ಚಾರ್ಮಾಡಿ ಘಾಟ್ ಸಂಚಾರಕ್ಕೆ ಮುಕ್ತ: ಶಿರಾಡಿ, ಸಂಪಾಜೆ ಘಾಟ್ ಸ್ಥಗಿತ
ಮಂಗಳೂರು, ಆ.15: ಚಾರ್ಮಾಡಿ ಘಾಟ್ ವಾಹನಗಳ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಭಾರೀ ಮಳೆ, ಭೂಕುಸಿತದಿಂದಾಗಿ ಶಿರಾಡಿ ಹಾಗೂ ಸಂಪಾಜೆ ಘಾಟ್ಗಳು ಸ್ಥಗಿತಗೊಂಡಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ನೇತ್ರಾವತಿ, ಕುಮಾರಧಾರಾ ನದಿ ಪಾತ್ರದಲ್ಲಿ ತಗ್ಗು ಪ್ರದೇಶದ ಜನರು ಎತ್ತರ ಪ್ರದೇಶಗಳಿಗೆ ತೆರಳಬೇಕು. ಎಂದಿನಂತೆ ಶಾಲಾ -ಕಾಲೇಜುಗಳು ನಡೆಯುತ್ತವೆ. ಮಳೆಯ ಪ್ರಮಾಣ ಹೆಚ್ಚಾದಲ್ಲಿ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು ರಜೆ ಘೋಷಿಸಬಹುದಾಗಿದೆ.
ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದ ಹಾನಿ, ಅವಘಡ ಸಂಭವಿಸಿದಲ್ಲಿ 1077 ಸಹಾಯವಾಣಿಯನ್ನು ಸಂಪರ್ಕಿಸಿ, ದೂರು ನೀಡಬಹುದಾಗಿದೆ.
ದ.ಕ.: ಮೀನುಗಾರರಿಗೆ ಎಚ್ಚರಿಕೆ
ದ.ಕ. ಜಿಲ್ಲಾದ್ಯಂತ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆ (204 ಮಿ.ಮೀ.)ಯಾಗುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರದಲ್ಲಿ 3ರಿಂದ 4 ಮೀಟರ್ನಷ್ಟು ಅಲೆಗಳು ಎತ್ತರದಲ್ಲಿ ಅಪ್ಪಳಿಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.