ಉಪ್ಪೂರು: ನೆರೆ ಪೀಡಿತ ಪ್ರದೇಶಗಳಿಗೆ ಸಚಿವೆ ಡಾ.ಜಯಮಾಲಾ ಭೇಟಿ
ಉಡುಪಿ, ಆ.15: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಇಂದು ಬಹ್ಮಾವರದ ಉಪ್ಪೂರು ವ್ಯಾಪ್ತಿಯಲ್ಲಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪ್ಪೂರು ವ್ಯಾಪ್ತಿಯ ಕೆ.ಜಿ.ರೋಡ್, ಕುದ್ರುಬೆಟ್ಟು, ಹೆರೆಬೆಟ್ಟು ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಜಲಾವೃತ ಪ್ರದೇಶದ ನಿವಾಸಿಗಳಿಗೆ ಎಲ್ಲಾ ರೀತಿಯ ಸಹಾಯ ಸಹಾಕಾರವನ್ನು ಜಿಲ್ಲಾಡಳಿತ ಒದಗಿಸಲಿದೆ, ಜನರು ಧೈರ್ಯದಿಂದ ಇರುವಂತೆ ಸಚಿವೆ ಈ ಸಂದರ್ಭದಲ್ಲಿ ಸ್ಥಳೀಯರಿಗೆ ಮನವಿ ಮಾಡಿದರು.
ಅವಶ್ಯಕ ಸಂದರ್ಭದಲ್ಲಿ ಜನತೆ ಸ್ಥಳೀಯಾಡಳಿತವನ್ನು ಸಂಪರ್ಕಿಸುವಂತೆ ಸಚಿವೆ ಸೂಚಿಸಿದರು.
ಇದೇ ವೇಳೆ ಜಿಲ್ಲಾಡಳಿತ ಕೂಡ ನೆರೆ ಪೀಡಿತ ಪ್ರದೇಶಗಳ ಬಗ್ಗೆ ನಿಗಾ ಇರಿಸಿದೆ ಎಂದು ಸಚಿವೆ ಸ್ಥಳೀಯರಿಗೆ ಧೈರ್ಯ ತುಂಬಿದರು.
ಶಾಲೆಗೆ ಭೇಟಿ
ಜಲಾವೃತಗೊಂಡಿರುವ ಉಪ್ಪೂರು ಹೆರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಚಿವೆ ಡಾ.ಜಯಮಾಲಾ ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದರು. ಶಾಲೆಯ ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಸಚಿವರು ತಹಶೀಲ್ದಾರು ಅವರಿಗೆ ನಿರ್ದೇಶನ ನೀಡಿದರು. ನೆರೆಪೀಡಿತ ಎಲ್ಲಾ ಪ್ರದೇಶದ ಜನರಿಗೂ ಆಹಾರ ಪೂರೈಕೆಗೆ ತೊಂದರೆಯಾಗದಂತೆ ನಿಗಾ ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವಶ್ಯಕ ಸಂದರ್ಭದಲ್ಲಿ ನೆರೆಪೀಡಿತ ಪ್ರದೇಶದ ಜನರನ್ನು ಸ್ಥಳಾಂತರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಶೌಚಾಲಯ ನಿರ್ಮಾಣಕ್ಕೆ ಆದೇಶ
ನೆರೆಪೀಡಿತ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಸಂಪ ಪೂಜಾರಿ ಎಂಬವರ ಮನೆಗೆ ಶೌಚಾಲಯ ಇಲ್ಲದಿರುವುದು ಸಚಿವರ ಗಮನಕ್ಕೆ ಬಂತು. ಈ ಬಗ್ಗೆ ಸಂಪ ಪೂಜಾರಿ ಹಾಗೂ ಅವರ ಪುತ್ರನಲ್ಲಿ ಸ್ವತು ಸಚಿವೆ ಅವರೇ ವಿಚಾರಿಸಿ, ನಿಮ್ಮ ಮನೆಗೆ ಶೌಚಾಲಯ. ಇದೆಯೇ ಎಂದು ವಿಚಾರಿಸಿದರು. ಈ ಸಂದರ್ಭದಲ್ಲಿ ತಾನು ಬಡವನಾಗಿದ್ದು, ಶೌಚಗೃಹ ಕಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬೇಸರದಿಂದ ಹೇಳಿಕೊಂಡರು. ಸಂಪ ಪೂಜಾರಿ ಅವರ ನೋವು ಆಲಿಸಿದ ಸಚಿವೆ ಡಾ.ಜಯಮಾಲಾ, ನೆರೆ ನೀರು ಇಳಿದ ತಕ್ಷಣ ಇವರಿಗೆ ಸರಕಾರಿ ಯೋಜನೆಯ ಮೂಲಕ ಶೌಚಾಲಯ ನಿರ್ಮಿಸಿಕೊಡಬೇಕೆಂದು ಸ್ಥಳದಲ್ಲಿಯೇ ತಹಶೀಲ್ದಾರ್ ಅವರಿಗೆ ಆದೇಶ ನೀಡಿದರು. ಶೌಚಾಲಯ ಕಟ್ಟಿಕೊಡಲು ಯಾವುದೇ ರೀತಿಯಲ್ಲಿಯೂ ವಿಳಂಬವಾಗದಂತೆ ನೋಡಿಕೊಳ್ಳಬೇಕೆಂದು ತಹಶೀಲ್ದಾರ್ ಅವರನ್ನು ಮತ್ತೊಮ್ಮೆ ಸಚಿವರು ನೆನಪಿಸಿದರು.
ಸಚಿವರು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್, ಶಾಲಿನಿ ಪುರಂದರ್, ಜಯಶ್ರೀ ಕೃಷ್ಣರಾಜ್, ಚಂದ್ರಿಕಾ ಶೆಟ್ಟಿ, ರಮೇಶ್ ಕುಂದರ್, ರಮೇಶ್ ಕರ್ಕೇರ, ಉಪ್ಪೂರು ಪಂಚಾಯತ್ ಅಧ್ಯಕ್ಷೆ ಆರತಿ, ತಹಶೀಲ್ದಾರ್ ಪ್ರದೀಪ್, ಕೃಷಿ ಇಲಾಖೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮೊದಲಾದವರು ಜೊತೆಗಿದ್ದರು.