ಕೆಲ ದಿನಗಳ ಕಾಲ ಸ್ಥಳಾಂತರಗೊಳ್ಳಿ: ನದಿ ತೀರದ ತಗ್ಗು ಪ್ರದೇಶ ನಿವಾಸಿಗಳಿಗೆ ದ.ಕ. ಜಿಲ್ಲಾಧಿಕಾರಿ ಸೂಚನೆ
ಶಾಲೆಗಳಿಗೆ ರಜೆ ನೀಡುವ ಜವಾಬ್ಧಾರಿ ತಾಲೂಕು ಬಿಇಒಗಳಿಗೆ
ಮಂಗಳೂರು, ಆ.14: ದ.ಕ. ಜಿಲ್ಲೆಯಾದ್ಯಂತ ಮಳೆ ಇನ್ನೂ ಕೆಲ ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ನದಿ ತೀರದ ತಗ್ಗುಪ್ರದೇಶಗಳ ನಿವಾಸಿಗಳು ಕೆಲ ದಿನಗಳ ತಮ್ಮ ಸಂಬಂಧಿಕರ ಮನೆಗೆ ಸ್ಥಳಾಂತಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಲಹೆ ನೀಡಿದ್ದಾರೆ.
ಇಂದು ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ಈ ಸಲಹೆ ನೀಡಿದ ಅವರು, ಜಿಲ್ಲೆಯ ಜನರು ಸದ್ಯ ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯವಿಲ್ಲ. ಆದರೆ ನದಿ ತೀರದ ತಗ್ಗು ಪ್ರದೇಶದ ಜನರು ತಮ್ಮ ಅಮೂಲ್ಯವಾದ ವಸ್ತುಗಳನ್ನು ಮನೆಯ ಎತ್ತರದ ಕಡೆಗಳಲ್ಲಿ ಇರಿಸಿ ತಮ್ಮ ಸಂಬಂಧಿಕರ ಮನೆಗೆ ಅಥವಾ ಜಿಲ್ಲಾಡಳಿತದ ಗಂಜಿ ಕೇಂದ್ರಗಳಿಗೆ ಸ್ಥಳಾಂತಗೊಳ್ಳಲು ಮನವಿ ಮಾಡಿಕೊಳ್ಳಲಾಗಿದೆ ಎಂದರು.
ನೇತ್ರಾವತಿ ಮತ್ತು ಕುಮಾರಧಾರ ನದಿ ತೀರಗಳಾದ ಬಂಟ್ವಾಳ, ಉಪ್ಪಿನಂಗಡಿಯ ತೀರ ಪ್ರದೇಶಗಳಲ್ಲಿ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಜನತೆ ತಮ್ಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಜಿಲ್ಲಾಡಳಿತದ ಜತೆ ಸಹಕರಿಬೇಕು ಎಂದು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಫಲ್ಗುಣಿಯನ್ನು ಹೊರತುಪಡಿಸಿ ನೇತ್ರಾವತಿ, ಕುಮಾರಧಾರಾ,ಶಾಂಭವಿ, ನಂದಿನಿ ನದಿಗಳು ತುಂಬಿ ಹರಿಯುತ್ತಿವೆ. ಉಪ್ಪಿನಂಗಡಿಯಲ್ಲಿ ರಾತ್ರಿ ಬೆಳಗ್ಗಿನೊಳಗೆ ಸಂಗಮ ಆಗುವ ಸಾಧ್ಯತೆ ಇದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 8.6 ಮೀಟರ್ಗೆ ಏರಿಕೆಯಾಗಿದೆ. ಮುಳುಗಡೆ ಪ್ರದೇಶಗಳಲ್ಲಿ ಈಗಾಗಲೇ ಜಿಲ್ಲಾ ಮಟ್ಟದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಪ್ರತಿ ತಾಲೂಕುಗಳಿಗೆ ಸ್ಥಳೀಯ ಅಧಿಕಾರಿಗಳನ್ನು ಹೊರತುಪಡಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪರಿಸ್ಥಿತಿಯ ಅವಲೋಕನಕ್ಕಾಗಿ, ತುರ್ತು ಪರಿಹಾರಕ್ಕಾಗಿ ನಿಯೋಜಿಸಲಾಗಿದೆ. ಬಂಟ್ವಾಳದಲ್ಲಿ ಈಗಾಗಲೇ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಮಂಗಳೂರು ತಾಲೂಕಿನಲ್ಲಿ ತಹಶೀಲ್ದಾರ್ರವರು ಪರಿಸ್ಥಿತಿ ಅವಲೋಕಿಸಿ ರಾತ್ರಿಯೊಳಗೆ ಗಂಜಿಕೇಂದ್ರ ತೆರೆಯುವ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕೇಂದ್ರ ಜಲ ಆಯೋಗವು ನದಿ ನೀರಿನ ಮಟ್ಟವನ್ನು ಪರಿಶೀಲನೆ ಮಾಡುತ್ತಿದ್ದು, ಸದ್ಯ ನಮ್ಮ ಜಿಲ್ಲೆಯ ನದಿಗಳು ಅವರ ಮೌಲ್ಯಮಾಪನದ ಪ್ರಕಾರ ಅಪಾಯಕ್ಕೊಳಪಟ್ಟಿಲ್ಲ. ಹಾಗಿದ್ದರೂ ಜಿಲ್ಲಾಡಳಿತ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಜನರಿಗೆ ನೆರವಾಗಲು 10 ಬೋಟುಗಳು ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಗಮ ನೋಡಲು, ಈಜಾಡಲು ಆತುರ ಪಡದಿರಿ
ಕೆಲವರು ಅಪೂರ್ವವಾದ ಸಂಗಮವನ್ನು ನೋಡಲು ಅತ್ಯಂತ ಕುತೂಹಲದಿಂದ ತೆರಳುತ್ತಾರೆ. ಇದು ಅಪಾಯಕಾರಿ. ಈಗಾಗಲೇ ಸಂಗಮದ ಸ್ಥಳದಲ್ಲಿ ಭದ್ರತೆಯನ್ನು ಮಾಡಲಾಗಿದೆ. ಹಾಗಿದ್ದರೂ ಸಾರ್ವಜನಿಕರು ಕೂಡಾ ಎಚ್ಚರಿಕೆ ವಹಿಸುವ ಅಗತ್ಯವಿದೆ. ಸಣ್ಣ ತೋಡು, ನಾಲಾಗಳಲ್ಲಿ ನೀರಿನ ಮಟ್ಟ, ಆಳದ ಅರಿವಿಲ್ಲದೆ ಈಜಾಡುವುದಕ್ಕೂ ಮುಂದಾಗಬಾರದು. ಪೋಷಕರು ಕೂಡಾ ತಮ್ಮ ಮಕ್ಕಳನ್ನು ಈ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಪೋಷಕರೇ ಇರಲಿ ಎಚ್ಚರ !
ಆಯಾ ತಾಲೂಕಿನಲ್ಲಿನ ಮಳೆ ಹಾಗೂ ನೆರೆಯ ಪರಿಸ್ಥಿತಿಯನ್ನು ಅವಲೋಕಿಸಿ ಸ್ಥಳೀಯ ಬಿಇಒಗಳು ಶಾಲಾ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ನಿರ್ಧರಿಸಲಿದ್ದಾರೆ. ಪೋಷಕರು ಕೂಡಾ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಸಂದರ್ಭ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲೋಕಿಸುವುದು ಅತ್ಯಗತ್ಯ. ಶಾಲೆಗಳ ಆಡಳಿತ ಮಂಡಳಿಯೂ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಈ ಬಾರಿ ದಾಖಲೆ ಮಳೆ!
ದ.ಕ. ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಜನವರಿಯಿಂದ ಈ ದಿನದವರೆಗೆ 2779.9 ಮಿ.ಮೀ. ವಾಡಿಕೆ ಮಳೆಯಾಗಿದೆ. ಆದರೆ ಈವರೆಗೆ 3,564 ಮಿ.ಮೀ. ಮಳೆಯಾಗುವ ಮೂಲಕ ಶೇ.128ರಷ್ಟು ಮಳೆ ದಾಖಲಾಗಿದೆ.
ಜಿಲ್ಲೆಯಲ್ಲಿ ಮಳೆಯಿಂದ ಈವರೆಗೆ 11 ಜೀವಹಾನಿಯಾಗಿದ್ದು, 11 ಜಾನುವಾರುಗಳ ಜೀವಹಾನಿಯಾಇಗದೆ. ಸುಮಾರು 1,292 ಮನೆಗಳಿಗೆ ಹಾನಿಯಾಗಿದ್ದು, ಇದರಲ್ಲಿ 983 ಪಕ್ಕಾ ಮನೆ ಹಾಗೂ 309 ಕಚ್ಚಾ ಮನೆಗಳಾಗಿವೆ.
ಮೀನುಗಾರಿಕೆಗೆ ತೆರಳದಂತೆ ಸೂಚನೆ
ಮುಂದಿನ 24 ಗಂಟೆಗಳಲ್ಲಿ ಕರಾವಳಿ ಪ್ರದೇಶದಲ್ಲಿ ಯಾವುದೇ ಮೀನುಗಾರರು ಮೀನುಗಾರಿಕೆಗೆ ಸಮುದ್ರ ಅಥವಾ ನದಿ ಪಾತ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಈಗಾಗಲೇ ಸಮುದ್ರದಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದವರು ಗುಂಪಿನಲ್ಲಿ ಹಿಂತಿರುವಂತೆ ಸೂಚಿಸಲಾಗಿದೆ. ಇಂದು ಕೂಡಾ ನಮ್ಮ ಕರಾವಳಿಯಲ್ಲಿ ಮಲ್ಪೆಯ ಎರಡು ದೋಣಿಗಳನ್ನು ರಕ್ಷಿಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಹಾಯಕ್ಕೆ 1077 ಸಂಖ್ಯೆಗೆ ಕರೆ ಮಾಡಿ
ಸಾರ್ವಜನಿಕರು ಯಾವುದೇ ರೀತಿಯ ತೊಂದರೆಯಾದಲ್ಲಿ ನೆರವಿಗಾಗಿ ಜಿಲ್ಲಾಡಳಿತದ ವಿಪತ್ತು ನಿರ್ವಹಣಾ ಕೇಂದ್ರದ ಉಚಿತ ಸಂಖ್ಯೆ 1077 ಸಂಖ್ಯೆಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶಿರಾಡಿ, ಚಾರ್ಮಾಡಿಯಲ್ಲಿ ವಾಹನ ಸಂಚಾರ ಆರಂಭ
ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ರಷ್ಟ್ರೀಯ ಹೆದ್ದಾರಿಗಳ ಪೈಕಿ ಶಿರಾಡಿ ಘಾಟ್ ಮತ್ತು ಸಂಪಾಜೆ ಘಾಟ್ ಪ್ರದೇಶದಲ್ಲಿ ರಸ್ತೆಯ ಮೇಲೆ ಮಣ್ಣು ಕುಸಿದ ಪ್ರಕರಣ ನಡೆದಿತ್ತು. ಸದ್ಯ ಶಿರಾಡಿ ಹಾಗೂ ಚಾರ್ಮಾಡಿ ಘಾಟಿ ರಸ್ತೆಗಳಲ್ಲಿ ಉಂಟಾಗಿದ್ದ ಅಡೆತಡೆಗಳು ನಿವಾರಣೆಗೊಂಡು ವಾಹನ ಸಂಚಾರ ನಿಧಾನ ಗತಿಯಲ್ಲಿ ಆರಂಭವಾಗಿದೆ.
ಸಂಪಾಜೆ ಘಾಟ್ ಮೂಲಕ ರಸ್ತೆ ಪ್ರಯಾಣ ಮಾಡದಂತೆ ಹಾಗೂ ಬದಲಿ ರಸ್ತೆಯಾಗಿ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಪ್ರಯಾಣಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.
ಜಿಲ್ಲೆಗೆ ಎನ್ಡಿಆರ್ಎಫ್ ತಂಡ
ಜಿಲ್ಲೆಯಲ್ಲಿ ಮಳೆ ಪ್ರವಾಹದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್)ಗೆ ಬೇಡಿಕೆ ಸಲ್ಲಿಸಲಾಗಿದ್ದು, ಇಂದು ರಾತ್ರಿ ಅಥವಾ ನಾಳೆ ಮುಂಜಾನೆಯೊಳಗೆ ತಂಡ ಜಿಲ್ಲೆಗೆ ತಲುಪಲಿದೆ ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದರು.