ತುಂಬಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ಯುವಕರ ಹುಚ್ಚು ಸಾಹಸ ಪ್ರದರ್ಶನ !
ಬಂಟ್ವಾಳ, ಆ. 14: ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಇಲ್ಲಿನ ನೇತ್ರಾವತಿ ನದಿ ಅಪಾಯದ ಮಟ್ಟದತ್ತ ತುಂಬಿ ಹರಿಯುತ್ತಿದ್ದು, ಈ ನದಿಯ ನೀರಿನಲ್ಲಿ ಯುವಕರು ಈಜಾಟ, ನೀರಾಟ ಆಡುವ ಮೂಲಕ ಹುಚ್ಚು ಸಾಹಸ ಪ್ರದರ್ಶನಕ್ಕೆ ಮುಂದಾಗುತ್ತಿದ್ದ ದೃಶ್ಯ ಕಂಡುಬಂತು.
ನೇತ್ರಾವತಿ ಬಹಳಷ್ಟು ಭಯಾನಕವಾಗಿ ಹರಿಯುತ್ತಿದ್ದು, ಯಾವುದೇ ಹಂತದಲ್ಲಿ ಅಪಾಯ ಸಂಭವಿಸುವ ಲಕ್ಷಣಗಳು ಕಂಡು ಬರುತ್ತಿದೆ. ಈ ನಡುವೆ ಸ್ಥಳೀಯ ಈಜುಪಟು ಯುವಕರು ಹಳೆ ಉಕ್ಕಿನ ಸೇತುವೆಯ ಮೇಲ್ಭಾಗದಿಂದ ನೇರವಾಗಿ ತುಂಬಿ ಹರಿಯುತ್ತಿರುವ ನೇತ್ರಾವತಿ ನದಿ ನೀರಿಗೆ ಧುಮುಕುತ್ತಿರುವ ಭಯಾನಕ ದೃಶ್ಯದ ವೀಡಿಯೊ ಸಂಜೆಯ ವೇಳೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಈಜುಪಟು ಯುವಕರ ಸಾಹಸ ಪ್ರದರ್ಶನದಿಂದ ಪ್ರೇರಿತಗೊಂಡ ಕೆಲ ಅಪ್ರಾಪ್ತ ಬಾಲಕರು ಕೂಡಾ ಇಂತಹದೇ ಸಾಸಹಕ್ಕೆ ಮುಂದಾಗುತ್ತಿರುವುದು ಕಂಡು ಬಂತು. ಇಂತಹ ಅಪಾಯಕಾರಿ ಸಾಹಸಕ್ಕೆ ಯುವಕರು ಮುಂದಾಗುತ್ತಿರುವ ಬಗ್ಗೆ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಹಿರಿಯರು ಆಗ್ರಹಿಸಿದ್ದಾರೆ.
ಬಂಟ್ವಾಳದಲ್ಲಿ ನೇತ್ರಾವತಿ ನದಿಯು ಮಟ್ಟ ಅಪಾಯದಲ್ಲಿದ್ದು, ಕುತೂಹಲ ಭರಿತರಾಗಿ ನೀರಿಗೆ ಇಳಿಯುದಾಗಲಿ ಅಥವಾ ತೆಂಗಿನಕಾಯಿ, ಮರ ಹಿಡಿಯುದಾಗಲಿ, ಪಾಣೆಮಂಗಳೂರು ಸೇತುವೆಯ ನದಿಯಲ್ಲಿ ಈಜಾಟ ಮಾಡಬಾರದು. ಈ ರೀತಿಯಲ್ಲಿ ಹುಚ್ಚು ಸಾಹಸ ಮಾಡಿದರೆ, ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುವುದು. ಈ ಬಗ್ಗೆ ಜನರು ಸ್ವಯಂ ಮನಸ್ಸಿನಿಂದ ಜಾಗೃತರಾಗಬೇಕು.
-ಟಿ.ಡಿ.ನಾಗರಾಜ್, ಬಂಟ್ವಾಳ ವೃತ್ತ ನಿರೀಕ್ಷಕ