ಸುಳ್ಯ: ವಿದ್ಯುತ್ ಆಘಾತದಿಂದ ಲೈನ್ ಮ್ಯಾನ್ ಮೃತ್ಯು
ಸುಳ್ಯ, ಆ. 15: ವಿದ್ಯುತ್ ಕಂಬ ದುರಸ್ಥಿ ವೇಳೆ ವಿದ್ಯುತ್ ಆಘಾತದಿಂದ ಲೈನ್ ಮ್ಯಾನ್ ಮೃತಪಟ್ಟ ಘಟನೆ ಸುಳ್ಯ ಸಮೀಪದ ಬೊಳಿಯಮಜಲಿನಲ್ಲಿ ಬುಧವಾರ ನಡೆದಿದೆ.
ಆಲೆಟ್ಟಿ ಗ್ರಾಮದ ಪರಿವಾರಕಾನ ರಾಮಣ್ಣ ನಾಯ್ಕ ಎಂಬವರ ಪುತ್ರ ಜನಾರ್ಧನ ನಾಯ್ಕ (48) ಮೃತರು ಎಂದು ಗುರುತಿಸಲಾಗಿದೆ.
ಸುಳ್ಯ ಮೆಸ್ಕಾಂನ ಹೊರಗುತ್ತಿಗೆ ಆಧಾರದಲ್ಲಿ ಕಳೆದ 20 ವರ್ಷಗಳಿಂದ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜತೆಯಲ್ಲಿ ಸಹೋದರ ಹರೀಶ್ ನಾಯ್ಕ ಅವರು ಸಹ ಕೆಲಸ ಮಾಡುತ್ತಿದ್ದರು. ಆದರೆ ಬುಧವಾರ ಸಂಜೆ ವೇಳೆ ಜಟ್ಟಿಪಳ್ಳ ಸಮೀಪದ ಬೊಳಿಯಮಜಲಿನಲ್ಲಿ ಜನಾರ್ಧನ ನಾಯ್ಕ ಮತ್ತು ಅವರ ಸಹೋದರ ಹರೀಶ್ ನಾಯ್ಕ ಅವರು ಜತೆಯಲ್ಲಿ ಎಚ್ಟಿ ಲೈನ್ನಲ್ಲಿ ಬೆಳಗ್ಗಿನಿಂದಲೇ ಕೆಲಸ ಮಾಡುತ್ತಿದ್ದರು. ಅವಘಡ ಸಂಭವಿಸಿದ್ದ ಸಂದರ್ಭ ಸಹೋದರರಿಬ್ಬರೂ ಒಂದೇ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದರು. ಹರೀಶ್ ನಾಯ್ಕ ಕಂಬದ ಮಧ್ಯ ಭಾಗದಲ್ಲಿದ್ದು, ಜನಾರ್ಧನ ನಾಯ್ಕ ಅವರು ಕಂಬದ ತಂತಿಯನ್ನು ದುರಸ್ಥಿ ಮಾಡುತ್ತಿದ್ದರು. ಈ ಸಂದರ್ಭ ವೇಳೆ ಮೆಸ್ಕಾಂ ಖಾಯಂ ಲೈನ್ಮೆನ್ ಏಕಾಏಕಿ ಚಾರ್ಜ್ ಮಾಡಿದಾಗ ಜನಾರ್ಧನ ನಾಯ್ಕ ವಿದ್ಯುತ್ ಸ್ಪರ್ಶದಿಂದ ಶರೀರ ಸಂಪೂರ್ಣ ಸುಟ್ಟು ಹೋಗಿ ವಿದ್ಯುತ್ ಕಂಬದಲ್ಲೇ ಸಾವನ್ನಪ್ಪಿದರು.
ಈ ಬಗ್ಗೆ ಮಾಹಿತಿ ಅರಿತ ಸುಳ್ಯ ಮೆಸ್ಕಾಂ ಎಇಇ ಹರೀಶ್ ನಾಯ್ಕ ಮತ್ತು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿ ಪರೀಕ್ಷೆ ಮಾಡಲಾಯಿತು. ಸುಳ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಜನಾರ್ಧನ ನಾಯ್ಕ ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.