ಬಂಟ್ವಾಳ: ತಗ್ಗು ಪ್ರದೇಶಗಳಿಗೆ ಮತ್ತೆ ನುಗ್ಗಿದ ನೆರೆ
ಬಂಟ್ವಾಳ, ಆ.16: ಒಂದು ದಿನದ ಬಿಡುವಿನ ಬಳಿಕ ಗುರುವಾರ ಬೆಳಗ್ಗೆ ಮತ್ತೆ ಬಂಟ್ವಾಳದ ತಗ್ಗು ಪ್ರದೇಶಗಳಿಗೆ ಹಾಗೂ ನದಿ ತೀರದ ರಸ್ತೆಗಳಲ್ಲಿ ನೇತ್ರಾವತಿ ನದಿ ನೀರು ನುಗ್ಗಿದೆ.
ಇಂದು ಬೆಳಗ್ಗೆ ಎಂದಿನಂತೆಯೇ ಸಮೀಪದ ಶಾಲೆಗಳಿಗೆ ಹೊರಟ ಮಕ್ಕಳು ಮೆಟ್ಟಿಲಿಳಿಯುವ ಹೊತ್ತಿನಲ್ಲಿ ಭಾರೀ ಮಳೆ ಎದುರಾಗಿದೆ. ಇದೇ ವೇಳೆ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಇಂದು (ಆ.16) ತಹಶೀಲ್ದಾರ್ ಪುರಂದರ ಹೆಗ್ಡೆ ರಜೆ ಘೋಷಿಸಿದ್ದಾರೆ.
ತಾಲೂಕಿನ ಬಹುತೇಕ ಕಡೆಗಳಲ್ಲಿ ಇಂದು ಮುಂಜಾನೆಯಿಂದಲೇ ಭಾರೀ ಗಾಳಿ-ಮಳೆಯಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನದಿ ತೀರವಾಸಿಗಳಿಗೆ ಎಚ್ಚರದಿಂದ ಇರುವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ.
ಬಂಟ್ವಾಳ, ಪಾಣೆಮಂಗಳೂರಿನ ನದಿ ತೀರದ ರಸ್ತೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಳಿಸಿದ್ದ ನೇತ್ರಾವತಿ ನದಿ ನೀರು ನಿನ್ನೆ ಸಂಜೆ ಕೊಂಚ ಇಳಿಕೆ ಕಂಡಿತ್ತು. 10.4 ಮೀಟರ್ ಎತ್ತರದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನೇತ್ರಾವತಿ ನದಿ ನಿನ್ನೆ 7ರಿಂದ 8 ಮೀಟರ್ ಆಸುಪಾಸಿಗೆ ಇಳಿಕೆ ಕಂಡಿತ್ತು. ಆದರೆ ಗುರುವಾರ ಬೆಳಗ್ಗೆ ಮತ್ತೆ ಏರಿಕೆಯಾಗಿರುವ ನೀರಿನ ಮಟ್ಟ ಬೆಳಗ್ಗೆ 7 ಗಂಟೆ ಸುಮಾರಿಗೆ 8.6 ಮೀಟರ್ ತಲುಪಿ ಅಪಾಯದ ಮಟ್ಟಕ್ಕೆ (ಮೀಟರ್)ಬಂದಿದೆ.
ವಿದ್ಯುತ್ ಸರಬರಾಜಿನಲ್ಲೂ ಆಗಾಗ ವ್ಯತ್ಯಯವಾಗುತ್ತಿದ್ದು, ಒಟ್ಟಾರೆಯಾಗಿ ಮಳೆಯಬ್ಬರಕ್ಕೆ ಸಿಲುಕಿ ಬಂಟ್ವಾಳದ ಜನತೆ ತತ್ತರಿಸಿದ್ದಾರೆ.