ಪುತ್ತೂರು: ಗಾಳಿ ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು
ಪುತ್ತೂರು,ಆ.16: ಬುಧವಾರ ರಾತ್ರಿ ಬೀಸಿದ ಬಾರೀ ಗಾಳಿ ಮಳೆಗೆ ಪುತ್ತೂರಿನ ಹಲವಾರು ಕಡೆಗಳಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದು ಹಾನಿಯಾಗಿದೆ.
ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮುಕ್ರಂಪಾಡಿ ಎಂಬಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಮರವು ವಿದ್ಯುತ್ ಕಂಬದ ಮೇಲೆ ಬಿದ್ದ ಕಾರಣ 2 ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಇದರಿಂದಾಗಿ ಸಂಪ್ಯ, ಮೊಟ್ಟೆತ್ತಡ್ಕ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಮರ ಉರುಳಿ ಬಿದ್ದ ಪರಿಣಾಮವಾಗಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಬಳಿಕ ಅರಣ್ಯ ಇಲಾಖೆ ಮತ್ತು ಸ್ಥಳೀಯರು ಸೇರಿ ಮರವನ್ನು ತೆರುವಗೊಖಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಪುತ್ತೂರು ತಾಲೂಕಿ ಬಲ್ನಾಡು ಗ್ರಾಮದ ಕರ್ಕುಂಜ ಎಂಬಲ್ಲಿ ಮತ್ತು ವಿದ್ಯುತ್ ಕಂಬ ರಸ್ತೆಗೆ ಉರುಳಿ ಬಿದ್ದ ಪರಿಣಾಮವಾಗಿ ರಸ್ತೆ ಸಂಚಾರಕ್ಕೆ ತೊಡಕಾಯಿತು ಹಾಗೂ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
ಚೆಲ್ಯಡ್ಕ ಸೇತುವೆ ಮುಳುಗಡೆ:
ಬಾರಿ ಮಳೆಗೆ ಪುತ್ತೂರು- ಪಾಣಾಜೆ ಸಂಪರ್ಕದ ಚೆಲ್ಯಡ್ಕ ಸೇತುವೆ ಮತ್ತೆ ಮುಳುಗಡೆಯಾಗಿದೆ. ಇದರಿಂದಾಗಿ ಈ ಭಾಗದ ಪ್ರಯಾಣಿಕರು ಮಾಣಿ ಮೈಸೂರು ರಾಜ್ಯ ರಸ್ತೆಯ ಮೂಲಕ ಸಾಗಿ ಸಂಟ್ಯಾರ್, ರೆಂಜ ಮೂಲಕ ಸುತ್ತು ಬಳಸಿ ಸಾಗಬೇಕಾಯಿತು.
ಮನೆ ಮೇಲೆ ಧರೆ ಕುಸಿತ:
ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರ ಎಂಬಲ್ಲಿ ಮನೆಯೊಂದರ ಮೇಲೆ ಧರೆ ಕುಸಿದು ಬಿದ್ದು ಹಾನಿಯಾಗಿದೆ. ಇಲ್ಲಿನ ಪ್ರಫುಲ್ಲ ಸುಬ್ರಹ್ಮಣ್ಯ ರಾವ್ ಎಂಬವರ ನೂತನವಾಗಿ ನಿರ್ಮಿಸಿದ ವಾಸದ ಮನೆಯ ಮೇಲೆ ಸಮೀಪದ ಧರೆ ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ, ಗ್ರಾಮ ಕರಣಿಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.