ಸ್ವಾತಂತ್ರ ಸಂಗ್ರಾಮ ಕುರಿತ ‘ನೆನೆ ನೆನೆ ಆ ದಿನವಾ’ ಕೃತಿ ಬಿಡುಗಡೆ
ಉಡುಪಿ, ಆ.15: ಹಿರಿಯರು ಹೋರಾಟ ನಡೆಸಿ ದೇಶಕ್ಕೆ ತಂದುಕೊಟ್ಟ ಸ್ವಾತಂತ್ರವನ್ನು ಕೇವಲ ಧ್ವಜಾರೋಹಣದಿಂದ ಉಳಿಸಿಕೊಳ್ಳಲು ಆಗುವುದಿಲ್ಲ. ನಾವು ಇನ್ನೊಬ್ಬರನ್ನು ಅನುಸರಿಸಿಕೊಂಡು ಹೋಗದೆ ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಂಡಾಗ ಮಾತ್ರ ನಮಗೆ ದೊರೆತ ಸ್ವಾತಂತ್ರಕ್ಕೆ ಬೆಲೆ ಬರಲು ಸಾಧ್ಯ ಎಂದು ಅದಮಾರು ಮಠಾಧೀಶ ಶ್ರೀವಿ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞಾ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗ ಮತ್ತು ಸಾಂಸ್ಕೃತಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕಾಲೇಜಿನ ಮಿನಿ ಸಭಾಂಗಣದಲ್ಲಿ ಲೇಖಕ ಹಾಗೂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ರಾವ್ ಸಿದ್ದಾಪುರ ಅವರ ‘ನೆನೆ ನೆನೆ ಆ ದಿನವಾ’(ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ರ ಸಂಗ್ರಾಮ) ಕೃತಿಯನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡುತಿದ್ದರು.
ಅಂದಿನ ದಿನಕ್ಕೂ ಇಂದಿನ ದಿನಕ್ಕೂ ಹಗಲು ರಾತ್ರಿಯ ವ್ಯತ್ಯಾಸ ಇದ್ದು, ಅದರ ಪರಿಣಾಮವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಮಕ್ಕಳಲ್ಲಿ ದೇಶ ಭಕ್ತಿ ಮೂಡಬೇಕು. ಈ ಬಗ್ಗೆ ಎಚ್ಚರಿಕೆ ಮೂಡಿದಾಗ ಮಾತ್ರ ಭಾರತವು ರಾಮರಾಜ್ಯ ಆಗಲು ಸಾಧ್ಯ. ಹಿರಿಯ ಶ್ರಮವನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರಜ್ಞೆ ನಮ್ಮಲ್ಲಿ ಮೂಡಬೇಕು ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ವಹಿಸಿ ದ್ದರು. ಸ್ವಾತಂತ್ರ ಹೋರಾಟಗಾರ ಬಂಟಕಲ್ ಲಕ್ಷ್ಮೀ ನಾರಾಯಣ ಶರ್ಮರ ಪುತ್ರ, ಪ್ರಗತಿಪರ ಕೃಷಿಕ ರಾಮಕೃಷ್ಣ ಶರ್ಮ ಮುಖ್ಯ ಅತಿಥಿಯಾಗಿದ್ದರು. ಲೇಖಕ ಡಾ.ಶ್ರೀಕಾಂತ್ ರಾವ್ ಸಿದ್ದಾಪುರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಮಂಜುನಾಥ ಕರಬ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.