ಎನ್.ಆರ್.ಪುರದಲ್ಲಿ 10 ಅಡಿಯಷ್ಟು ಕುಸಿದ ರಸ್ತೆ
ಚಿಕ್ಕಮಗಳೂರು, ಆ.16: ಮಲೆನಾಡಿನಲ್ಲಿ ಆಶ್ಲೇಷ ಮಳೆಯ ಆರ್ಭಟ ಜೋರಾಗಿದ್ದು, ರಾಜ್ಯ ಹೆದ್ದಾರಿ ಸೇರಿದಂತೆ ಹಲವೆಡೆ ರಸ್ತೆಗಳು ಭಾರೀ ಪ್ರಮಾಣದಲ್ಲಿ ಕುಸಿದಿರುವುದು ವರದಿಯಾಗಿದೆ.
ಎನ್.ಆರ್.ಪುರ ತಾಲೂಕಿನ ಮೇಲ್ಪಾಲ್ ಗ್ರಾಮ ಸಮೀಪ ರಸ್ತೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಮೇಲ್ಪಾಲ್-ಹೊಡ್ಸಲು ಗ್ರಾಮದ ಮಧ್ಯೆ ಈ ಘಟನೆ ಸಂಭವಿಸಿದ್ದು, ಸುಮಾರು ಹತ್ತು ಅಡಿ ಆಳಕ್ಕೆ 300 ಮೀಟರ್ ವರೆಗೂ ರಸ್ತೆ ಕುಸಿತ ಕಂಡಿದೆ. ಇದರಿಂದ ಸುತ್ತಮುತ್ತಲು ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ.
ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆ
ಮೂಡಿಗೆರೆ ತಾಲೂಕಿನ ಕಳಸ ಸಮೀಪವಿರುವ ಹೆಬ್ಬಾಳೆ ಸೇತುವೆ ಮತ್ತೊಮ್ಮೆ ಮುಳುಗಡೆಯಾಗಿದೆ. ಕಳೆದ 42 ದಿನಗಳಲ್ಲಿ ಈ ಸೇತುವೆ 15ನೇ ಬಾರಿ ಮುಳುಗಡೆಯಾಗಿದೆ. ಕುದುರೆಮುಖ, ಕಳಸ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಭದ್ರೆ ಹರಿದು ಬರುತ್ತಿರುವ ನೀರಿನ ಹರಿವಿನಲ್ಲಿ ಭಾರಿ ಹೆಚ್ಚಳವಾಗಿದೆ. ಕಳಸ ಹೊರನಾಡು ಸಂಪರ್ಕ ಸೇತುವೆ ಕೂಡಾ ಬಂದ್ ಆಗಿದೆ.
ಕೊಪ್ಪ ತಾಲೂಕಿನ ಸಮೀಪದ ಗುಡ್ಡೆತೋಟದ ರಸ್ತೆ ಭಾರೀ ಬಿರುಕು ಬಿಟ್ಟಿದೆ. ಇದು ನಾಲ್ಕು ಗ್ರಾಮಗಳಿಗೆ ಸಂಚಾರ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ನಾಲ್ಕೈದು ಕಡೆಗಳಲ್ಲಿ ಬಿರುಕು ಬಿಟ್ಟಿದೆ. ಕಳೆದೆರಡು ದಿನಗಳ ಹಿಂದೆ ಬಿರುಕುಬಿಟ್ಟಿದ್ದ ರಸ್ತೆ ಇದೀಗ ನಾಲ್ಕೈದು ಕಡೆ ಬಿರುಕು ಕಾಣಿಸಿಕೊಂಡಿದೆ.
ಚಿಕ್ಕಮಗಳೂರು -ಶೃಂಗೇರಿ ಹೆದ್ದಾರಿಯಲ್ಲಿ ನೆರೆ ನೀರಿನಿಂದಾಗಿ ಮಣ್ಣು ಕುಸಿಯುತ್ತಿದ್ದು, ವಾಹನ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ.