಹಿರವಾಗಿದ್ದು, ಮನಪಾ ಅಧಿಕಾರಿಗಳು ಕೂಡಾ ಸೂಕ್ತ ದಾಖಲೆ ಪತ್ರಗಳನ್ನು ಪರಿಶೀಲಿಸದೆ ಅಕ್ರಮ ಕಟ್ಟಡ ಕಟ್ಟಿಸಲು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ ಹನೀಫ್ ಪಾಜೆಪಳ್ಳ ಜಿಲ್ಲಾಧಿಕಾರಿ ಸಹಿತ ಮತ್ತಿತರರಿಗೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ವಕ್ಫ್ ಮಂಡಳಿಯಲ್ಲಿ ನಡೆಯುತ್ತಿರುವಾಗಲೇ ಕಟ್ಟಡದ ಎರಡು ಅಂಗಡಿಗಳನ್ನು ಬಾಡಿಗೆಗೆ ನೀಡಲಾಗಿತ್ತು. ಆದರೆ ವಿವಾದ ತೀವ್ರಗೊಳ್ಳುತ್ತಲೇ ಬಾಡಿಗೆದಾರರು ಕಟ್ಟಡದ ಕೋಣೆ ಬಿಟ್ಟು ಹೋದರು.
ಸಹಾಯಕ ಆಯುಕ್ತರು ಈ ಹಿಂದೆಯೇ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಆದರೆ 7 ದಿನವಾದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಇದೀಗ ಸಹಾಯಕ ಆಯುಕ್ತರು ಮತ್ತೆ ಅಕ್ರಮ ಕಟ್ಟಡವನ್ನು ನಿರ್ಮಿಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ರವಿಶಂಕರ ಮಿಜಾರು, ವಿನಿಯಾ ಅರವಿಂದಾಕ್ಷ, ಜಗದೀಶ್ ಮಿಜಾರ್, ಕೃಪಾಲಿನಿ ಉಳ್ಳಾಲ್, ಪುರುಷೋತ್ತಮ ಶೆಟ್ಟಿ ಅವರಿಗೆ ಅಂತಿಮ ನೋಟಿಸ್ ಜಾರಿಗೊಳಿಸಿ ಆ.25ರೊಳಗೆ ತೆರವುಗೊಳಿಸದಿದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.